ಶ್ರೀ ವಿಶ್ವೇಶತೀರ್ಥರ 82 ನೇ ಪೀಠಾರೋಹಣ ವರ್ಧಂತಿ ಸಂಸ್ಮರಣೆ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠೆ ಸಮಯ ಶ್ರೀ ವಿಶ್ವೇಶತೀರ್ಥರೊಂದಿಗೆ ನಾನಿದ್ದದ್ದು ನನ್ನ ಜನ್ಮದ ಭಾಗ್ಯ : ಮುಖ್ಯಮಂತ್ರಿ

1992 ರಲ್ಲಿ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಬಳಿಕ ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾವಿರಾರು ಸಾಧು ಸಂತರು ಲಕ್ಷಾಂತರ ಕರಸೇವಕರ ಸಮ್ಮುಖದಲ್ಲಿ ಆ ಶೆಡ್ ನಲ್ಲಿ ಶ್ರೀ ರಾಮ ಲಲ್ಲಾನ ವಿಗ್ರಹವನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರತಿಷ್ಠೆ ಮಾಡಿದ ಸಂದರ್ಭ ನಾನೂ ಅಲ್ಲಿದ್ದು ಅದಕ್ಕೆ ಸಾಕ್ಷಿಯಾದದ್ದು ನನ್ನ ಈ ಜನ್ಮದ ಮಹಾಭಾಗ್ಯ ಎಂದು ಮುಖ್ಯಮಂತ್ರಿ ಬಿ‌ಎಸ್ ಯಡ್ಯೂರಪ್ಪನವರು ಹೇಳಿದ್ದಾರೆ .

ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 82 ನೇ ಸನ್ಯಾಸ ಪೀಠಾರೋಹಣ ವರ್ಧಂತಿ ಸಂಸ್ಮರಣಾರ್ಥ ಬೆಂಗಳೂರು ಕತ್ರಿಗುಪ್ಪೆಯ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀಗಳ ವೃಂದಾವನ ಸನ್ನಿಧಿಯಲ್ಲಿ ಗುರುವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

8 ವರ್ಷದ ಎಳೆಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ 80 ವರ್ಷಗಳ ಸುದೀರ್ಘ ಅವಧಿಗೆ ದ್ವೈತ ವೇದಾಂತ ಸಾಮ್ರಾಜ್ಯ ವನ್ನು ಪರಿಶುದ್ಧ ಚಾರಿತ್ರ್ಯ, ಕಠಿಣ ತಪಸ್ಸು ಸ್ವಾಧ್ಯಾಯ , ವಿದ್ವತ್ತು ಹಾಗೂ ಮಾನವೀಯ ಕಳ ಕಳಿಯ ಅಸಂಖ್ಯ ಸೇವಾಕಾರ್ಯಗಳಿಂದ ಯಶಸ್ವಿಯಾಗಿ ಮುನ್ನಡೆಸಿ ಕೋಟ್ಯಂತರ ಭಕ್ತರ ಶ್ರದ್ಧೆ ನಂಬಿಕೆಗೆ ಪಾತ್ರರಾದ ಶ್ರೀ ವಿಶ್ವೇಶತೀರ್ಥರು ಈ ದೇಶ ಕಂಡ ಮಹಾನ್ ಯೋಗಿ, ಸಾಧಕ ಯತಿ ಎಂದು ಬಣ್ಣಿಸಿದರು.

 ಸಭಾಕಾರ್ಯಕ್ರಮಕ್ಕೆ ಮೊದಲು ವಿದ್ಯಾಪೀಠ ಆವರಣದಲ್ಲಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೂತನ ವೃಂದಾವನ ದರ್ಶನ ಪಡೆದು ಶ್ರೀ ವಿಶ್ವಪ್ರಸನ್ನತೀರ್ಥರು ನೆರವೇರಿಸಿದ ಮಂಗಳಾರತಿಯನ್ನು ವೀಕ್ಷಿಸಿ ಭಕ್ತಿ ಸಮರ್ಪಣೆಗೈದರು.

ಈ ಸಂದರ್ಭ ಪೇಜಾವರ ಶ್ರೀಗಳು ಮಾತನಾಡಿ ಗುರುಗಳೊಂದಿಗೆ ಯಡ್ಯೂರಪ್ಪನವರಿಗಿದ್ದ ಸುದೀರ್ಘ ಒಡನಾಟ ಬಾಂಧವ್ಯ, ರಾಮಜನ್ಮಭೂಮಿ ಆಂದೋಲನದಲ್ಲಿ ಅವರಿಬ್ಬರೂ ಜೊತೆಯಾಗಿ ಭಾಗವಹಿಸಿದ್ದು ಮತ್ತು ಅಧಿಕಾರ ದಲ್ಲಿದ್ದಾಗಲೆಲ್ಲ ಉಡುಪಿಯ ಅಭಿವೃದ್ಧಿಗೆ ಹಾಗೂ ಉಡುಪಿ ಮಠಗಳಿಗೆ ವಿಶೇಷ ಸಹಕಾರ ನೀಡಿದ್ದನ್ನು ಸ್ಮರಿಸಿ ಕೊಂಡರು. 

ಕಳೆದ ವರ್ಷ ಗುರುಗಳ ಅನಾರೋಗ್ಯದ ಹೊತ್ತಲ್ಲಿ ಉಡುಪಿಯಲ್ಲೇ ಇದ್ದು ಗುರುಗಳು ವಿಧವಶರಾದ ಬಳಿಕ ಉಡುಪಿಯಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ಅವರ ಅಂತ್ಯಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ಸರಕಾರಿ ಗೌರವಗಳ ಸಹಿತ ನಡೆಸುವಲ್ಲಿ ಮುಖ್ಯಮಂತ್ರಿಗಳು ನೀಡಿದ ಸಹಕಾರವನ್ನು ಉಲ್ಲೇಖಿಸಿ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿಗೆ ಶಾಸನಸಭೆಯಲ್ಲಿ ಅಂಗೀಕಾರ ಪಡೆದು ಕೋಟ್ಯಂತರ ಹಿಂದೂಗಳ ಗೋಪ್ರೇಮಿಗಳ ಆಗ್ರಹಕ್ಕೆ ಮನ್ನಣೆ ನೀಡಿರುವುದಕ್ಕೆ ತುಂಬು ಮನಸ್ಸಿನಿಂದ ಅಭಿನಂದಿಸಿದರು. ಈ ಕಾನೂನನ್ನು ಅತ್ಯಂತ ಪರಿಣಾಮ ಕಾರಿಯಾಗಿ ಅನುಷ್ಟಾನಕ್ಕೆ ತರಬೇಕು ಎಂದು ಒತ್ತಾಯಿಸುತ್ತೇವೆ ಮತ್ತು ಗೋಹತ್ಯಾ ನಿಷೇಧದಷ್ಟೆ ಗೋರಕ್ಷಣೆಯ ಕಾರ್ಯಗಳಿಗೂ ಬಲತುಂಬ ಬೇಕೆಂದು ಒತ್ತಾಯಿಸಿದ ಶ್ರೀಗಳು.

ಕೋವಿಡ್ ವಿಪತ್ತಿನ ಹೊತ್ತಿನಲ್ಲಿ ಅತ್ಯಂತ ತಾಳ್ಮೆಯಿಂದ ಇಡೀ ರಾಜ್ಯ ಆ ವಿಪರೀತ ಪರಿಸ್ಥಿತಿ ಯನ್ನು ಸಮರ್ಥವಾಗಿ ಎದುರಿಸಲು ಮತ್ತು ರಾಜ್ಯದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಬಹಳ ಶ್ರಮ ಪಟ್ಟು ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳನ್ನು ವಿಶೇಷವಾಗಿ ಪ್ರಶಂಸಿಸಿದರು. ಮುಖ್ಯಮಂತ್ರಿಗಳಿಗೆ ಶಾಲು ಫಲಪುಷ್ಪ ಪ್ರಸಾದ ಸಹಿತ ಸಂಮಾನಿಸಿದರು.

ಶಾಸಕರಾದ ರವಿಸುಬ್ರಹ್ಮಣ್ಯ, ಕೆ ರಘುಪತಿ ಭಟ್ ಉಪಸ್ಥಿತರಿದ್ದರು, ವಿದ್ವಾನ್ ಪ್ರಭಂಜನಾಚಾರ್ಯ ಪ್ರಸ್ತಾವನೆಗೈದರು. ವಿದ್ಯಾಪೀಠದ ಪರವಾಗಿ ವ್ಯವಸ್ಥಾಪಕರಾದ ಕೇಶವಾಚಾರ್ಯ, ವಿದ್ವಾಂಸರಾದ ಆನಂದತೀರ್ಥ ಆಚಾರ್ ನಾಗಸಂಪಿಗೆ, ಸತ್ಯನಾರಾಯಣಾಚಾರ್ಯ, ಬದರೀನಾಥಾಚಾರ್ಯ, ಗುರುರಾಜ ಕಲ್ಕೂರ್ ಹಾಗೂ ಶ್ರೀಗಳವರ ಆಪ್ತರಾದ ಕೃಷ್ಣ ಭಟ್ ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಮುಖ್ಯ ಮಂತ್ರಿಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡರು .

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಎಲ್ಲ ರೀತಿಯ ಸಹಕಾರ ನೀಡುವಂತೆ ಅಪೇಕ್ಷಿಸಿ ಶ್ರೀಗಳವರು ಮುಖ್ಯಮಂತ್ರಿಗಳಿಗೆ ಪತ್ರಕವನ್ನು ನೀಡಿದರು .

 
 
 
 
 
 
 
 
 
 
 

Leave a Reply