ಉಡುಪಿ: ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೆಥೊಲಿಕ್ ಸಭಾ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸೋಮವಾರ ನಿಧನರಾದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಮಂಗಳವಾರ ಉಡುಪಿಯಲ್ಲಿ ಶೃದ್ದಾಂಜಲಿ ಅರ್ಪಿಸಲಾಯಿತು.ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಕೇಂದ್ರದ ಮಾಜಿ ಸಚಿವ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಉಡುಪಿಯ ಶೋಕ ಮಾತಾ ಇಗರ್ಜಿಗೆ ಮಂಗಳವಾರ ತಂದು ಮೃತರ ಸದ್ಗತಿಗಾಗಿ ಪವಿತ್ರ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಅರ್ಪಿಸಲಾಯಿತು.
ಬಲಿಪೂಜೆಯ ಬಳಿಕ ಅಂದಿನ ಮಂಗಳೂರು ಧರ್ಮಪ್ರಾಂತ್ಯವಿದ್ದ ಅವಧಿಯಲ್ಲಿ ಕ್ರೈಸ್ತ ಸಮು ದಾಯದ ಬಲಿಷ್ಠ ಶ್ರೀ ಸಾಮಾನ್ಯರ ಸಂಘಟನೆಯಾದ ಕಥೊಲಿಕ್ ಸಭಾ ಅಸ್ತಿತ್ವಕ್ಕೆ ಬಂದಿದ್ದು, 1979-1982 ರ ವರೆಗೆ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಪುಷ್ಪಗುಚ್ಛವಿರಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
ಈ ವೇಳೆ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿʼಸೋಜಾ, ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ರೋಬರ್ಟ್ ಮಿನೇಜಸ್, ಮಾಜಿ ಅಧ್ಯಕ್ಷರಾದ ಅಲ್ಫೋನ್ಸ್ ಡಿಕೋಸ್ತಾ, ತೋಮಸ್ ಕ್ವಾಡ್ರಸ್, ಉಡುಪಿ ವಲಯಾಧ್ಯಕ್ಷೆ ಲವೀನಾ ಪಿರೇರಾ, ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.