ಉಡುಪಿ: 2006 ಮೇ ತಿಂಗಳಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2011ರಿಂದ ತಲೆಮರೆಸಿ ಕೊಂಡಿದ್ದ ಪ್ರಕರಣದ ಆರೋಪಿಯೊಬ್ಬನನ್ನು ಉಡುಪಿ ನಗರ ಪೊಲೀಸರು ಜು.17ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಹನುಮಂತ ನಗರದ ನಿವಾಸಿ ಹೈದರ್(35) ಎಂದು ಗುರುತಿಸಲಾಗಿದೆ
2006ರ ಮೇ 20ರಂದು ಉಡುಪಿ ನಗರದ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದ ಪಿ.ಸಿ. ಜಗನಾಥ ಎಂಬ ವರಲ್ಲಿ ಬಾಕಿ ಇರುವ ಹಣವನ್ನು ಕೊಡುವುದಾಗಿ ಹೇಳಿ ವಸಂತ್ ಭಕ್ತ ಎಂಬಾತನು ತನ್ನ ಬೈಕ್ನಲ್ಲಿ ಉದ್ಯಾವರಕ್ಕೆ ಕರೆದು ಕೊಂಡು ಹೋಗಿದ್ದರು.
ಅಲ್ಲಿ ವಸಂತ ಭಕ್ತ ಹಾಗೂ ಗಣೇಶ್ ಭಕ್ತ ಎಂಬವರು ಮೊದಲೇ ತಂದಿದ್ದ ಸೈನೆಡ್ ಬೆರೆಸಿದ ತಂಪು ಪಾನಿಯವನ್ನು ಜಗನ್ನಾಥ್ಗೆ ಕುಡಿಯಲು ನೀಡಿ, ಕೊಲೆ ಮಾಡಿ ಬಳಿಕ ಮೃತದೇಹವನ್ನು ಹೈದರ್ ಕಾರಿನಲ್ಲಿ ತೆಗೆದುಕೊಂಡು ಹೋಗಿ ಶೌಚಾಲಯದ ಗುಂಡಿ ಯಲ್ಲಿ ಎಸೆದಿದ್ದನು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ 2011ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಹೈದರ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.