ಮುಂಬಯಿ ವಾಪಸಿಗರ ಸಮ್ಮಿಲನ ಸರ್ವಾಧ್ಯಕ್ಷರಾಗಿ ಡಾ.ಎ.ಸುಬ್ಬಣ್ಣ ರೈ

ಉಡುಪಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ (ರಿಜಿಸ್ಟ್ರಾರ್) ಆಗಿರುವ ಗಡಿನಾಡ ಕನ್ನಡಿಗ -ತುಳುವ ಡಾ.ಸುಬ್ಬಣ್ಣ ರೈ ಅವರು ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಐತಿಹಾಸಿಕ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ವಿಶ್ವ ಮಾಧ್ಯಮ ಚಕ್ರವರ್ತಿ ಗೌರವಕ್ಕೆ ಪಾತ್ರರಾಗಿರುವ ಡಾ.ಶೇಖರ ಅಜಕೆಕಾರು ತಿಳಿಸಿದ್ದಾರೆ

ಕರಾವಳಿಗರ ಎರಡನೇ ತವರು ಎಂದೇ ಖ್ಯಾತವಾಗಿರುವ ಮುಂಬಯಿ ಕನ್ನಡಿಗರು ತುಳು-ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರರು. ನಿವೃತ್ತರಾಗಿ, ಊರಿನ ಅನಿವಾರ್ಯತೆಯಿಂದ, ಸೋಲು- ಗೆಲುವುಗಳಿಂದಾಗಿ ಊರಿಗೆ ಬಂದು ನೆಲೆಸಿದ್ದಾರೆ. ಮುಂಬಯಿಯಲ್ಲಿದ್ದು ಬಳಿಕ ಊರಿಗೆ ವಾಪಸು ಬಂದು ನೆಲೆಸಿರುವವರು ಒಂದು ದಿನ ಸಮ್ಮಿಲನವಾಗ ಬೇಕು. ಅಂತ ಮುಂಬಯಿಯಿಂದ ವಾಪಸು ಬಂದು ಊರಲ್ಲಿ ನೆಲೆಸಿರುವರನ್ನು ಒಂದು ಸೂರಿನಡಿ ತರುವ ಪ್ರಯತ್ನ ಇದಾಗಿದೆ.
ಉಡುಪಿ ಜಿಲ್ಲೆಯ ರಜತ ಸಂಭ್ರಮ, ಕನ್ನಡ ಸೇವಾ ಸಂಘ ಪೊವಾಯಿ ಇದರ ಬೆಳ್ಳಿ ಹಬ್ಬದ ಸಂದರ್ಬದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿತವಾಗಿದೆ. ಡಾ.ಶೇಖರ ಅಜೆಕಾರು ಅವರು ಕನ್ನಡ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದಾರೆ.

ಸಮ್ಮೇಳನಾಧ್ಯಕ್ಷ ಡಾ.ಎ.ಸುಬ್ಬಣ್ಣ ರೈ
ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು ಕುರಿತು ಡಾ. ತಾಳ್ತಜೆ ಅವರ ಮಾರ್ಗದರ್ಶನದಲ್ಲಿ ಸಂಪ್ರಬಂಧ ರಚಿಸಿ ಮುಂಬಯಿ ವಿಸ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಡಾ. ರೈ ಅವರು ಹಿರಿಯ ಸಂಶೋಧಕರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ವಿಷಯಗಳಲ್ಲಿ ಆಸಕ್ತರಾಗಿರುವ ಅವರು ಕಳೆದ 30 ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿ ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿಕೊಂಡಿರುವ ಅನುಭವ ಅವರದ್ದಾಗಿದೆ. ಹಲವಾರು ವಿದ್ಯಾರ್ಥಿಗಳು ರೈ ಅವರ ಮಾರ್ಗದರ್ಶನದಲ್ಲಿ ಮಹತ್ವದ ವಿಷಯಗಳನ್ನು ಅಧ್ಯಯನ ಮಾಡಿ ಎಂ.ಫಿಲ್ ಮತ್ತು ಪಿಎಚ್ ಡಿ ಪದವಿ ಪಡೆದಿದ್ದಾರೆ.
ಹೊಸಕನ್ನಡದಲ್ಲಿ ಕಥನ ಕವನಗಳು ವಿಷಯದಲ್ಲಿ ಅವರು ಮದರಾಸು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ.
ಅವರ ಕೃತಿಗಳು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು, ಪ್ರೊ. ಕೀರ್ತಿನಾಥ ಕುರ್ತಕೋಟಿ, ಗಾಳೆಮ್ಮ, ಕದ್ರಿ, ದ್ರಾವಿ ಸಂಸ್ಖೃತಿ, ಬ್ಯಾರಿ ಸಂಸ್ಕೃತಿ ಮತ್ತು ಭಾಷೆ, ಹೊಸ ಪೇಟೆ ತಾಲೂಕು ದರ್ಶನ (ಇತರರೊಂದಿಗೆ), ದ್ರಾವಿಡ ನಿಘಂಟು (ಇತರರೊಂದಿಗೆ.) ಇನ್ನೂ ಅನೇಕ ಕೃತಿಗಳು ಬೆಳಕು ಕಾಣ ಬೇಕಾಗಿವೆ.
ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿಗೆ ಅವರ ದ.ಕ ಜಿಲ್ಲೆಯ ಐತಿಹ್ಯ ಕೃತಿ ಪಾತ್ರವಾಗಿದೆ. ಉಡುಪಿ ಜಿಲ್ಲಾ ಅಕಳಂಕ ದತ್ತಿ ಪುರಸ್ಕಾರ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕರ್ನಾಟಕ ಸಂಶೋಧನಾ ರತ್ನ ಗೌರವ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

 
 
 
 
 
 
 
 
 
 
 

Leave a Reply