ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿಕೊಂಡಿರುವ 20 ಆಸ್ಪತ್ರೆಗಳು ಮಾತ್ರವಲ್ಲದೇ ಇತರೆ ಖಾಸಗಿ ಆಸ್ಪತ್ರೆಗಳೂ ಸಹ ಎಬಿಆರ್ಕೆ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ನೊಂದಾಯಿಸಿರುವ ಆಸ್ಪತ್ರೆಗಳಲ್ಲಿ ನಾಳೆಯಿಂದಲೇ ಬೆಡ್ ಗಳ ವ್ಯವಸ್ಥೆ ಸಿದ್ದಪಡಿಸಿಟ್ಟುಕೊಂಡು, ಜಿಲ್ಲಾಡಳಿತ ಕಳುಹಿಸುವ ಕೋವಿಡ್-19 ರೋಗಿಗಳನ್ನು ತಕ್ಷಣದಲ್ಲೇ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು. ರೋಗಿಗೆ ಬೆಡ್ ಇಲ್ಲ ಎಂದು ನಿರಾಕರಿಸುವಂತಿಲ್ಲ , ನಿರಾಕರಿಸಿದ್ದಲ್ಲಿ ನೊಂದಣಿ ರದ್ದುಪಡಿಸುವುದರೊಂದಿಗೆ ಎಪಿಡಮಿಕ್ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಕೋವಿಡ್ ಚಿಕಿತ್ಸೆಗೆ ನೊಂದಾಯಿಸಿರುವ ಆಸ್ಪತ್ರೆಗಳು , ಕೋವಿಡ್-19 ಚಿಕಿತ್ಸೆ ಮಾತ್ರವಲ್ಲದೇ ಮಹಿಳೆ ಮತ್ತು ಮಕ್ಕಳ ಚಿಕಿತ್ಸೆಗೆ ಸಹ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ತಿಳಿಸಿದರು. ಇತ್ತೀಚೆಗೆ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿರುವವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ರೋಗ ಲಕ್ಷಣ ಗಳಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕಳೆದ ವಾರದಿಂದ ಪ್ರತಿದಿನ ಸರಾಸರಿ 700 ಜನರ ಪರೀಕ್ಷೆ ನಡೆಸುತ್ತಿದ್ದು, ಪಾಸಿಟಿವ್ ಪ್ರಮಾಣ ಅಧಿಕವಾಗುತ್ತಿದೆ, ಸೋಂಕಿತರ ಪ್ರಾಥಮಿಕ ಸಂಪರ್ಕ , ಐಎಲ್ಐ ಮತ್ತು ಸಾರಿ ಯಲ್ಲಿ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಕೋವಿಡ್ 19 ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್ ಮಾತನಾಡಿ, ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ, ಬಳಸಲಾಗಿರುವ ಸಂಖ್ಯೆ , ಖಾಲಿ ಇರುವ ಸಂಖ್ಯೆ , ಮೀಸಲಿಟ್ಟಿರುವ ಸಂಖ್ಯೆ ಹಾಗೂ ವೆಂಟಿಲೇಟರ್, ಐಸಿಯುಗಳ ಸಂಖ್ಯೆಯನ್ನು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.