ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ – ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ

ಉಡುಪಿ: ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಗ್ಲುಕೋಮಾ ಸಪ್ತಾಹವನ್ನು ಪ್ರತಿವರ್ಷ ಮಾರ್ಚ್ ಎರಡನೇ ವಾರದಲ್ಲಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಗ್ಲುಕೋಮಾ ಸಪ್ತಾಹ 2023 ರ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. “ವಿಶ್ವ ಪ್ರಕಾಶಮಾನವಾಗಿದೆ, ನಿಮ್ಮ ದೃಷ್ಟಿಯನ್ನು ಉಳಿಸಿಕೊಳ್ಳಿ ” ಎಂಬ ಧ್ಯೇಯ ವಾಕ್ಯದಿಂದ ಇದನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂದರೆ ನಿಯಮಿತ ಪರೀಕ್ಷೆಯೊಂದಿಗೆ ಜನರು ನಮ್ಮ ಸುತ್ತಲಿನ ಪ್ರಪಂಚವನ್ನು ನೋಡುತ್ತಲೇ ಇರುತ್ತಾರೆ ಎಂಬ ಭರವಸೆಯನ್ನು ಇದು ಪ್ರತಿಬಿಂಬಿಸುತ್ತದೆ.

ಕೆ ಎಂ ಸಿ ಮಣಿಪಾಲದ ಡೀನ್ ಡಾ ಪದ್ಮರಾಜ ಹೆಗ್ಡೆ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, “ ಗ್ಲುಕೋಮಾ ಒಂದು ನಿಶ್ಯಬ್ದ ದೃಷ್ಟಿ ಚೋರ, ನಿಧಾನವಾಗಿ ಸಂಪೂರ್ಣ ದೃಷ್ಟಿಯ ನಾಶಕ್ಕೆ ಕಾರಣವಾಗುತ್ತದೆ. ವಿಶ್ವ ಗ್ಲುಕೋಮಾ ಸಪ್ತಾಹವು ವಿಶ್ವದಾದ್ಯಂತ ತಡೆಗಟ್ಟಬಹುದಾದ, ಬದಲಾಯಿಸಲಾಗದ ಅಂಧತ್ವದ ಕುರಿತು ಗಮನ ಸೆಳೆಯುವ ಒಂದು ವಿಶಿಷ್ಟ ಅಭಿಯಾನವಾಗಿದೆ . ಈ ಗ್ಲುಕೋಮಾ ಕಾಯಿಲೆ ಇರುವ ಬಗ್ಗೆ ಅರಿವೇ ಇಲ್ಲದವರು , ಈ ಕಾಯಿಲೆಗೆ ಹೇಗೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಯದವರೂ ಸಾಕಷ್ಟಿದ್ದಾರೆ ಎಂದರು. ಆದ್ದರಿಂದ ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗ್ಲುಕೋಮಾ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು. ಡಾ.ಜಿ.ಅರುಣ್ ಮಯ್ಯ , ಡೀನ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಅವರು ಗ್ಲುಕೋಮಾ ಕುರಿತಾದ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ಗ್ಲುಕೋಮಾ ಸಪ್ತಾಹ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಕರಿಗೆ ಪ್ರಶಂಸಾ ಪತ್ರ ವಿತರಿಸಿದರು. ಡಾ ಆನಂದ್ ವೇಣುಗೋಪಾಲ್, ಮುಖ್ಯ ನಿರ್ವಹಣಾಧಿಕಾರಿಗಳು , ಬೋಧನಾ ಆಸ್ಪತ್ರೆಗಳು, ಮಾಹೆ ಮಣಿಪಾಲ ಉಪಸ್ಥಿತರಿದ್ದರು.

ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ ಯೋಗೀಶ್ ಎಸ್ ಕಾಮತ್ ಅವರು ಸ್ವಾಗತಿಸಿ, ಇಂದು ಗ್ಲುಕೋಮಾ ಚಿಕಿತ್ಸಾ ಶಿಬಿರ ಇಲ್ಲಿ ನಡೆಯುತ್ತಿದ್ದು ಮಾರ್ಚ್ 15ರಂದು ಡಾ ಟಿ ಎಂ ಎ ಪೈ ಉಡುಪಿಯಲ್ಲಿ ಮತ್ತು ಮಾರ್ಚ್ 17ರಂದು ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಕುರಿತು ಅವಲೋಕನ ನೀಡಿದ ನೇತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನೀತಾ ಕೆಐಆರ್ ಅವರು ಗ್ಲುಕೋಮಾವನ್ನು ಆರಂಭಿಕ ಹಂತದಲ್ಲಿ ಪತ್ತೆಯ ಮಹತ್ವದ ಕುರಿತು ಮಾತನಾಡಿದರು. ಆಪ್ಟೋಮೆಟ್ರಿ ವಿಭಾಗ ಮುಖ್ಯಸ್ಥರಾದ ಡಾ. ಕೃತಿಕಾ ಎಸ್ ವಂದಿಸಿದರು. 500 ಕ್ಕೂ ಹೆಚ್ಚು ಜನರು ಇಂದಿನ ಶಿಬಿರದ ಪ್ರಯೋಜನ ಪಡೆದುಕೊಂಡರು.

 
 
 
 
 
 
 
 
 
 
 

Leave a Reply