ಉಡುಪಿ: ಪ್ರಥಮ ಸೆಮಿಸ್ಟರ್ ಬಿಬಿಎ ಪಠ್ಯಕ್ಕೆ ಸಂಬಂಧಿಸಿದ ಪ್ರಿನ್ಸಿಪಲ್ಸ್ ಆಫ್ ಇಕೊನೊಮೊಕ್ಸ್ ಪುಸ್ತಕವನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಿಡುಗಡೆ ಗೊಳಿಸಿದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಘಟಕದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಆಶೀರ್ವಚಿಸಿದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಿಕ್ಷಕರು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಕೃತಿಗಳನ್ನು ನೀಡುವುದರ ಮೂಲಕ ಸಮಾಜ ಹಾಗೂ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಶ್ರಮಿಸಬೇಕು.
ತರಗತಿಯಲ್ಲಿ ಅಧ್ಯಯನಕ್ಕೆ ನಿಗದಿಪಡಿಸಿದ ವಿಷಯಗಳನ್ನು ಸರಳ ಹಾಗೂ ಸುಲಭವಾಗಿ ಬರವಣಿಗೆಯ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಲೇಖಕರ ಪ್ರಯತ್ನ ಸ್ತುತ್ಯರ್ಹ ಎಂದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಸೌಜನ್ಯ ಶೆಟ್ಟಿ. ಎಂ. ಹಾಗೂ ಮಂಗಳೂರಿನ ಸಂತ ಎಲೋಸಿಯಸ್ ಸಂಧ್ಯಾ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಬಿ.ಹನ್ಸ್ ಈ ಕೃತಿಯನ್ನು ರಚಿಸಿದ್ದರು.
ಅಭ್ಯಾಗತರಾಗಿ ಆಗಮಿಸಿದ್ದ ಕಾಲೇಜಿನ ಗೌರವ ಕೋಶಾಧಿಕಾರಿ ಶ್ರೀ ಪ್ರದೀಪ್ಕುಮಾರ್ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅರ್ಥ ಶಾಸ್ತ್ರವು ಒಂದಲ್ಲ ಒಂದು ರೀತಿಯಲ್ಲಿ ಪ್ರಾಶಸ್ತ್ಯ ಪಡೆದಿದೆ. ವಿದ್ಯಾರ್ಥಿಗಳು ಅರ್ಥ ಶಾಸ್ತ್ರದತ್ತ ಒಲವನ್ನು ಹೊಂದಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ.. ಎ. ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ, ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೇಖಕಿ ಡಾ. ಸೌಜನ್ಯ ಶೆಟ್ಟಿ ಪ್ರಾಸ್ರಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಅರ್ಥ ಶಾಸ್ತ್ರದ ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು. ಉಪನ್ಯಾಸಕಿ ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.