ದುರ್ಗಾದೇವಿಯ ಎರಡನೇ ಅವತಾರ “ಬ್ರಹ್ಮಚಾರಿಣಿ”

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆ ಮಾಡಲಾಗುತ್ತದೆ. ದುರ್ಗಾದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ. ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. 

ಬ್ರಹ್ಮಚಾರಿಣಿ ಎಂಬ ಹೆಸರು ಎರಡು ಪದಗಳಿಂದ ಬಂದಿದೆ. ‘ಬ್ರಹ್ಮ’ ಎಂದರೆ ತಸ್ಸು, ‘ಚಾರಿಣಿ’ ಎಂದರೆ ಕಟ್ಟಾ ಸ್ತ್ರೀ ಅನುಯಾಯಿ. ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿಯಾಗಿ ಜನಿಸುತ್ತಾಳೆ. ಇವಳನ್ನು ಹೇಮವತಿ ಎಂದೂ ಕರೆಯಲಾಗುತ್ತದೆ.

ಮುಂದೆ ಪಾರ್ವತಿಯು ಯೌವನಾವಸ್ಥೆಗೆ ಬಂದಾಗ ನಾರದ ಮುನಿಯು ಭೇಟಿಯಾಗುತ್ತಾನೆ. ತಪಸ್ಸಿನ ಹಾದಿಯನ್ನು ಅನುಸರಿಸಿದರೆ ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಈಶ್ವರನನ್ನು ಮದುವೆಯಾಗಬಹುದು ಎಂದು ಹೇಳುತ್ತಾನೆ. ಈ ಜನ್ಮದಲ್ಲೂ ಶಿವನನ್ನೇ ಮದುವೆಯಾಗಲು ಬಯಸಿದ ಪಾರ್ವತಿಯು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಮಾಡಲಾರಂಭಿಸುತ್ತಾಳೆ.

ಸಾವಿರ ವರ್ಷಗಳವರೆಗೂ ಹಣ್ಣು ಮತ್ತು ಹೂವುಗಳನ್ನು ಸೇವಿಸಿದ ಪಾರ್ವತಿಯು, ಇದಾದ ನಂತರ ನೂರು ವರ್ಷಗಳ ಕಾಲ ತರಕಾರಿಗಳನ್ನು ಮಾತ್ರ ಸೇವಿಸುತ್ತಾಳೆ. ಇದಾದ ಮೂರು ಸಾವಿರ ವರ್ಷಗಳವರೆಗೂ ಬಿದ್ದ ಎಲೆಗಳನ್ನು ಸೇವಿಸುತ್ತಾಳೆ. ತನ್ನ ತಪಸ್ಸನ್ನು ಯಶಸ್ವಿಗೊಳಿಸುವ ಸಲುವಾಗಿ ಆಕಾಶವನ್ನೇ ಚಪ್ಪರವಾಗಿಸಿ ಕಾಡಿನ ನೆಲದ ಮೇಲೆಯೇ ಮಲಗುತ್ತಾಳೆ. ತನ್ನ ಕಠಿಣ ತಪಸ್ಸಿನ ರೀತಿಯಿಂದಲೇ ಪಾರ್ವತಿಯು ಬ್ರಹ್ಮಚಾರಿಣಿ ಎಂಬ ಹೆಸರನ್ನು ಪಡೆಯುತ್ತಾಳೆ.

ಅಂತಿಮವಾಗಿ ಬಿದ್ದ ಎಲೆಗಳನ್ನೂ ತಿನ್ನುವುದನ್ನು ತ್ಯಜಿಸುವ ಪಾರ್ವತಿಯು ಅನೇಕ ವರ್ಷಗಳವರೆಗೂ ಆಹಾರ ಮತ್ತು ನೀರಿಲ್ಲದೇ ತನ್ನ ತಪಸ್ಸನ್ನು ಮುಂದುವರಿಸುತ್ತಾಳೆ. ಎಲೆಗಳನ್ನು ತಿನ್ನುವುದನ್ನು ತ್ಯಜಿಸಿದ ಪಾರ್ವತಿಗೆ ಅಪರ್ಣಾ ಎಂಬ ಹೆಸರೂ ಪ್ರಾಪ್ತಿಯಾಯಿತು. ಸಾವಿರಾರು ವರ್ಷಗಳ ತಪಸ್ಸಿನಿಂದಾಗಿ ಅವಳ ದೇಹವು ದುರ್ಬಲವಾಯಿತು. ಇದನ್ನು ನೋಡಿದ ಪಾರ್ವತಿಯ ತಾಯಿ ಮೈನಾ ದುಃಖದಿಂದ ‘ಓ..ಮಾ..’ ಎಂದು ಕರೆಯುತ್ತಾಳೆ. ಅಂದಿನಿಂದ ಪಾರ್ವತಿಯನ್ನು ‘ಉಮಾ’ ಎಂದೂ ಕರೆಯಲಾಗುತ್ತಿತ್ತು.

ಪಾರ್ವತಿಯ ದೀರ್ಘ ಮತ್ತು ಕಠಿಣ ತಪಸ್ಸಿನ ಸುದ್ದಿ ಎಲ್ಲೆಡೆಯೂ ತಲುಪಿತು. ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ’ ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ನೀನು ಮಾಡಿದ್ದೀಯಾ, ಶಿವನ ಮೇಲಿರುವ ನಿನ್ನ ಪ್ರೀತಿ ನಿಜವಾದುದು ಮತ್ತು ಪರಿಶುದ್ಧವಾದುದು, ಹೀಗಾಗಿಯೇ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ್ದೀಯ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ’ ಎಂದು ಆಶೀರ್ವದಿಸಿದನು.

ಹೀಗೆ ಕಠೋರ ತಪಸ್ಸು ಮಾಡಿದ ಪಾರ್ವತಿಯು ಬ್ರಹ್ಮಚಾರಿಣಿಯೆಂಬ ಹೆಸರನ್ನು ಪಡೆಯುತ್ತಾಳೆ. ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಬ್ರಹ್ಮಚಾರಿಣಿಯ ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುವ ದುರ್ಗೆಯ ರೂಪವನ್ನು ಕಾಣಬಹುದು.ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆಯಿಂದ ತಪಸ್ಸು, ವೈರಾಗ್ಯ, ಸದಾಚಾರ, ಸಂಯಮಗಳು ಪ್ರಾಪ್ತಿಯಾಗುತ್ತವೆ.

 
 
 
 
 
 
 
 
 
 
 

Leave a Reply