ಸುಕನ್ಯಾ ಸಮೃದ್ಧಿ ಮಹೋತ್ಸವ ಆಚರಿಸಲು ಆಯ್ಕೆಗೊಂಡ ರಾಷ್ಟ್ರದ ಎಪ್ಪತ್ತೈದು ನಗರಗಳಲ್ಲಿ ಉಡುಪಿ ಅಂಚೆ ವಿಭಾಗದ ಉಡುಪಿ ನಗರ ಕೂಡಾ ಒಂದಾಗಿದೆ. ಆ ಪ್ರಯುಕ್ತ 15.09.2022 ರಂದು ಸಂಜೆ 4 ಗಂಟೆಗೆ ಉಡುಪಿ ಅಂಚೆ ವಿಭಾಗದ ವತಿಯಿಂದ ಉಡುಪಿಯ ಮಿಷನ್ ಆಸ್ಪತ್ರೆಯ ಮಾರ್ಗದಲ್ಲಿರುವ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಸುಕನ್ಯಾ ಸಮೃದ್ಧಿ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಉಡುಪಿ ಶಾಸಕರಾದ ಮಾನ್ಯ ರಘುಪತಿ ಭಟ್, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ನಿರ್ದೇಶಕರಾದ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಲಿದ್ದಾರೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರಾಯೋಜಿಸಲಿರುವ ಗಣ್ಯರನ್ನು ಗುರುತಿಸಿ ಪ್ರಾಯೋಜಕತ್ವ ಪಡೆದ ಫಲಾನುಭವಿಗಳಿಗೆ ಮಾನ್ಯ ಶಾಸಕರು ಖಾತಾ ಪುಸ್ತಕವನ್ನು ಹಸ್ತಾಂತರಿಸಲಿದ್ದಾರೆ . ಅಲ್ಲದೆ ಪ್ರಾಯೋಜಕರ ನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಆ ದಿನ ಬೆಳಿಗ್ಗೆ 10:00 ರಿಂದ ಸಂಜೆ ಗಂಟೆ 5 ರವರೆಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಜನ ಸುರಕ್ಷಾ ಯೋಜನೆಗಳು , ಉಳಿತಾಯ ಯೋಜನೆಗಳು , ಜೀವವಿಮೆ, ಗ್ರಾಮೀಣ ಜೀವ ವಿಮೆ , ಐಪಿಪಿಬಿ, ಸಿಎಸ್ ಸಿ ಮುಂತಾದ ಯೋಜನೆಗಳ ಮಾಹಿತಿ ಶಿಬಿರ ಹಾಗು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಶಿಬಿರವನ್ನು ಸಾರ್ವಜನಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಆಯೋಜಿಸಲಾಗುವುದು. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದೆಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.