ಸಂಗೀತದಿಂದ ಸಹಜ ಸಂತೋಷ~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಸಂಗೀತದಿಂದ ಸಹಜ ಸಂತೋಷ: ಹಿರಿಯರಿಂದ ಬಂದಂತಹ ಶಾಸ್ತ್ರೀಯ ಸಂಗೀತದಂತಹ ಕಲೆಗಳನ್ನು ಅಭ್ಯಸಿಸಿ, ಅನುಭವಿಸಿ, ಜೀವನದಲ್ಲಿ ಸಹಜ ಸಂತೋಷವನ್ನು ಪಡೆಯೋಣ. ಕ್ಷಣಿಕ ಸುಖ ಕೊಡುವ ವಿಷಯಗಳು ಜಾರು ಬಂಡಿಯಂತೆ ನಿಮ್ಮನ್ನು ಖುಷಿ ಪಡಿಸುತ್ತಾ ದೊಡ್ಡ ಪ್ರಪಾತಕ್ಕೆ ದೂಡಿ ಬಿಡುತ್ತದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಚ್ಚರಿಕೆ ನೀಡಿದರು.

ಅವರು ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿಜಯ ದಶಮಿ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇನ್ನೋರ್ವ ಮುಖ್ಯ ಅತಿಥಿ ಡಾ.ಮಹಾಬಲೇಶ್ವರ ರಾವ್, ಸ್ವರಗಳ ಮೂಲಕ ಪರಿಸರವನ್ನು ಸ್ವಚ್ಛ ಗೊಳಿಸುವುದು ಸಂಗೀತದಿಂದ ಸಾಧ್ಯ. ಸಂಗೀತ ಒಂದು ವಿಶ್ವ ಭಾಷೆ. ವಿದ್ಯುನ್ಮಾನದ ಸಹಾಯದಿಂದ ಸಂಗೀತ ಇಂದು ಎಲ್ಲರೂ ಕಲಿಯಲು ಸಾಧ್ಯವಾಗುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ, ಇದು ಸಂಗೀತದ ಪ್ರಜಾಪ್ರಭುತ್ವೀಕರಣ ಎಂದು ಅಭಿಪ್ರಾಯಪಟ್ಟರು.

ಸಂಗೀತದಿಂದ ದೊರಕುವುದು ಬ್ರಹ್ಮಾನಂದ ಹಾಗೂ ಅನುಭಾವಿಕತೆಯ ಸ್ಪರ್ಶ, ಅದನ್ನು ವರ್ಣಿಸಲು ಅಸಾಧ್ಯ, ಸಂಗೀತ ಆಧ್ಯಾತ್ಮಿಕವಾದ್ದು ಹಾಗೂ ದೈವಿಕವಾದದ್ದು ಎಂದು ಅಭಿಪ್ರಾಯಪಟ್ಟರು. ಶುಕ್ರವಾರ ಬೆಳಿಗ್ಗೆ 7.45ರಿಂದ ರಾತ್ರಿ 8 ನಿರಂತರ ಸಂಗೀತ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ ಗುರುಗಳಿಂದ ಸಂಗೀತ ಪಾಠ, ಮಧ್ಯಾಹ್ನ ವೇದಘೋಷ, ಸರಸ್ವತಿ ಪೂಜೆ ನಡೆಯಿತು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿದ್ಯಾಲಯದ ಮಕ್ಕಳಿಂದ ಪಿಳ್ಳಾರಿ ಗೀತೆಗಳು, ಎಲ್ಲಾ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ, ಹಲವಾರು ಕಿರಿಯ ಕಲಾವಿದರಿಂದ ಕಛೇರಿಗಳು, ವಿದುಷಿ ಶ್ರೀಮತಿ ಲತಾತಂತ್ರಿಯವರಿಂದ ಪ್ರಧಾನ ಕಛೇರಿ ನಡೆಯಿತು.

 
 
 
 
 
 
 
 
 
 
 

Leave a Reply