ಶಾಂತಿಯುತ ಬಕ್ರೀದ್ ಆಚರಣೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸೂಚನೆ~ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ರವರ ಅಧ್ಯಕ್ಷತೆಯಲ್ಲಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ಸಂಬಂಧ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯು ನಡೆಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಜುಲೈ 21 ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ/ಗೋವುಗಳ ಹತ್ಯೆ ಹಾಗೂ ಅನಧಿಕೃತ ಸಾಗಾಣಿಕೆಯನ್ನು ತಡೆಗಟ್ಟುವ ಸಂಬಂಧ ನಿರ್ದೇಶನಗಳನ್ನು ಪಾಲಿಸುವಂತೆ ಪೋಲೀಸ್ ಇಲಾಖೆ, ನಗರಸಭೆ, ಪುರಸಭೆ, ಸಾರಿಗೆ ಅಧಿಕಾರಿ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಶುಗಳ ಅಧಿಕೃತ ಸಾಗಾಣಿಕೆಗೆ ಪಶು ಇಲಾಖೆಯಿಂದ ಅನುಮತಿ ಪಡೆಯಬಹುದು. ಕೃಷಿಗೆ ಮತ್ತು ಪಶು ಸಂಗೋಪನೆಗೆ ಮಾತ್ರ ಸಾಗಾಟಕ್ಕೆ ಅನುಮತಿ ಇರುವುದು. ರೋಗಗ್ರಸ್ತ ಜಾನುವಾರುಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ವೈದ್ಯರ ಸಮಕ್ಷಮ ದಯಾಮರಣಕ್ಕೆ ಅವಕಾಶವಿರುವುದು.

ಸಾರಿಗೆ ಇಲಾಖೆಯಿಂದ ಅನಧಿಕೃತವಾಗಿ ಪ್ರಾಣಿಗಳ ಸಾಗಾಟದ ವಾಹನಗಳನ್ನು ಪತ್ತೆ ಹಚ್ಚಿ ಗೋ ಶಾಲೆಗಳಿಗೆ ಹಸ್ತಾಂತರಿಸುವುದು. ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿ, ಪಶು ಚಿಕಿತ್ಸಾಲಯ, ಉಡುಪಿ ಇವರಿಗೆ ನಿರ್ದೇಶನ ನೀಡುವಂತೆ ಪಶುಸಂಗೋಪನಾ ಇಲಾಖೆಗೆ ಸೂಚಿಸಿದರು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಕರಣ ದಾಖಲಾಗಿ ಗೋಶಾಲೆಗೆ ಹಸ್ತಾಂತರವಾದ ಗೋವುಗಳನ್ನು ನ್ಯಾಯಾಲಯದಿಂದ ಆದೇಶವಾದಾಗ ಗೋಮಾಲಕರು ಹಿಂದೆ ಪಡೆಯುವಾಗ ಸದರಿ ಗೋವುಗಳು ಗೋ ಶಾಲೆಯ ಲ್ಲಿದ್ದಷ್ಟು ದಿನಗಳ ನಿರ್ವಹಣಾ ವೆಚ್ಚವನ್ನು ಗೋಶಾಲೆಗಳಿಗೆ ಪಾವತಿಸುವಂತೆ ನ್ಯಾಯಾಲಯದಿಂದ ಆದೇಶ ಆಗುವಂತೆ ಕ್ರಮವಹಿಸುವುದು, ಅನಧಿಕೃತ ವಧಾಗಾರಗಳನ್ನು ಪತ್ತೆ ಹಚ್ಚಿ, ಮಾಹಿತಿ ದೊರಕಿದ ತಕ್ಷಣ ಕಾನೂನು ಕ್ರಮ ವಹಿಸುವುದು, ಅನಧಿಕೃತ ಗೋವಧೆ ಮಾಡುವವರನ್ನು ಪತ್ತೆ ಹಚ್ಚಿ ಪೋಲೀಸ್ ಠಾಣೆಗೆ ಕರೆಸಿ ತಿಳುವಳಿಕೆ ನೀಡಿ ಮುಚ್ಚಳಿಕೆ ಪಡೆಯುವುದು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸುವುದು.

ತಾಲೂಕಿನ ತಹಶೀಲ್ದಾರರು ಕಡ್ಡಾಯವಾಗಿ ಶಾಂತಿ ಸಭೆಗಳನ್ನು ನಡೆಸುವುದು. ಹಬ್ಬವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಮೇಲುಸ್ತುವಾರಿ ವಹಿಸುವ ಬಗ್ಗೆ ನಿರ್ದೇಶನ ನೀಡಿದರು, ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಅಥವಾ ಅನಧಿಕೃತವಾಗಿ ಪ್ರಾಣಿಗಳನ್ನು ಸಾಗಾಣಿಕೆ ಮಾಡುತ್ತಿದ್ದಲ್ಲಿ , ಸಾರ್ವಜನಿಕರು ಈ ಬಗ್ಗೆ ಸಂಬಂಧಿಸಿದ ಹತ್ತಿರದ ಪೋಲೀಸ್ ಠಾಣೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಹೇಳಿದರು.

ಪ್ರಮುಖ ಪ್ರಾರ್ಥನಾ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆಗಳನ್ನು ಮಾಡುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತು, ವಾಹನಗಳ ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪೋಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.

ಪಾರ್ಥನಾ ಸ್ಥಳಗಳಲ್ಲಿ ಕೋವಿಡ್ -19 ಸಾಂಕ್ರಮಿಕ ರೋಗವು ಹರಡುವುದನ್ನು ತಡೆಗಟ್ಟಲು ಸರ್ಕಾರದ ಆದೇಶವನ್ನು ಪಾಲಿಸುವುದು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸೂಚಿಸಿದರು.

ಜಿಲ್ಲಾದ್ಯಂತ ರಾತ್ರಿ ತಪಾಸಣಾ ಕೇಂದ್ರ, ಹಾಗೂ ದಿನದ ಸಮಯದಲ್ಲಿ ತಪಾಸಣಾ ಕೇಂದ್ರಗಳಿದ್ದು, ಸದ್ರಿ ಕೇಂದ್ರಗಳಿಗೆ ಈ ಬಗ್ಗೆ ಹೆಚ್ಚಿನ ಜಾಗರೂಕತೆ ಇರುವಂತೆ ಸೂಚನೆ ನೀಡಲು, ಸಬ್ ಡಿವಿಜನ್ ಮಟ್ಟದಲ್ಲಿ ಪಿ.ಎಸ್.ಐ ಯನ್ನೊಳಗೊಂಡ ವಿಶೇಷ ತಪಾಸಣಾ ತಂಡವೂ ಸಹ ಈ ಬಗ್ಗೆ ನಿಗಾವಹಿಸಲು ಹಾಗೂ ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಮುಖಂಡರೊಡನೆ ಸ್ನೇಹ ಸೌಹಾರ್ದ ಸಭೆಗಳನ್ನು ನಡೆಸುವಂತೆ ಸೂಚಿಸಿದರು.

ಮೇಲ್ಕಂಡ ಎಲ್ಲಾ ನಿರ್ದೇಶನಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದೆಂದು ನಿರ್ದೇಶನಗಳನ್ನು ನೀಡಿದರು.

 
 
 
 
 
 
 
 
 
 
 

Leave a Reply