ಕಟ್ಟಿಕೊಂಡ ಪತಿಯನ್ನೇ ಕೊಂದ ಪಾಪಿ ಪತ್ನಿ!

ತನ್ನ ಶೋಕಿ ಜೀವನಕ್ಕೆ ಅಡ್ಡ ಬರುತ್ತಿದ್ದಾನೆ ಎಂಬ ಕಾರಣಕ್ಕೆ ಕಟ್ಟಿಕೊಂಡ ಪತಿಯನ್ನೇ ಪತ್ನಿಯು ಕೊಂದು ಹಾಕಿದ ಆಘಾತಕಾರಿ ಘಟನೆಯು ಮೈಸೂರಿನ ಹೂಟಗಳ್ಳಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್​ ಎಂದು ಗುರುತಿಸಲಾಗಿದೆ. ಈತ ಹತ್ತು ವರ್ಷಗಳ ಹಿಂದೆ ಮೈಸೂರಿನ ಬೋಗಾದಿ ನಿವಾಸಿಯಾಗಿದ್ದ ನಿಖಿತಾ ಎಂಬಾಕೆಯನ್ನು ವರಿಸಿದ್ದ. ಇಬ್ಬರ ದಾಂಪತ್ಯ ಜೀವನದ ಫಲವಾಗಿ ಇಬ್ಬರು ಮಕ್ಕಳು ಸಹ ಜನಿಸಿದ್ದರು.

ಮಂಜುನಾಥ್​ ಹಾಗೂ ನಿಖಿತಾ ಮದುವೆಯಾಗಿ ಹತ್ತು ವರ್ಷಗಳು ಕಳೆದಿದ್ದರೂ ಸಹ ಇಬ್ಬರ ನಡುವಿನ ಹೊಂದಾಣಿಕೆ ಮಾತ್ರ ಶೂನ್ಯವಾಗಿತ್ತು. ಮಂಜುನಾಥ್​ ಅಪ್ಪಟ ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೆ ನಿಖಿತಾಗೆ ಮಾಡರ್ನ್​ ಡ್ರೆಸ್​ ಧರಿಸಿ ನೈಟ್​ ಪಾರ್ಟಿಗೆ ಹೋಗೋದು ತುಂಬಾನೇ ಹಿಡಿಸುತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು.

ಇದು ಸಾಲದು ಎಂಬಂತೆ ಮದುವೆಯಾಗಿ ಆರು ವರ್ಷಕ್ಕೆ ಸರಿಯಾಗಿ ನಿಖಿತಾ ಮಂಜುನಾಥನನ್ನು ಬಿಟ್ಟು ರಾಯಚೂರಿನ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು ಎನ್ನಲಾಗಿದೆ. ಹೇಗೋ ಆಕೆಯನ್ನು ಹುಡುಕಿ ತಂದಿದ್ದ ಮಂಜುನಾಥ್​ ಸಾಕಷ್ಟು ರಾಜಿ ಪಂಚಾಯ್ತಿ ಬಳಿಕ ಆಕೆಯೊಂದಿಗೆ ಮತ್ತೆ ಸಂಸಾರ ನಡೆಸಲು ಆರಂಭಿಸಿದ್ದ ಎಂದು ಮಂಜುನಾಥ್​ ಅತ್ತಿಗೆ ಸರಸ್ವತಿ ಹೇಳಿದ್ದಾರೆ.

ಪುತ್ರನ ಸಂಸಾರ ಕಣ್ಣೆದುರೇ ಹಾಳಾಗುತ್ತಿರೋದನ್ನು ನೋಡಿದ ಮಂಜುನಾಥ್​ ತಾಯಿ ಹಾಸಿಗೆ ಹಿಡಿದು ಮೃತಪಟ್ಟಿದ್ದರು. ಆದರೆ ನಿಖಿತಾ ಮಾತ್ರ ತನ್ನ ಶೋಕಿ ಬಿಟ್ಟಿರಲಿಲ್ಲ. ಮಂಗಳವಾರ ರಾತ್ರಿ ಸುಮಾರಿಗೆ ನಿಖಿತಾ ತನ್ನ ಪತಿಯ ಸಹೋದರಿಯರಿಗೆ ಕರೆ ಮಾಡಿ ಮಂಜುನಾಥ್​ ಪ್ರಜ್ಞೆ ತಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಮಂಜುನಾಥ್​ ಸಹೋದರಿಯರು ತಮ್ಮ ತವರು ಮನೆ ತಲುಪೋವಷ್ಟರಲ್ಲಿ ಮಂಜುನಾಥ್​ ಸಾವನ್ನಪ್ಪಿದ್ದ. ನಿಖಿತಾ ತನ್ನ ಶೋಕಿಗೆ ಅಡ್ಡಬಂದಿರುವ ಪತಿಯನ್ನು ತಾನೇ ಕೊಂದು ನಾಟಕ ಮಾಡುತ್ತಿದ್ದಾಳೆ ಎಂದು ಮಂಜುನಾಥ್​ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply