ಇನ್ನು ಕಟೀಲು ಮೇಳಗಳಿಂದಲೂ ಕಾಲಮಿತಿ ಯಕ್ಷಗಾನ

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಆರೂ ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸಿ ಆಡಳಿತ ಮಂಡಳಿ ನಿರ್ಣಯ ತೆಗೆದುಕೊಂಡಿದೆ.

ರಾತ್ರಿ ಗಂಟೆ 10.30 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಸರಕಾರಗಳಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ಬಂದಿದೆ. ಈ ಹಿನ್ನಲೆಯಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸುವುದು ಅನಿವಾರ‍್ಯವಾಗಿತ್ತು, ದೇವರ ಎದುರು ಕಾಲಮಿತಿ ಯಕ್ಷಗಾನ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವರ ಒಪ್ಪಿಗೆ ಬಂದಿದೆ.

ಹಾಗಾಗಿ ಕಾಲಮಿತಿ ಯಕ್ಷಗಾನ ಮಾಡುವ ಬಗ್ಗೆ ಮಂಗಳವಾರ ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು, ಸಂಜೆ ಐದು ಗಂಟೆಯಿಂದ ರಾತ್ರಿ 10.30 ರತನಕ ಯಕ್ಷಗಾನ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ. ಯಕ್ಷಗಾನ ಪ್ರದರ್ಶನದ ಸ್ವರೂಪ ಚಿಂತನೆಗಳ ಸ್ಪಷ್ಟ ರೂಪ ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕರಾದ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply