ಉಡುಪಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ

ಯುವ ಜನರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವ ಜನೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಯಶ್‌ಪಾಲ್ ಸುವರ್ಣ ಕರೆ ನೀಡಿದರು.

ಅವರು ಇಂದು ನಗರದ ಅಮೃತ್ ಗಾರ್ಡನ್‌ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಲಯನ್ಸ್ ಅಮೃತ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನೋತ್ಸವ ಕಾರ್ಯಕ್ರಮಗಳನ್ನು ಸರ್ಕಾರ ಪ್ರತೀ ವರ್ಷವು ಆಯೋಜನೆಗೊಳಿಸುತ್ತಿದೆ. ಯುವ ಸಂಪತ್ತು ನಮ್ಮ ದೇಶದ ಸಂಪತ್ತು. ಇಡೀ ವಿಶ್ವಕ್ಕೆ ಹೋಲಿಸಿದ್ದಲ್ಲಿ ನಮ್ಮ ದೇಶದಲ್ಲಿರುವ ಯುವ ಸಂಪತ್ತಿನ ಶ್ರೀಮಂತಿಕೆ ಹೆಚ್ಚಿದೆ. ಯುವಜನತೆಗೆ ಸರಿಯಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದಾಗ ಅವರುಗಳನ್ನು ನಮ್ಮ ದೇಶದ ಆಸ್ತಿಯಾಗಿ ದೇಶದ ಅಭಿವೃದ್ಧಿಗೆ ಅವರನ್ನು ತೊಡಗಿಸಕೊಳ್ಳಬಹುದಾಗಿದೆ ಎಂದರು.

ಸ್ವಾಮೀ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ಯುವ ಜನತೆಗೆ ಸ್ಪೂರ್ತಿಯಾಗಿದ್ದರು. ಅವರು ಬದುಕಿದ್ದು, ಕಡಿಮೆ ಅವಧಿಯಾಗಿದ್ದರೂ ಇಡೀ ವಿಶ್ವದ ಜನತೆಗೆ ಅವರು ಮಾದರಿಯಾಗಿದ್ದರು. ಅವರ ಆದರ್ಶ ಹಾಗೂ ವ್ಯಕ್ತಿತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕು. ಯುವಜನತೆ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಲಯನ್ಸ್ ಅಮೃತ್ ಉಡುಪಿಯ ಅಧ್ಯಕ್ಷೆ ಲ. ಭಾರತಿ ಹರೀಶ್, ಸದಸ್ಯ ವಿಜಯ ಪ್ರಕಾಶ್ ಭಂಡಾರಿ, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಹಾಡು, ಕಥೆ ಬರೆಯುವುದು, ಭಿತ್ತಿ ಪತ್ರ ತಯಾರಿಕೆ, ಘೋಷಣೆ ಹಾಗೂ ಛಾಯಾ ಚಿತ್ರ ಸ್ಪರ್ಧೆಗಳು ನಡೆಯಿತು.

 
 
 
 
 
 
 
 
 
 
 

Leave a Reply