24ರಿಂದ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ವಾರ್ಷಿಕೋತ್ಸವ

ಬೆಂಗಳೂರು: ರಾಜಧಾನಿಯ  ಜಯನಗರ 4ನೇ ಬ್ಲಾಕ್‌ನಲ್ಲಿರುವ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಗೆ ಈಗ 24 ವಸಂತ. ಕರ್ನಾಟಕ ಸಂಗೀತದಲ್ಲಿ ಗಾಯನ ಮತ್ತು ಮೃದಂಗ ವಾದನಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಇನ್ನೂ ಹಲವಾರು ಪ್ರಕಾರಗಳಲ್ಲಿ ತನ್ನ ಸಂಗೀತ ಕೈಂಕರ್ಯವನ್ನು ಸಲ್ಲಿಸುತ್ತಾ ಸಂಗೀತ ಪ್ರಪಂಚದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯು 24ನೇ ಅರ್ಥಪೂರ್ಣ ವಾರ್ಷಿಕೋತ್ಸವ ನ. 24 ರಿಂದ 26 ರ ವರೆಗೆ ಬನಶಂಕರಿ 2ನೇ ಹಂತದ ಶ್ರೀ ರಾಮಲಲಿತ ಕಲಾ ಮಂದಿರದ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.

24ರ ಸಂಜೆ 4.30ಕ್ಕೆ ಖ್ಯಾತ ವೀಣಾ ವಾದಕಿ ವಿದುಷಿ ಡಾ. ಸುಮಾ ಸುಧೀಂದ್ರ ಅವರು  ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ . ಸಂಸ್ಥೆ ಕೊಡಮಾಡುವ ಬೆಂಗಳೂರು ನಾಗರತ್ನಮ್ಮ ಸ್ಮರಣಾರ್ಥ ಪ್ರಶಸ್ತಿ ‘ಸ್ವರಲಯ ರತ್ನ’ ವನ್ನು ವಿದುಷಿ ಸುಮಿತ್ರಾ ನಿತಿನ್‌ಗೆ, ‘ಸ್ವರಲಯ ಶೃಂಗ’ ಪ್ರಶಸ್ತಿಯನ್ನು ಖ್ಯಾತ ಮೃದಂಗ ಪಟು ವಿದ್ವಾನ್ ಸಿ. ಚೆಲುವರಾಜು ರವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆ ಪ್ರಾಚಾರ್ಯ ವಿದ್ವಾನ್ ಎಚ್.ಎಸ್. ಸುಧೀಂದ್ರ  ತಿಳಿಸಿದ್ದಾರೆ.

ವಾಸುದೇವರಾವ್‌ಗೆ ಗೌರವ:  ನಾಡು ಕಂಡ ಹಿರಿಯ ಮೃದಂಗ ವಿದ್ವಾಂಸ, ಕರ್ನಾಟಕ ಕಲಾಚಾರ್ಯ ಪುರಸ್ಕೃತ ಎಂ. ವಾಸುದೇವರಾವ್ ರವರು 80 ವಸಂತ ಪೂರೈಸಿರುವ ಸಂದರ್ಭದಲ್ಲಿ ಅವರನ್ನು ಮತ್ತೊಬ್ಬ ಹಿರಿಯ ಮೃದಂಗವಾದನ ಪಟು ಶ್ರೀಮುಷ್ಣಂ ವಿ. ರಾಜಾರಾವ್ ಅವರು ಗೌರವಿಸಲಿದ್ದಾರೆ. ನಂತರ ವಿದುಷಿ ಸುಮಿತ್ರಾ ನಿತಿನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.

25ರ ಬೆಳಗ್ಗೆ 9.30ಕ್ಕೆ ಕಲಾಶಾಲೆಯ ಮಕ್ಕಳಿಂದ ತಾಳವಾದ್ಯವಿದೆ. ನಂತರ ವಿದ್ವಾನ್ ಮತ್ತೂರು ಶ್ರೀನಿಧಿಅವರಿಂದ ಪಿಟೀಲು-ಒಂದು ಬಹುಮುಖ್ಯ ವಾದ್ಯ- ಪ್ರಾತ್ಯಕ್ಷಿಕೆ ಇದೆ. ನಂತರ ವಿದ್ವಾನ್ ಅನೂರ್ ವಿನೋದ್ ಶ್ಯಾಮ್ ಮತ್ತು ತಂಡದವರಿಂದ ಲಯವಿನ್ಯಾಸ -ನಿರೂಪಣೆ ಮತ್ತು ಪ್ರಸ್ತುತಿ ಆಯೋಜನೆಗೊಂಡಿದೆ. ಸಂಜೆ 4ಕ್ಕೆ ಕಲಾಶಾಲೆಯ ವಿದ್ಯಾರ್ಥಿಗಳಿಂದ ಲಯವಿನ್ಯಾಸ, ವಿದುಷಿ ವರದಾ ಕುಲಕರ್ಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ವಿದೆ. ಸಂಜೆ ಖ್ಯಾತ ವಿದುಷಿ ಸಿಕ್ಕಿಲ್ ಮಾಲಾ ಚಂದ್ರಶೇಖರ್ ಅವರಿಂದ ಕೊಳಲು ವಾದನ ನೆರವೇರಲಿದೆ.

ಪ್ರಾತ್ಯಕ್ಷಿಕೆ – ಉಪನ್ಯಾಸ: 26ರ ಬೆಳಗ್ಗೆ 9.30ಕ್ಕೆ ಕಲಾಶಾಲೆಯ ಮಕ್ಕಳಿಂದ ತಾಳವಾದ್ಯವಿದೆ. ನಂತರ ವಿದ್ವಾನ್ ಡಾ. ವೆಂಕಟೇಶಾಚಾರ್ಯರು ‘ವಿಜಯದಾಸರ ಜೀವನ ದರ್ಶನ ಮತ್ತು ಕೊಡುಗೆಗಳು’ ವಿಷಯ ಕುರಿತು, ವಿದುಷಿ ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಅವರು ‘ ಸಂಗೀತಕ್ಕೆ ಮೈಸೂರು ಒಡೆಯರ ಪ್ರೋತ್ಸಾಹ ಮತ್ತು ಪೋಷಣೆ’ ವಿಷಯ ಲುರಿತು ಪ್ರಾತ್ಯಕ್ಷಿಕೆ – ಉಪನ್ಯಾಸ ನೀಡಲಿದ್ದಾರೆ. ಸಂಜೆ 4ಕ್ಕೆ ಉದಯೋನ್ಮುಖ ಪ್ರತಿಭೆ ಬಿ. ಎಸ್. ಸರ್ವಜಿತ್ ಅವರಿಂದ ಗಾಯನವಿದೆ. ನಂತರ ಪ್ರಖ್ಯಾತ ಗಾಯಕ ವಿದ್ವಾನ್ ಶೆಂಕೋಟ್ಟೈ ಹರಿಹರ ಸುಬ್ರಹ್ಮಣ್ಯಮ್ ಅವರ ಸಂಗೀತ ಕಛೇರಿ ನಡೆಯಲಿದೆ.

ಸುಸ್ವರಲಯ ಬೆಳೆದುಬಂದ ಹಾದಿ: ರಾಜಧಾನಿ ಬೆಂಗಳೂರಿನಲ್ಲಿ 1999 ರಲ್ಲಿ ವಿದ್ವಾನ್ ಎಚ್.ಎಸ್.ಸುಧೀಂದ್ರ ಹಾಗೂ ವಿದ್ವಾನ್ ಬಾಲು ರಘುರಾಮನ್‌ಅವರಿಂದ ಸ್ಥಾಪನೆಗೊಂಡ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಒಂದು ಅಂಗೀಕೃತ ಸಂಸ್ಥೆಯಾಗಿ ಭಾರತೀಯ ಪರಂಪರೆಯ ಪ್ರದರ್ಶಿತ ಕಲೆಗಳನ್ನು ಪೋಷಿಸಿ ಬೆಳೆಸುವ ಘನ ಉದ್ದೇಶ ಹೊಂದಿದೆ. ಕಲಾಶಾಲೆಯು ಪರಿಣತ ವಿದ್ವಾಂಸರ ತಂಡವನ್ನು ಹೊಂದಿದೆ. ಯುವ ಮತ್ತು ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡುವುದರೊಂದಿಗೆ ಬೋಧಪ್ರದವಾದ, ಆಸಕ್ತಿಯಿಂದಕೂಡಿದ ಸಂಗೀತ ಕಛೇರಿಗಳನ್ನೂ ಆಗಾಗ್ಗೆ ಆಯೋಜಿಸುತ್ತದೆ.

ಕಳೆದ 23 ವರ್ಷಗಳಿಂದ ವಾದನ, ಹಾಗೂ ತಾಳವಾದ್ಯ ಕ್ಷೇತ್ರಗಳಲ್ಲಿ ಶಿಕ್ಷಣನೀಡುತ್ತಾ ಬಂದಿದೆ. ಸಾಹಿತ್ಯ ಮತ್ತು ಲಯದ ತಿಳಿವಳಿಕೆಗೆ ವಿಶೇಷ ಆದ್ಯತೆ ನೀಡುವ ಮಹತ್ತರವಾದ ಸೇವೆ ಮಾಡುತ್ತಿದೆ. ಈ ಶಾಲೆಯ ಆಶ್ರಯದಲ್ಲಿ ಬೆಳೆದ ನೂರಾರು ಕಲಾವಿದರುಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ, ದೇಶ- ವಿದೇಶಗಳಲ್ಲಿ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿ ಖ್ಯಾತರಾಗಿರುವುದು ಹೆಮ್ಮೆಯ ಸಂಗತಿ .

ಕಲೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ವಿದ್ವಾನ್ ಎಚ್.ಎಸ್.ಸುಧೀಂದ್ರ ಈ ಪ್ರೌಢ ಸಂಗೀತ ಕಲಾಶಾಲೆಯ ಸಾಧನೆಗಳ ಹಿಂದಿನ ರೂವಾರಿ. ಶಾಲೆಯ ಪ್ರಾಂಶುಪಾಲರಾಗಿ ಇವರು ಅಹರ್ನಿಷಿ ಸೇವೆ ಸಲ್ಲಿಸುತ್ತಿರುವುದು ಕಲಾರಂಗದ ಸುಕೃತವೇ ಆಗಿದೆ.

 
 
 
 
 
 
 
 
 
 
 

Leave a Reply