ಶಾಲಾ ಮೈದಾನದಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ಇಂದೋರ್ನ ಅನ್ನಪೂರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
11ನೇ ತರಗತಿಯ ವಿದ್ಯಾರ್ಥಿನಿಯಾದ ವೃಂದಾ ತ್ರಿಪಾಠಿ ತನ್ನ ಗೆಳೆಯರೊಂದಿಗೆ ಶಾಲಾ ಮೈದಾನದಲ್ಲಿ ಆಟವಾಡುವಾಗ ದಿಢೀರನೆ ಪ್ರಜ್ಞಾಹೀನಳಾಗಿ ಕುಸಿದು ಬಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾಳೆ. ಘಟನೆಯ ಬೆನ್ನಿಗೇ ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಆಸ್ಪತ್ರೆಗೆ ಸಾಗಿಸಿತಾದರೂ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಆಕೆಯ ಸಾವಿಗೆ ಹೃದಯಾಘಾತ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ತನಿಖಾ ಸಬ್ ಇನ್ಸ್ಪೆಕ್ಟರ್ ಪೂನಂಚಂದ್, ಆಕೆಯ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಲಿದೆ ಎಂದು ಹೇಳಿದ್ದಾರೆ.