​ಬೆಳಗಾವಿಯಲ್ಲಿ ​ಜಾರಕಿಹೊಳಿ ಸಹೋದರರ ​​ಆಳ್ವಿಕೆ​ಯನ್ನು ಮುರಿದ ಬಿಜೆಪಿ ​

ಗೋಕಾಕಿನ ಪ್ರಭಾವಿ ಜಾರಕಿಹೊಳಿ ಕುಟುಂಬದ ಯಾವುದೇ ಒಬ್ಬ ಸದಸ್ಯನಿಲ್ಲದೆ ರಾಜ್ಯ ಸಚಿವ ಸಂಪುಟ ರಚನೆ ಆಗುವುದಿಲ್ಲ ಅನ್ನುವ ಮಾತಿದೆ. ಆದರೆ ಬಿಜೆಪಿ ಜಾರಕಿಹೊಳಿ ಕುಟುಂಬವನ್ನು ಹೊರಗಿಟ್ಟು ಕ್ಯಾಬಿನೆಟ್ ರಚಿಸಿದೆ. ಕಳೆದ 17 ವರ್ಷಗಳಲ್ಲಿ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬದ ಯಾವೊಬ್ಬ ಸದಸ್ಯ ಕೂಡ ಮಂತ್ರಿ ಮಂಡ ಲದ ಭಾಗವಾಗಿಲ್ಲ ಅನ್ನುವುದು ಆಶ್ಚರ್ಯ ಹುಟ್ಟಿಸಿದೆ.
ಕರ್ನಾಟಕದ ರಾಜಕೀಯದಲ್ಲಿ ಬೆಳಗಾವಿ ರಾಜಕೀಯ ಬೇರೆಯದ್ದೇ ಸ್ಟೈಲ್. ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯ ಲೆಕ್ಕಾಚಾರದಲ್ಲಿ ಬೆಂಗಳೂರಿನ ನಂತರ ಅತೀ ಹೆಚ್ಚು ಸ್ಥಾನ ಹೊಂದಿರುವುದು ಬೆಳಗಾವಿ ಜಿಲ್ಲೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಬೆಳಗಾವಿಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತವೆ.
ಇನ್ನು ಜಾರಕಿಹೊಳಿ ಕುಟುಂಬ  ಬಿಜೆಪಿ ಇರಲಿ, ಕಾಂಗ್ರೆಸ್ ಆಗಿರಲಿ ಅಥವಾ ಜೆಡಿಎಸ್ ಇರಲಿ ಅಲ್ಲಿ ಇವರ ಪ್ರಾತಿ ನಿಧ್ಯ ಇದ್ದೇ ಇರುತ್ತದೆ. ಆದರೆ ಬಿಜೆಪಿ ಅದನ್ನು ಬ್ರೇಕ್ ಮಾಡಿದೆ. ಬೊಮ್ಮಾಯಿ ಸಂಪುಟದಲ್ಲಿ ಜಾರಕಿ ಹೊಳಿ ಕುಟುಂಬದ ಯಾರಿಗೂ ಸಚಿವ ಸ್ಥಾನ ನೀಡಲಾಗಿಲ್ಲ. 
2004 ರಿಂದ ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ರಚಿಸಿದ ಎಲ್ಲಾ ಸರ್ಕಾರಗಳ ರಾಜ್ಯ ಸಚಿವ ಸಂಪುಟ ಗಳಲ್ಲಿ, ಜಾರಕಿಹೊಳಿ ಸಹೋದರರಲ್ಲಿ ಕನಿಷ್ಠ ಒಬ್ಬರಾದರೂ ಸಚಿವ ಸ್ಥಾನ ಪಡೆಯುತ್ತಿದ್ದರು. ಆದರೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಕಿಹೊಳಿ ಸಹೋದರರ ಆಳ್ವಿಕೆಗೆ ಮೊದಲ ಬಾರಿಗೆ ಬ್ರೇಕ್ ಹಾಕಿದೆ. 
ಶಾಸಕ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಚುನಾವಣಾ ರಾಜ ಕೀಯಕ್ಕೆ ಪ್ರವೇಶಿಸಿದಾಗಿನಿಂದಲೂ ಜಾರಕಿಹೊಳಿ ಕುಟುಂಬವು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ರಮೇಶ್ ಮತ್ತು ಬಾಲಚಂದ್ರ ಕ್ರಮವಾಗಿ ಗೋಕಾಕ ಮತ್ತು ಅರಭಾವಿಯಿಂದ ಸತತವಾಗಿ ಆರು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದಾರೆ. 
ಸತೀಶ್ ಜಾರಕಿಹೊಳಿ ಕಳೆದ ಮೂರು ಚುನಾವಣೆಗಳಲ್ಲಿ ಯಮಕನಮರಡಿ ಕ್ಷೇತ್ರದಿಂದ ನೇರವಾಗಿ ರಾಜ್ಯ ವಿಧಾನಸಭೆಗೆ ಗೆಲ್ಲುವ ಮುನ್ನ ಎರಡು ಬಾರಿ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಇತ್ತೀಚೆಗೆ ಸೆಕ್ಸ್-ಸಿಡಿ ಹಗರಣದಲ್ಲಿ ಸಿಕ್ಕಿಬಿದ್ದ ನಂತರ ಸಚಿವ ಸ್ಥಾನದಿಂದ ಕೆಳಗಿಳಿದಿದ್ದರು. 
2004 ರಲ್ಲಿ ಸತೀಶ್ ಮಾಜಿ ಸಿಎಂ ದಿವಂಗತ ಧರಂ ಸಿಂಗ್ ಅವರ ಸಂಪುಟಕ್ಕೆ ಪ್ರವೇಶಿಸುವುದರೊಂದಿಗೆ ಜಾರಕಿಹೊಳಿ ಸಹೋದರರ ಸಚಿವ ಸ್ಥಾನ ನೀಡಿಕೆ ‘ವಾಡಿಕೆ’ ಆರಂಭವಾಯಿತು. ಅಂದು ಅವರು ಕ್ಯಾಬಿನೆಟ್‌ನಲ್ಲಿ ಜವಳಿ ಸಚಿವರಾಗಿದ್ದರು ಮತ್ತು ಎರಡು ವರ್ಷಗಳ ನಂತರ, ಬಾಲಚಂದ್ರ ಜಾರಕಿಹೊಳಿ ಬಿಜೆಪಿ/ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್‌ಗೆ ಪ್ರವೇಶಿಸಿದ್ದರು. 
2008 ರಲ್ಲಿ ಸಿಎಂ ಯಡಿಯೂರಪ್ಪನವರ ನಿರ್ಗಮನದ ನಂತರ ಜಗದೀಶ್ ಶೆಟ್ಟರ್ ಅವರು ಸಿಎಂ ಆದರು. ಅವರ ಸಂಪುಟದಲ್ಲೂ ಬಾಲಚಂದ್ರ ಜಾರಕಿಹೊಳಿ ಅವರು ಸಚಿವರಾಗಿ ಸಂಪುಟ ಪ್ರವೇಶಿಸಿ 2012 ರವರೆಗೆ ಖಾತೆಯನ್ನು ನಿರ್ವಹಿಸಿದ್ದರು. ಸತೀಶ್ ಜಾರಕಿಹೊಳಿ 2013 ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿದಾಗ ಮತ್ತೊಮ್ಮೆ ಸಂಪುಟಕ್ಕೆ ಆಯ್ಕೆಯಾದರು.
ಸತೀಶ್ ಅವರು ಸಂಪುಟದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಸತೀಶ್ ಅವರ ಬಳಿಕ ಅವರ ಸಹೋದರ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನಕ್ಕೆ ಬದಲಾಯಿಸಲಾಯಿತು. 2018 ರಲ್ಲಿ ರಮೇಶ್ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾದರು. ಬಿಎಸ್ ಯಡಿಯೂರಪ್ಪನವರ ಸಂಪುಟಕ್ಕೆ ಪ್ರವೇಶಿಸಿದ ನಂತರ, ರಮೇಶ್ ಜಲ ಸಂಪನ್ಮೂಲ ಸಚಿವರಾದರು. 
ಸೆಕ್ಸ್ ಸಿಡಿ ಹಗರಣದ ನಂತರ ಅವರು ರಾಜೀನಾಮೆ ನೀಡುವವರೆಗೂ ಖಾತೆಯನ್ನು ನಿರ್ವಹಿಸಿದ್ದರು. ಬಿಜೆಪಿಯ ಉನ್ನತ ಅಧಿಕಾರಿಗಳು, ಜಾರಕಿ ಹೊಳಿ ಸಹೋದರರಿಗೆ ರಮೇಶ್ ಅವರಿಗೆ ಕ್ಲೀನ್ ಚಿಟ್ ದೊರೆತ ನಂತರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಜಾರಕಿಹೊಳಿ ಸಹೋದರರು ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಬಾಲಚಂದ್ರ ಅವರಿಗೆ ಅವಕಾಶ ನೀಡಲು ಬಿಜೆಪಿಯಿಂದ ಪ್ರಸ್ತಾಪವನ್ನು ನೀಡಿದ್ದರು. ಆದರೆ ಬಾಲಚಂದ್ರ ಜಾರಕಿಹೊಳಿ ಅವರು ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಹೊಂದಿದ್ದರಿಂದ ಆ ಪ್ರಸ್ತಾಪವನ್ನು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎನ್ನಲಾಗಿದೆ.ಒಟ್ಟಿನಲ್ಲಿ ಜಾರಕಿಹೊಳಿ ಕುಟುಂಬಕ್ಕೆ ರಾಜ ಕೀಯದಲ್ಲಿ ಸಿಕ್ಕಿದ್ದ ಪರಂಪರೆ ಬಿಜೆಪಿ ಮುರಿದಿದೆ.
 
 
 
 
 
 
 
 
 
 
 

Leave a Reply