ಮಂಗಳೂರು- ಮೊಬೈಲ್ ಗಾಗಿ ಕಾರು ಚಾಲಕನನ್ನು ಕೊಂದ ದುರುಳರು!

ಮಂಗಳೂರು ನಗರದ ಸ್ಟೇಟ್‌ ಬಳಿ ಮಂಗಳೂವಾರ ಸಂಜೆ ನಡೆದ ಚಾಲಕನ ಕೊಲೆ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಿರುವನಂತಪುರದ ಪ್ರಶಾಂತ್ (40), ವಿಟ್ಲದ ಶರತ್ ವಿ. (36), ಕುಶಾಲನಗರದ ಜಿಕೆ ರವಿಕುಮಾರ್ ಯಾನೆ ನಂದೀಶ್ (38), ಕೊಣಾಜೆಯ ವಿಜಯ ಕುಟಿನ್ಹಾ (28) ಕೊಲೆ ಆರೋಪಿಗಳಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್‌ ಕುಮಾರ್ ಜೈನ್ ಅವರು  ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿರುವ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ನಿವಾಸಿ ಜನಾರ್ದನ ಪೂಜಾರಿ ಅವರು, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು ಮಂಗಳವಾರ ಸಂಜೆ 5ರ ವೇಳೆಗೆ ನಗರದ ನೆಹರು ಮೈದಾನದ ಬಳಿ ನಿದ್ದೆ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್ ಸುಲಿಗೆ ಮಾಡಲು ಯತ್ನಿಸಿದ್ದಾರೆ.

ಈ ಸಂದರ್ಭ ಎಚ್ಚರಗೊಂಡ ಜನಾರ್ದನ ಪ್ರತಿರೋಧ ತೋರಿದಾಗ ಆರೋಪಿಗಳ ಪೈಕಿ ಒಬ್ಬಾತ ಜನಾರ್ದನ ಪೂಜಾರಿಯ ಎದೆಗೆ ಕಾಲಿನಿಂದ ಒದ್ದ ಎನ್ನಲಾಗಿದೆ.

ಇದರಿಂದ ಜನಾರ್ದನ ಪೂಜಾರಿ ಸುಮಾರು 6 ಅಡಿ ಆಳಕ್ಕೆ ಬಿದ್ದಿದ್ದು, ಅಲ್ಲಿಗೂ ಧುಮುಕಿದ ಆರೋಪಿಗಳು ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಮೊಬೈಲ್ ಕಿತ್ತು ಪರಾರಿಯಾಗಿದ್ದರು.

ತೀವ್ರ ಹಲ್ಲೆಗೊಳಗಾಗಿದ್ದ ಜನಾರ್ದನ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಬಗ್ಗೆ ಪಾಂಡೇಶ್ವರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು  ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply