ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ವಿಶ್ವಾಸ ವೃದ್ಧಿಯಾಗಲಿ : ಕಿಶೋರ್ ಕುಮಾರ್ ಕೊಡ್ಗಿ

ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗವು ಮಾರ್ಚ್ 19_ಮಂಗಳವಾರದಂದು ಬಿದ್ಕಲಕಟ್ಟೆಯ ಶ್ರೀ ನಾಗಲಕ್ಷ್ಮಿ ಸಭಾಭವನದಲ್ಲಿ ಜರುಗಿತು.

ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಿಶೋರ ಕುಮಾರ ಕೊಡ್ಗಿಯವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ಅಭ್ಯಾಸ ವರ್ಗವು ಸಹಕಾರಿ ಸಂಘಗಳ ಹೊಸ ಕಾಯ್ದೆ ಕಾನೂನುಗಳ ಪರಿಜ್ಞಾನವನ್ನು ಮೂಡಿಸಿಕೊಳ್ಳಲು ಮತ್ತು ಸಹಕಾರಿ ಜ್ಞಾನವನ್ನು ಪಸರಿಸಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂದು ಶುಭ ಹಾರೈಸಿದರು.

ಕುಂದಾಪುರ ತಾಲೂಕಿನ ಸಹಕಾರ ಭಾರತೀಯ ತಾಲೂಕು ಅಧ್ಯಕ್ಷರಾದ ಶ್ರೀ ದಿನಪಾಲ ಶೆಟ್ಟಿಯವರು ವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಲೋಕಸಭಾ ಚುನಾವಣೆಯ ನಂತರ ಕುಂದಾಪುರ ತಾಲೂಕಿನಲ್ಲಿ ಸಹಕಾರಿಗಳ “ಬೃಹತ್ ಸಮಾವೇಶ” ವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. 

ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಶುದ್ಧತೆ, ಬದ್ಧತೆ ಮತ್ತು ಆಧುನಿಕರಣಕ್ಕಾಗಿ ಸಹಕಾರ ಭಾರತಿ ಕಳೆದ ನಾಲ್ಕೂವರೆ ದಶಕಗಳಿಂದ ದೇಶಾದ್ಯಂತ ಸಂಘಟನಾತ್ಮಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸಕ್ರಿಯ ಕಾರ್ಯ ಚಟುವಟಿಕೆಗಳ ಮೂಲಕ ಎಲ್ಲಾ ಗ್ರಾಮಮಟ್ಟದ ಸಹಕಾರಿ ಸಂಸ್ಥೆಗಳನ್ನು ಮುಟ್ಟುವ ಪ್ರಯತ್ನ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಶ್ರೀ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, ದೇಶದಲ್ಲಿ ಈಗಾಗಲೇ 8 ಲಕ್ಷ ಸಹಕಾರಿ ಸಂಸ್ಥೆಗಳ ದತ್ತಾಂಶಗಳನ್ನು ಕೇಂದ್ರ ಸರಕಾರವು ಸಹಕಾರಿ ಇಲಾಖೆಯ ಮೂಲಕ ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಏಕರೂಪದ ತಂತ್ರಾಂಶದ ಮೂಲಕ ಸಹಕಾರಿ ಸಂಸ್ಥೆಗಳ ವ್ಯವಹಾರದ ಎಲ್ಲಾ ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.

ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿನ ದರ ಏರಿಕೆಯ ಬಗ್ಗೆ ಈ ಹಿಂದೆ ಎರಡು ಬಾರಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಸಹಕಾರ ಭಾರತಿ ಪ್ರತಿಭಟನ ಸಭೆಗಳನ್ನು ನಡೆಸಿ ಸರಕಾರದ ಗಮನವನ್ನು ಸೆಳೆದಿತ್ತು.

ಇದೀಗ ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಬಿಡುಗಡೆ ಮಾಡಲು, ಪಶು ಆಹಾರಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ಸಬ್ಸಿಡಿ ಮತ್ತು ಪ್ರೋತ್ಸಾಹ ಧನವನ್ನು ಈಗಿರುವ ಐದು ರೂಪಾಯಿಯಿಂದ 10 ರೂಪಾಯಿಗೆ ಏರಿಸಲು ಹಾಗೂ 2019 ರ ಜಾನುವಾರು ಗಣತಿಯ ಪ್ರಕಾರ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳನ್ನುಮುಚ್ಚಲು ಹೊರಟಿರುವ ಸರಕಾರದ ನಿರ್ಧಾರದ ವಿರುದ್ಧ ರಾಜ್ಯ ವ್ಯಾಪಿ ಹೋರಾಟವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೈನುಗಾರರ ವಿವಿಧೋದ್ದೇಶ ಸಂಘಗಳನ್ನಾಗಿ ಪರಿವರ್ತಿಸಲು, ಲಭ್ಯವಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಮುಂದಿನ ದಿನಗಳಲ್ಲಿ ಸಹಕಾರ ಭಾರತಿ ವಿಚಾರ ಸಂಕಿರಣಗಳನ್ನು ಆಯೋಜಿಸಲಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಮಾಹಿತಿ ಶಿಬಿರದ ಮೊದಲ ಅವಧಿಯಲ್ಲಿ “ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆ”ಯ ಬಗ್ಗೆ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ *ಶ್ರೀ ಮೋಹನ್ ಕುಮಾರ್ ಕುಂಬಳೇಕರ್ ರವರು ಸವಿವರ ವಾದ ಮಾಹಿತಿ ಮಾರ್ಗದರ್ಶನ ನೀಡಿದರು.

ಸಹಕಾರಿ ಕಾಯಿದೆ ಮತ್ತು ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆ ಕುರಿತು ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಕಿರಿಯ ಸಹಾಯಕರಾದ ಶ್ರೀ ವಿನಾಯಕ ಕನ್ನಂತರವರು ಸುಧೀರ್ಘವಾದ ಮಾಹಿತಿ ಮಾರ್ಗದರ್ಶನ ನೀಡಿ ಸಹಕಾರಿಗಳ ಜೊತೆಗೆ ನೇರ ಸಂವಾದ ನಡೆಸಿದರು.

ಸಮಾರೋಪ ಸಮಾರಂಭ : ಸಹಕಾರ ಭಾರತಿ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರು ಹಾಗೂ ಖ್ಯಾತ ವಕೀಲರಾದ ಶ್ರೀ ಮಂಜುನಾಥ ಎಸ್ಕೆ ಯವರು ರಾಜ್ಯ ಸರಕಾರವು ಸಹಕಾರಿ ಕಾಯ್ದೆಯಲ್ಲಿ ತಂದಿರುವ ನೂತನ ತಿದ್ದುಪಡಿಗಳ ಬಗ್ಗೆ ಮಾಹಿತಿ ನೀಡಿದರು.

 ಬಿದ್ಕಲ್ ಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ದಾಸ ಶೆಟ್ಟಿಯವರು ಸ್ವಾಗತಿಸಿ ,ಸಹಕಾರ ಭಾರತಿ ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಣೆ ಗೈದರು.

 
 
 
 
 
 
 
 
 
 
 

Leave a Reply