ಕುಂದಾಪುರ: ಬೈಂದೂರು ಕೊಡೇರಿ ಬಂದರಿನ ಸಮೀಪ ಭಾನುವಾರ ಮಧ್ಯಾಹ್ನ ನಡೆದ ದೋಣಿ ಅಪಘಾತದಲ್ಲಿ ನಾಪತ್ತೆ ಯಾದ ನಾಲ್ವರು ಮೀನುಗಾರರ ಪತ್ತೆಗೆ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಪರಿಣಿತರ ತಂಡ ಕಾರ್ಯೋನ್ಮುಖವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಬೈಂದೂರು ತಾಲೂಕಿನ ಕೊಡೇರಿಯಲ್ಲಿ ನಡೆದ ದೋಣಿ ದುರಂತ ಸ್ಥಳಕ್ಕೆ ಭಾನುವಾರ ಸಂಜೆ ಭೇಟಿ ಕೊಟ್ಟ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಸಿ.ಎಸ್.ಪಿ ಪೊಲೀಸರ ನೇತೃತ್ವದಲ್ಲಿ ಕಾಣೆಯಾದ ಮೀನುಗಾರರ ಶೋಧ ಕಾರ್ಯ ನಡೆಯುತ್ತಿದೆ. ಮೀನುಗಾರರು ಮೃತ ಪಟ್ಟಿರುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿರುವ ಹಿನ್ನೆಲೆ ಅವರ ಮೃತ ದೇಹ ದಡಕ್ಕೆ ಬರುವ ಬಗ್ಗೆ ಶೋಧವೂ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಮಾಹಿತಿಯಿದ್ದರೂ ಸಂಬಂದ ಪಟ್ಟವರಿಗೆ ನೀಡಬೇಕು. ದೋಣಿಯಲ್ಲಿ 12 ಮಂದಿ ಮೀನುಗಾರರಿದ್ದು ಅವರ ಪೈಕಿ 8 ಜನರನ್ನು ರಕ್ಷಣೆ ಮಾಡಲಾಗಿದೆ ಎಂದರು.
ಈ ಸಂದರ್ಭ ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಎಸಿ ಕೆ. ರಾಜು, ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ಕರಾವಳಿ ಕಾವಲು ಪಡೆ ಪೊಲೀಸರು, ಬೈಂದೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸರು ಇದ್ದರು.