ಎಲ್ಲ ವರ್ಗಗಳ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ: ಯಶ್ಪಾಲ್ ಸುವರ್ಣ

ಸುದೀರ್ಘ ಅವಧಿಗೆ ದೇಶವನ್ನಾಳಿದ ಕಾಂಗ್ರೆಸ್ ಕೇವಲ ಮತ ಬ್ಯಾಂಕಿಗಾಗಿ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯವನ್ನು ಬಳಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ‘ಸಬ್ಕೇ ಸಾಥ್ ಸಬ್ಕಾ ವಿಕಾಸ್’ ಮೂಲ ಮಂತ್ರದೊಂದಿಗೆ ಎಲ್ಲ ವರ್ಗಗಳ ಜನತೆಯ ಕಲ್ಯಾಣಕ್ಕೆ ನಾಂದಿ ಹಾಡಿ ಜನರ ಮನಸ್ಸನ್ನು ಗೆದ್ದಿದೆ. ಎಲ್ಲ ವರ್ಗಗಳ ಏಳಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಹೇಳಿದರು.

ಅವರು ಕುತ್ಪಾಡಿಯ ನವಚೇತನ ಯುವಕ ಮಂಡಲದ ಸಭಾಭವನದಲ್ಲಿ ನಡೆದ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ದಾಖಲೆಯ ಅಭಿವೃದ್ಧಿ ಮತ್ತು ವಿನೂತನ ಯೋಜನೆಗಳ ಮೂಲಕ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ತಮ್ಮ ಆಡಳಿತಾವಧಿಯಲ್ಲಿ ಜನಹಿತವನ್ನು ಮರೆತ ಕಾಂಗ್ರೆಸ್ ಇತರ ರಾಜ್ಯಗಳಲ್ಲಿ ನೀಡಿದ ಭರವಸೆಯನ್ನು ಪೂರೈಸಲು ವಿಫಲವಾಗಿ ಇದೀಗ ಕರ್ನಾಟಕದಲ್ಲೂ ನಕಲಿ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಜನರ ದಾರಿತಪ್ಪಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಅಭಿವೃದ್ಧಿಗೆ ಇನ್ನೊಂದು ಹೆಸರು ಬಿಜೆಪಿ ಎಂಬಂತೆ ನೂರಾರು ಜನಪರ ಯೋಜನೆಗಳ ಮೂಲಕ ಮನೆ ಮನೆ ತಲುಪಿರುವ ಬಿಜೆಪಿ ಗೆಲುವು ಶತಸಿದ್ಧ ಎಂದು ಯಶ್ಪಾಲ್ ಸುವರ್ಣ ಹೇಳಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ ರಾಜ್ಯದ ಡಬಲ್ ಎಂಜಿನ್ ಸರಕಾರದ ಸಾಧನೆಗಳು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಯಶ್ಪಾಲ್ ಸುವರ್ಣರವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ನವ ಉಡುಪಿ ನಿರ್ಮಾಣದ ಕೈಂಕರ್ಯವನ್ನು ಇನ್ನಷ್ಟು ಎತ್ತರಕ್ಕೇರಿಸಲು ಜನತೆ ಯಶ್ಪಾಲ್ ಸುವರ್ಣರವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟು, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಅಂಬಲಪಾಡಿ-ಕಡೆಕಾರು ಮಹಾಶಕ್ತಿ ಕೇಂದ್ರದ ಸಂಚಾಲಕ ರಾಜೇಂದ್ರ ಪಂದುಬೆಟ್ಟು, ಮಾಜಿ ತಾ.ಪಂ. ಸದಸ್ಯೆ ಶಿಲ್ಪಾ ರವೀಂದ್ರ ಕೋಟ್ಯಾನ್, ಶಕ್ತಿ ಕೇಂದ್ರ ಅಧ್ಯಕ್ಷ ಅಶೋಕ್ ಬಂಡಾರಿ, ಬೂತ್ ಅಧ್ಯಕ್ಷರು, ಕಡೆಕಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply