ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿಯವರು ಕೆಲವು ನಿರ್ಬಂಧಗಳೊಂದಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ದೈನಂದಿನ ಚಟುವಟಿಕೆಗಳ ನಿಮಿತ್ತ ಸಂಚರಿಸುವವರು ಪಾಸ್ ಪಡೆದು ಸಂಚರಿಸಬಹುದಾಗಿದೆ. ಆದರೆ ಕರ್ನಾಟಕ ಸರ್ಕಾರದ ಕೋವಿಡ್-19 ಕ್ವಾರಂಟೈನ್ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಕರ್ನಾಟಕ- ಕೇರಳ ಗಡಿಯಲ್ಲಿರುವ ಎಲ್ಲ ರಸ್ತೆ ಮಾರ್ಗಗಳಲ್ಲಿ ದೈನಂದಿನ ಚಟುವಟಿಕೆಗಳಿಗೆ ಪ್ರತಿದಿನ ಸಂಚರಿಸುವ ಸಾರ್ವಜನಿಕರಿಗೆ ಕೆಲವು ನಿರ್ಬಂಧಗಳನ್ವಯ ಅವಕಾಶ ಕಲ್ಪಿಸಲಾಗಿದ್ದು, ದೈನಂದಿನ ಚಟುವಟಿಕೆ ಗಳಿಗೆ ಪ್ರತಿದಿನ ಸಂಚರಿಸುವ ಸಾರ್ವಜನಿ ಕರು ಸ್ಥಳೀಯ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯತ್ ವತಿಯಿಂದ ಮಾಸಿಕ ಪಾಸ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ.
ಪಾಸ್ ಪಡೆದ ಬಳಿಕ ಚೆಕ್ಪೋಸ್ಟ್ಗಳಲ್ಲಿ ಒಳಬರುವ, ಹೊರಹೋಗುವ ಸಂದರ್ಭ ತಮ್ಮ ಮಾಹಿತಿಯನ್ನು ದಾಖಲಿಸಬೇಕು. ಚೆಕ್ಪೋಸ್ಟ್ನಲ್ಲಿ ಪ್ರತಿದಿನ ವೈದ್ಯಕೀಯ ಸ್ಕ್ರೀನಿಂಗ್ ಮತ್ತು ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೇರಳದಿಂದ ದ.ಕ. ಜಿಲ್ಲೆ ಯಲ್ಲಿ ಉಳಿಯಲು ಇಚ್ಛಿಸುವವರು ಕಡ್ಡಾಯವಾಗಿ ಸೇವಾಸಿಂಧು ವೆಬ್ ಪೋರ್ಟಲ್ನಲ್ಲಿ ಪಾಸ್ ಪಡೆದು ತಲಪಾಡಿ, ಜಾಲ್ಸೂರು ಚೆಕ್ಪೋಸ್ಟ್ ಮುಖಾಂತರವೇ ಸಂಚರಿಸಬೇಕು ಎಂದು ಡಾ.ರಾಜೇಂದ್ರ ಕೆ.ವಿ ಆದೇಶದಲ್ಲಿ ತಿಳಿಸಿದ್ದಾರೆ.