ಬೆಂಗಳೂರು: ಒಂಬತ್ತರ ಪೋರ. ಕ್ಯಾಮೆರಾ ಹೆಗಲೇರಿಸಿದರೆ ಛಾಯಾಗ್ರಹಣದಲ್ಲಿ ಬಲು ಧೀರ. ಎಳೆವೆಯಲ್ಲಿಯೇ ಅಂತಾರಾಷ್ಟ್ರೀಯ ಮನ್ನಣೆ. ಇವನ ಸಾಧನೆ ಉಡುಪಿಗೂ ಒಂದು ಕೀರ್ತಿ. ಯಾಕಂತೀರಾ ..ಇಲ್ಲಿ ನೋಡಿ
ಉಡುಪಿ ಮೂಲದ ಬೆಂಗಳೂರು ನಿವಾಸಿ, 9 ವರ್ಷದ ಬಾಲಕನೊಬ್ಬ ವನ್ಯಜೀವಿ ಛಾಯಾಗ್ರಾಹಣ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರಿತಿಸಿಕೊಳ್ಳುವ ಮೂಲಕ ಎಲ್ಲೆಡೆ ಶ್ಲಾಘನೆಗೆ ಪಾತ್ರನಾಗಿದ್ದಾನೆ.
ಬೆಂಗಳೂರಿನ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ವಿದ್ಯುನ್ ಆರ್ ಹೆಬ್ಬಾರ್, ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆ ಕಳೆದ 56 ವರ್ಷಗಳಿಂದಲೂ ನಡೆಯುತ್ತಿದೆ. ಸ್ಪರ್ಧೆಯಲ್ಲಿ 10ವರ್ಷದೊಳಗಿನ ವಿಭಾಗದಲ್ಲಿ ವಿದ್ಯುನ್ ತೆಗೆದ ಫೋಟೋ ಪ್ರಶಸ್ತಿ ಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ವೈಲ್ಡ್ ಲೈಫ್ ಫೋಟೋಗ್ರಫಿಯ ಆಸ್ಕರ್ ಎಂತಲೂ ಹೇಳಲಾಗುತ್ತದೆ.
ವಿದ್ಯುನ್ ಹಸಿರು ಮಾಯವಾಗಿ ಕಾಂಕ್ರಿಟ್ ಕಾಡಿನಿಂದಲೇ ತುಂಬಿರುವ ಬೆಂದಕಾಳೂರಿನಲ್ಲಿ ಜೇಡರ ಹುಳುವೊಂದು ನಾಲ್ಕು ದಿಕ್ಕುಗಳಲ್ಲಿಯೂ ಝಡ್ ಆಕೃತಿಯ ಎಳೆಗಳನ್ನು ಬಿಡಿಸಿ, ಅದರ ಮಧ್ಯೆದಲ್ಲಿ ಜೇಡ ನಿಂತಿರುವ ದೃಶ್ಯವನ್ನು, ತನ್ನ ನಿಕಾನ್ ಡಿ5000 + 85 ಎಂಎಂ ಲೆನ್ಸ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.
ಈ ಚಿತ್ರವನ್ನು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯ್ಕೆ ಮಾಡಿದ್ದು ಈ ಸಂಸ್ಥೆ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಗೆ ವಿಶ್ವಾ ದಾದ್ಯಂತ ಫೋಟೋಗಳನ್ನು ಆಹ್ವಾನಿಸುತ್ತದೆ. ಕಳೆದ ಡಿಸೆಂಬರ್ನಲ್ಲಿ 100 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಫೋಟೋಗಳು ಬಂದಿದ್ದವು. ಮೊದಲೆರಡು ಸುತ್ತಿನ ಬಳಿಕ ಅಂತಿಮ ಸುತ್ತಿನಲ್ಲಿ ವಿದ್ಯುನ್ ಫೋಟೋ ಆಯ್ಕೆಗೊಂಡಿದೆ.
ವಿದ್ಯುನ್ ಅವರ ತಂದೆ ರವಿಪ್ರಕಾಶ್ ಕೂಡ ಮೂಲತ ಛಾಯಾಗ್ರಹಣದ ಹವ್ಯಾಸ ಬೆಳೆಸಿಕೊಂಡವರು. 2014ರಲ್ಲಿ ವನ್ಯಜೀವಿ ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು. ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಮಗನನ್ನು ಲಂಡನ್ಗೆ ಕರೆದುಕೊಂಡು ಹೋಗಿದ್ದರು, ಬಹುಶಃ ಅದು ವಿದ್ಯುನ್ಗೆ ಪ್ರೇರಣೆಯಾಗಿರಬಹುದು ಎಂದು ರವಿಪ್ರಕಾಶ್ ಹೇಳುತ್ತಾರೆ.ಅಪ್ಪನೇ ನನಗೆ ಗಾಡ್ ಫಾದರ್: ಅಪ್ಪನನ್ನು ನೋಡಿ ನಾನು ಫೋಟೋ ತೆಗೆಯುವುದನ್ನು ಕಲಿತಿದ್ದೇನೆ. ಚಿಟ್ಟೆಗಳು, ಸಣ್ಣ ಸಣ್ಣ ಪ್ರಾಣಿಗಳು, ಪಕ್ಷಿಗಳ ಫೋಟೋ ತೆಗೆದಿದ್ದೇನೆ. ಈಗ ಪ್ರಶಸ್ತಿ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾನೆ ಈ ಪೂರ.