ಕಾಪು ಮಲ್ಲಾರಿನ 76 ವರ್ಷದ ಸುಶೀಲ ಶೆಟ್ಟಿ ಅವರಿಗೆ ಪಾಡ್ದನ ಪ್ರಶಸ್ತಿ ಪ್ರದಾನ

ಉಡುಪಿ: ತುಳುನಾಡಿನ ಮೌಖಿಕ ಗ್ರಂಥಗಳೆಣಿಸಿಕೊoಡಿರುವ ತುಳು ಸಂಧಿ ಪಾಡ್ದನಗಳ ಬಗ್ಗೆ ಹಾಗೂ ಕಾರಣಿಕ ಮೆರೆದ ದೈವ ದೇವರುಗಳ ಬಗ್ಗೆ ಇಂದಿನ ಯುವಜನಾಂಗಕ್ಕೆ ಸ್ಪಷ್ಟವಾದ ತಿಳಿವಳಿಕೆ ನೀಡುವ ಅಗತ್ಯತೆಯಿದೆ. ಜೊತೆಗೆ ವಿದೇಶಿ ಒಲವನ್ನು ಬಿಟ್ಟು ತುಳುನಾಡ ಸಂಸ್ಕೃತಿ, ತುಳು ಭಾಷೆಯ ಉಳಿವಿಗೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ತಿಳಿಸಿದ್ದಾರೆ.
ಉಡುಪಿ ಗಣೇಶ್ ಟ್ರೇಡಿಂಗ್ ಕಂಪೆನಿಯ ಮಿನಿ ಸಭಾಂಗಣದಲ್ಲಿ ದೆಂದೂರು ಶ್ರೀಮತಿ ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ನಡೆದ ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುವರ ಸತ್ಯನಿಷ್ಠೆ, ಪ್ರಾಮಾಣಿಕ ಬದುಕನ್ನು ಕಾಣಬೇಕಾದರೆ ಪಾಡ್ದನವನ್ನು ಕೇಳಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಡ್ದನ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭ ಕಾಪು ಮಲ್ಲಾರಿನ 76 ವರ್ಷದ ಪಾಡ್ದನ ಕಲಾವಿದೆ ಸುಶೀಲ ಶೆಟ್ಟಿ ಅವರಿಗೆ ಶ್ರೀಮತಿ ಕೊಲ್ಲು ಕೆ. ಶೆಟ್ಟಿ ದೆಂದೂರು ಸ್ಮಾರಕ ದೀಪಾ ಚೇತನ್ ಕುಮಾರ್ ಶೆಟ್ಟಿ ಕೊಡಮಾಡಿರುವ ಪಾಡ್ದನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ೫ಸಾವಿರ ನಗದು ಸಹಿತ ಅಕ್ಕಿಮುಡಿ,ಬಾಳೆಗೊನೆ ಬುಟ್ಟಿಯೊಂದಿಗೆ ಹಾಳೆ ಕಿರೀಟದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಸಮಾಜಸೇವಾ ರತ್ನ ಕಾಪು ಲೀಲಾಧರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ತುಳುನಾಡಿನಲ್ಲಿ ಪಾಡ್ದನದಿಂದ ಅನೇಕ ದೈವದೇವರುಗಳ ಚರಿತ್ರೆ ಹುಟ್ಟಿಕೊಂಡಿದ್ದು, ನೈಜ ಕಥೆಯನ್ನು ತಿರುಚಿ ಹಾಕುವ ಪ್ರಯತ್ನ ಸಲ್ಲದು ಎಂದರು.
ಉಡುಪಿ ಸಂಚಾರಿ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ್ ಸನಿಲ್, ಬೆಳ್ಳೆ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಶೆಟ್ಟಿ, ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಡಿಎಕ್ಸ್ ಎನ್ ಮಾರ್ಕೆಟ್ ಇಂಡಿಯಾ ಮುಖ್ಯಸ್ಥರಾದ ಎಸ್.ಎನ್.ಶೆಟ್ಟಿ, ಅಮೃತಾ ಶೆಟ್ಟಿ, ಮಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ್ ಶೆಟ್ಟಿ ಕಳತ್ತೂರ್, ಅಮೃತ ಪ್ರಕಾಶನದ ಮುಖ್ಯಸ್ಥೆ ಗುಣವತಿ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಮತಿ ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮುಖ್ಯಸ್ಥ ದಯಾನಂದ ಕೆ.ಶೆಟ್ಟಿ ದೆಂದೂರ್ ಸ್ವಾಗತಿಸಿದರು. ಇಶಾನಿ ಶೆಟ್ಟಿ ಪ್ರಾರ್ಥಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ದೇವಾಡಿಗರ ಯುವವೇದಿಕೆ ಅಧ್ಯಕ್ಷ ಅಶೋಕ್ ಶೇರಿಗಾರ್ ಅಲೆವೂರು ವಂದಿಸಿದರು.

 
 
 
 
 
 
 
 
 
 
 

Leave a Reply