ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಇಂದು ಅತ್ಯಂತ ವೈಭವದಿಂದ ಸರಳವಾಗಿ ನಡೆಯಿತು. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದ್ದ ಮೆರವಣಿಗೆಯು ಈ ಬಾರಿ ಅರಮನೆ ಆವರಣದಲ್ಲಿಯೇ 400 ಮೀಟರ್ ಸಾಗಿ ಸಮಾಪ್ತಿಗೊಂಡಿದೆ.
ಅಭಿಮನ್ಯು ಆನೆ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಗಾಂಭೀರ್ಯದಿಂದ ನಡೆದದ್ದು, ರೋಮಾಂಚನ ಉಂಟು ಮಾಡಿತು. ಈ ರೀತಿಯಾಗಿ ವಿಶ್ವವೇ ತಿರುಗಿ ನೋಡುವ ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಸಡಗರದಿಂದ ನಡೆದಿದೆ .
ಅಂಬಾರಿ ಏರಿ ಆಗಮಿಸಿದ ತಾಯಿ ಚಾಮುಂಡಿಗೆ ಸಿಎಂ ಯಡಿಯೂರಪ್ಪ, ಮೇಯರ್, ಜಿಲ್ಲಾಧಿಕಾರಿ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್ ಪುಷ್ಪಾರ್ಚನೆ ಗೈದರು.ಈ ಪುಷ್ಪಾರ್ಚನೆ ನೆರವೇರಿದ ಕೂಡಲೇ ಸಂಪ್ರದಾಯದ ಪ್ರಕಾರ ಕುಶಲ ತೋಪುಗಳನ್ನು ಸಿಡಿಸಲಾಯ್ತು. ನಂತರ ಮೆರವಣಿಗೆಯಲ್ಲಿ ಅಭಿಮನ್ಯು ಹೊರಟು, ಗಜ ಗಾಂಭೀರ್ಯದಿಂದ ಮುಂದೆ ಸಾಗುತ್ತಿದ್ದರೆ ಗೋಪಿ ಹಾಗೂ ವಿಜಯ ಆನೆಗಳು ಅಭಿಮನ್ಯು ಒಂದಿಗೆ ಸಾಗಿದವು.
ಇನ್ನು ಸಾವಿರಾರು ಕಲಾವಿದರನ್ನು, ಕಲಾತಂಡಗಳನ್ನು ಒಳಗೊಂಡು ಪ್ರತಿ ವರ್ಷ ಸಾಗುತ್ತಿದ್ದ ಜಂಬೂ ಸವಾರಿಯ ಮೆರವ ಣಿಗೆ, ಈ ಬಾರಿ ಸರಳವಾಗಿ ಕೆಲವೇ ತಂಡಗಳೊಂದಿಗೆ 30 ರಿಂದ 40 ನಿಮಿಷಗಳಲ್ಲಿ ಕೇವಲ 400 ಮೀಟರ್ ಕ್ರಮಿಸಿ ಸಮಾಪ್ತಿಯಾಯಿತು.