ಗುರುಕುಲ ಶಾಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ: ತನಿಖೆ ನಡೆಸುವಂತೆ ಪೋಷಕರ ಆಗ್ರಹ

ಕುಂದಾಪುರ ಗುರುಕುಲ ಶಾಲೆಯ ವಿದ್ಯಾರ್ಥಿನಿ ಕಾರವಾರ ಸಮೀಪದ ಕಾಜೂಬಾಗ್ನ ತನ್ವಿ ಪಾಲೇಕರ್(14) ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಮೃತರ ತಂದೆ ರೋಶನ್ ನಾರಾಯಣ ಪಾಲೇಕರ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಮಗಳು, ಶಾಲೆಯ ಹಾಸ್ಟೆಲ್ನಲ್ಲಿಯೇ ಉಳಿದುಕೊಂಡಿದ್ದಳು. ಜೂ.5ರಂದು ಬೆಳಗಿನ ಜಾವ ಆಕೆ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ಶಾಲೆಯವರು ತಿಳಿಸಿದ್ದರು. ಆದರೆ ನಮಗೆ ಈ ಸಾವಿನ ಬಗ್ಗೆ ಸಂಶಯ ಇದೆ. ಅದರಂತೆ ಕುಂದಾಪುರ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂಬುದಾಗಿ ದೂರು ದಾಖಲಿಸಿದ್ದೇವೆ. ಈ ಕುರಿತು ಪೊಲೀಸರು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಆಕೆ ಕಟ್ಟಡದ ಮೇಲಿನಿಂದ ಕಾಲು ಜಾರಿ ಬೀಳಲು ಅಥವಾ ಅಲ್ಲಿಂದ ಜಿಗಿದು ಆತ್ಮ ಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. 4.4 ಅಡಿ ಎತ್ತರ ಇರುವ ಆಕೆ ನೆಲದಿಂದ ಏಳು ಅಡಿ ಎತ್ತರದಲ್ಲಿರುವ ಜಾಗದಿಂದ ಹೇಗೆ ಕೆಳಗೆ ಬೀಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಆಕೆ ಮನೆಯಿಂದ ತುಂಬಾ ಖುಷಿಯಾಗಿಯೇ ಬಂದಿದ್ದಾಳೆ. ಕಲಿಯುವುದರಲ್ಲಿ ಪ್ರತಿಭಾನ್ವಿತೆ ಹಾಗೂ ಧೈರ್ಯವಂತೆ ಆಗಿದ್ದ ತನ್ವಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳು ಅಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮೃತಳ ತಾಯಿ ರಂಜನ ಆರ್. ಪಾಲೇಕರ್, ರಾಘು ನಾಕ್, ಜ್ಯೋತಿ, ಈಶ್ವರ ನಾಕ್, ದತ್ತರಾಮ ನಾಕ್, ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply