ಕನ್ನಡ ಚಲನಚಿತ್ರ ‘ಗುಬಿ೯’ ಇದೇ ಬರುವ ಡಿಸೆಂಬರ್ 24ರಿಂದ ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಚಲನಚಿತ್ರದ ನಿರ್ದೇಶಕ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕರಾದ ಕೃಷ್ಣಪ್ಪ ಉಪ್ಪೂರು.
ಈ ಚಿತ್ರ ಕಲಾತ್ಮಕವಾಗಿ ಮೂಡಿಬಂದಿದ್ದು ,ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗದ ಹೆಣ್ಣಿನ ಬದುಕಿನ ಸುತ್ತ ಹೆಣೆದ ಕಥೆಯಾಗಿದೆ. ಉಡುಪಿ ಹಾಗೂ ಚಿಕ್ಕಮಂಗಳೂರಿನ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರವು ಚಿತ್ರೀಕರಣಗೊಂಡಿದೆ”
‘ಗುಬಿ೯’ ಕನ್ನಡ ಚಲನಚಿತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕರಾವಳಿ ಪ್ರದೇಶಗಳ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಗುಡ್ಡಗಾಡು ಜನಾಂಗದವರ ಬದುಕು ಮತ್ತು ಬವಣೆಗಳ ಸುತ್ತ ಹೆಣೆಯಲಾಗಿದೆ, ಶತಮಾನಗಳಿಂದ ಈ ಬಡಪಾಯಿ ಜನಾಂಗದವರನ್ನು ಮೇಲ್ವರ್ಗದವರು ಹೇಗೆ ಶೋಷಣೆ ಮಾಡುತ್ತ ಅವರ ಬದುಕಿನೊಂದಿಗೆ ಚೆಲ್ಲಾಟ ವಾಡುತ್ತಾರೆ ಎಂಬುದನ್ನು ಗುಬಿ೯ ಅನ್ನುವ ಕಿಶೋರಿಯ ಸುತ್ತ ಚಿತ್ರೀಕರಿಸಲಾಗಿದೆ.
ಬದುಕಿನ ಬೆಲೆಯನ್ನೇ ಅರ್ಥೈಸಲಾಗದ ಮುಗ್ಧ ಹುಡುಗಿ ಮೇಲ್ವರ್ಗದವರ ಶೋಷಣೆಯ ನಡುವೆ ಯಾವ ಸ್ಥಿತಿ ಮುಟ್ಟುತ್ತಾಳೆ ಎಂಬ ಕುತೂಹಲ ದೊಂದಿಗೆ ಮುಂದುವರೆದು ಕೊನೆಗೆ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತದೆ.
ಈ ಚಿತ್ರವನ್ನು ಸಾಮಾಜಿಕ ಕಳಕಳಿಯಿಂದ ಮಾರ್ಮಿಕವಾಗಿ ಚಿತ್ರೀಕರಿಸಿ ಬಡವರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ತಿಳಿಸಿದ್ದಾರೆ.
ನಿರ್ಮಾಪಕರಾಗಿ ಮೀರಾ ಕೆ. ಉಪ್ಪೂರು, ಕಲೆ ಜೀವನ್ ರಾಂ ಸುಳ್ಯ, ಛಾಯಾಗ್ರಹಣ ವೀನಸ್ ಮೂರ್ತಿ, ಸಂಕಲನ ಕೆ. ಎಂ ಪ್ರಕಾಶ್, ನೃತ್ಯದಲ್ಲಿ ಹರಿಣಿ ಮದನ್, ಸಹನಿರ್ದೇಶನ ರವಿರಾಜ್ ಹೆಚ್ ಪಿ ನೀಡಿದ್ದು , ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಗೀತ ರಚನೆಗೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದಾರೆ.
ಖ್ಯಾತ ರಂಗಭೂಮಿ ಕಲಾವಿದರಾದ ಕೀರ್ತಿರಾಜ್, ಮಂಡ್ಯ ರಮೇಶ್, ಜೀವನ್ ರಾಂ ಸುಳ್ಯ, ಅಶ್ವಿತಾ, ಸುನಿಲ್ ,ರವಿರಾಜ್ ಹೆಚ್ ಪಿ, ರೇವತಿ ನಾಡಿಗೇರ್, ರಂಜಿತಾ ಶೆಟ್ ಅನಿರುದ್ಧ್ ಪಣಿಯಾಡಿ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ.