ಮಾಯಾನಗರಿಯಲ್ಲೊಂದು “ಗೋಕುಲ”ವೆಂಬ ಮುಕುಟಮಣಿ 

ವಾಣಿಜ್ಯ ನಗರಿ ಮುಂಬಯಿಯಲ್ಲಿ ನವೀಕೃತ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರ ಅದ್ದೂರಿ ಬ್ರಹ್ಮಕಲಶ ಕ್ಕೆ ಸಜ್ಜಾಗುತ್ತಿದೆ.
ಮುಂಬಯಿ: ಪುಣ್ಯ ಭೂಮಿ ಭಾರತದ ಪ್ರಸಿದ್ಧ ರಾಜ್ಯ ಮಹಾರಾಷ್ಟದಲ್ಲಿನ ಮಾಯಾನಗರಿ ಎಂದೇ ಪ್ರಸಿದ್ಧವಾಗಿರುವ ವಾಣಿಜ್ಯ ನಗರಿ ಮುಂಬಯಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಸಂಘ ಸಂಸ್ಥೆಗಳು ನೂರಾರು. ಅವುಗಳಲ್ಲಿ, ಮುಂಬಯಿ ಮಹಾನಗರಿಯ ಹೃದಯ ಭಾಗದಲ್ಲಿರುವ ಬ್ರಾಹ್ಮಣರದ್ದೇ ಆದ ಪ್ರತಿಷ್ಠಿತ ಸಂಸ್ಥೆ- ತುಳು ನಾಡಿನಿಂದ  ಆಗಮಿಸಿ ಇಲ್ಲಿ ನೆಲೆಯಾದ ಹಿರಿಯರಿಂದ ಸ್ಥಾಪಿತವಾದ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ-ಬಾಂಬೆ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಷನ್ (ಬಿ.ಎಸ್.ಕೆ.ಬಿ.ಎ) ಮುಂಬಯಿ ಮಹಾನಗರಿಯ ಹೃದಯ ಭಾಗದಲ್ಲಿ ಗೋಕುಲ; ಎಂದೇ ಪ್ರಸಿದ್ಧಿ ಪಡೆದ ಸಂಸ್ಥೆ ಬಿಎಸ್‌ಕೆಬಿಎ ಸಾಯನ್.
ಸ್ಥಾಪಕ ಸದಸ್ಯರುಗಳಾದ ಡಾ| ಯು.ಬಿ ನಾರಾಯಣ ರಾವ್, ಕುಡ್ಪಿ ಭುಜಂಗ ರಾವ್, ಮಂಕೀ ಶ್ರೀನಿವಾಸ್ ರಾವ್, ಯು.ರಾಮಚಂದ್ರ ಆಚಾರ್, ಯು.ವಿ ಉಪಾಧ್ಯಾಯ, ಬಪ್ಪನಾಡು ಸುಬ್ಬ ರಾವ್, ಬಿ.ಎಸ್ ತಂತ್ರಿ, ಡಾ| ಯು.ಆರ್. ರಾವ್, ಕೆ.ಎಸ್.ಎನ್ ಹೆಬ್ಬಾರ್ ಮತ್ತು ಕೇಶವಯ್ಯ ಮುಂತಾದವರು, ಉದ್ಯೋಗವನ್ನು ಅರಸಿಕೊಂಡು ಮುಂಬಯಿಗೆ ಆಗಮಿಸಿ ಇಲ್ಲಿ ನೆಲೆಯಾಗಿದ್ದ, ದಕ್ಷಿಣ ಕನ್ನಡ ಬ್ರಾಹ್ಮಣ ಸಮುದಾಯದವರನ್ನೆಲ್ಲಾ ಒಟ್ಟುಗೂಡಿಸಿ ಒಂದು ಸಂಘವನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡರು.
ಅಂತೆಯೇ ಅಂದಿನ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣ ಸಮುದಾಯದ 8 ಪಂಗಡಗಳಾದ ಶಿವಳ್ಳಿ, ಸ್ಥಾನಿಕ,ಕೋಟ, ಹವ್ಯಕ, ಕಂದಾವರ, ಕೋಟೇಶ್ವರ, ಚಿತ್ಪಾವನ, ಮತ್ತು ಕರಾಡ್ ಬ್ರಾಹ್ಮಣರನ್ನೆಲ್ಲಾ ಸಂಘಟಿಸಿ, 1925ರಲ್ಲಿ ಬಾಂಬೆ ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘವನ್ನು ಸ್ಥಾಪಿಸಿದರು. ಕೇವಲ 10 ಸದಸ್ಯರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ವರ್ಷಾಂತ್ಯದಲ್ಲಿ 60 ಸದಸ್ಯತ್ವವನ್ನು ಹೊಂದಿತು. ಎಲ್ಲಾ ಪಂಗಡಗಳ ಬ್ರಾಹ್ಮಣರನ್ನು, ಯಾವ ವಿಧದ ತಾರತಮ್ಯವಿರದಂತೆ ಒಂದು ವೇದಿಕೆಯಲ್ಲಿ ಒಂದುಗೂಡಿಸುವುದು ಸಂಸ್ಥೆಯ ಸ್ಥಾಪನೆಯ ಮೂಲ ಉದ್ದೇಶ ಆಗಿತ್ತು.
ಬ್ರಾಹ್ಮಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು, ಆರ್ಥಿಕವಾಗಿ ದುರ್ಬಲರಾದ ಸಮಾಜ ಬಾಂಧವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿವಿದ್ಯಾರ್ಥಿ ವೇತನದ ಮೂಲಕ ಧನ ಸಹಾಯ ನೀಡುವುದು, ಉದ್ಯೋಗವನ್ನರಸಿ ಬಂದವರಿಗೆ ಸಹಾಯ ಮಾಡುವುದು ಮುಂತಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಹಾಗೂ ಸಾಂಸ್ಕೃತಿಕ  ಬೆಳವಣಿಗೆಯ ಉನ್ನತ ಧ್ಯೇಯಗಳೊಂದಿಗೆ ಸಂಸ್ಥೆ ಪ್ರಾರಂಭವಾಯಿತು.
1925 ರಲ್ಲಿ ಸಂಘ ಕಾರ್ಯಾರಂಬಗೊಂಡು  ಯಶಸ್ಸಿನ ಮೆಟ್ಟಲನ್ನೇರುತ್ತಾ ತನ್ನ ಸಾರ್ಥಕ 95ವರ್ಷಗಳನ್ನು ಪೂರೈಸಿದೆ. ಸಂಸ್ಥೆಯ ಈ ಯಶೋಗಾಥೆಯ ಹಿಂದಿನ ಹಾದಿ ಸುಗಮವಾಗಿರಲಿಲ್ಲ. ಅಂದಿನ ಕಾಲದಲ್ಲಿ ಕೇವಲ3 ರೂಪಾಯಿ ಮಾತ್ರ ಸದಸ್ಯತ್ವದ ದೇಣಿಗೆ ಹೊಂದಿದ್ದರೂ ಅದನ್ನು ಸದಸ್ಯರಿಂದ ಸಂಗ್ರಹಿಸಲು ತುಂಬಾ ಕಷ್ಟವಾಗುತ್ತಿತ್ತು.
ಆದ್ದರಿಂದ ಸುಮಾರು 11 ವರ್ಷಗಳ ಕಾಲ ಚಟುವಟಿಕೆಗಳಿಲ್ಲದೆ ಸಂಘ ಪ್ರಗತಿಯನ್ನು ಕಾಣಲಿಲ್ಲ.2936 ರಲ್ಲಿ ಚೌಪಾಟಿ ವಲಯದಲ್ಲಿ ಪ್ರಸಿದ್ಧ ವೈದ್ಯರಾಗಿದ್ದ ಡಾ. ಯು. ಆರ್ ರಾವ್ ಹಾಗೂ ಕೆ.ಕೃಷ್ಣ ಹೆಬ್ಬಾರ್, ಅರ್ಕುಳ ವೆಂಕಟ್ ರಾವ್, ಪಿ. ಮುರಾರಿ ಭಟ್ ಮತ್ತು ಸಿಎ| ಆರ್.ಕೆ ಕಾರಂತ್‌ ಮುಂತಾದವರು  ಸಂಘವನ್ನು ಪುನಶ್ಚೇತನಗೊಳಿಸಲು ಮುತುವರ್ಜಿ ವಹಿಸಿದರು.
1947ರಲ್ಲಿ ಭಾರತದ ಸ್ವಾತಂತ್ರ‍್ಯೋತ್ಸವವನ್ನು ಸಂಘವು ಅತ್ಯಂತ ಅದ್ದೂರಿಯಿಂದ  ಆಚರಿಸಿತು. ಅಂದಿನಿಂದ ಸಂಘವು ಹಿಂತಿರುಗಿ ನೋಡದೆ ಭವಿಷ್ಯದತ್ತ ದಾಪುಗಾಲನ್ನು ಹಾಕುತ್ತಾ ಮುಂದುವರಿಯಿತು. ಮುಂದೆ ಸಂಘದ ಚಟುವಟಿಕೆಗಳನ್ನು ನಡೆಸಲು ಒಂದು ವೇದಿಕೆಯ ಅಗತ್ಯತೆಯನ್ನು ಮನಗಂಡಂತ  ಗಣ್ಯರು, 1954ರಲ್ಲಿ ಅಂದಿನ ಸರಕಾರದಿಂದ 999 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸಾಯನ್ ನಲ್ಲಿ ಈಗ ಕಟ್ಟಡವಿರುವ ಜಾಗವನ್ನು ಪಡೆದರು. ಕೆನರಾ ಬ್ಯಾಂಕ್‌ನಲ್ಲಿ ಆಡಳಿತ ನಿರ್ದೇಶಕರಲ್ಲಿ ಒಬ್ಬರೂ ಆಗಿದ್ದ ಕುಡ್ಪಿ ಭುಜಂಗ ರಾವ್ ಅವರು ತನ್ನ ದೇಣಿಗೆಯಾಗಿ ರೂ.25,000/- ನೀಡಿ , ಕೆನರಾ ಬ್ಯಾಂಕಿನಿಂದ ಸಾಕಷ್ಟು ಮೊತ್ತದ ಸಾಲವನ್ನು ಪಡೆಯಲು ಕಾರಣೀಭೂತರಾದರು.ಹೀಗೆ ಹಲವಾರು ಪ್ರಾತಃಸ್ಮರಣೀಯರ ಕಠಿಣ ಪರಿಶ್ರಮದ ಫಲವಾಗಿ 1958 ರಲ್ಲಿ ಗೋಕುಲ ಕಟ್ಟಡ ನಿರ್ಮಾಣ ವಾಯಿತು. ಆದರೆ ಆರ್ಥಿಕ  ಅಡಚಣೆಯಿಂದಾಗಿ ಶ್ರೀ ಕೃಷ್ಣ ಮಂದಿರ ನಿರ್ಮಾಣವಾಗಲು ಮತ್ತೆ ಮೂರು ವರ್ಷಗಳು ಹಿಡಿದವು. 1962ರಲ್ಲಿ ಯು.ವಿ ಉಪಾಧ್ಯಾಯರವರ ದಕ್ಷ ಮೇಲುಸ್ತುವಾರಿಕೆಯಲ್ಲಿ ಶ್ರೀ ಕೃಷ್ಣ ಮಂದಿರವನ್ನೊಳಗೊಂಡ ಸುಂದರ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಅದಮಾರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಬುಧೇಶ ತೀರ್ಥರು ಹಾಗೂ ಪೇಜಾವರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥರು ತಮ್ಮ ತಮ್ಮ ದೇಣಿಗೆಯನ್ನಿತ್ತು ಅನುಗ್ರಹಿಸಿದರು.

ಹಾಲು ಬಿಳುಪಿನ, ಹಸನ್ಮುಖಿ ಶ್ರೀ ಗೋಪಾಲಕೃಷ್ಣನ ಅಮೃತ ಶೀಲಾಮೂರ್ತಿಯನ್ನು ರಾಜಸ್ಥಾನೀ ಭಕ್ತರೋರ್ವರು ದೇಣಿಗೆ ಆಗಿತ್ತರು. ಉಭಯ ಯತಿವರ್ಯರ ಅಮೃತ ಹಸ್ತಗಳಿಂದ ಗೋಕುಲ ಶ್ರೀ ಕೃಷ್ಣಮಂದಿರ ಲೋಕಾರ್ಪಣೆ ಗೊಂಡಿತು. ಅಂದಿನಿಂದ ಸಂಸ್ಥೆಯ ಸದಸ್ಯತ್ವವು ಗಣನೀಯವಾಗಿ ಬೆಳೆಯುತ್ತಾ ಬಂದು ಇಂದು ಸುಮಾರು 5500 ಸದಸ್ಯರನ್ನೊಳಗೊಂಡ ಹೆಮ್ಮರವಾಗಿ, ಮುಂಬಯಿಯ ಪ್ರತಿಷ್ಠಿತ ಸಂಸ್ಥೆಯಾಗಿ ಮೆರೆಯುತ್ತಿದೆ. ಗೋಕುಲದ ಶ್ರೀ ಗೋಪಾಲಕೃಷ್ಣ ಸದಸ್ಯರಿಗೆ ಮಾತ್ರವಲ್ಲ ಸುತ್ತುಮುತ್ತಲಿನ ಅಸಂಖ್ಯ ಭಕ್ತಾದಿಗಳಿಗೆ ಆರಾಧ್ಯ ಮೂರ್ತಿಯಾಗಿ ಅನುಗ್ರಹಿ ಸುತ್ತಿದ್ದಾನೆ.

ಇಂದು ಮುಂಬಯಿಯಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲು ಆತನ ಕೃಪಾಕಟಾಕ್ಷವೇ ಕಾರಣವೆಂದರೆ ಖಂಡಿತಾ ಅತಿಶಯೋಕ್ತಿಯಾಗ ಲಾರದು. ಅಭಿವೃದ್ಧಿಗಾಗಿ ಅತ್ಯಂತ ಶ್ರಮ ವಹಿಸಿದ್ದಾರೆ. ಸಂಸ್ಥೆಯು 1953ರಲ್ಲಿ ರಜತ ಮಹೋತ್ಸವ, 1975ರಲ್ಲಿ ಸ್ವರ್ಣ ಮಹೋತ್ಸವ, 1985ರಲ್ಲಿ ವಜ್ರ ಮಹೋತ್ಸವ ಹಾಗೂ 2000ನೇ ಇಸವಿಯಲ್ಲಿ ಅಮೃತಮಹೋತ್ಸವವನ್ನು ಸಂಭ್ರಮದಿಂದ  ಆಚರಿಸಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಸಮಾಜಕ್ಕೆ ಒಂದು ಉತ್ತಮ ಕೊಡುಗೆಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡ ಕಾರ್ಯಕಾರೀ ಸಮಿತಿ, ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣವನ್ನು ನಿರ್ಮಾಣ ಮಾಡಲು ನಿರ್ಧರಿಸಿತು.

ಎಲ್ಲರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ನೇರೂಲ್‌ನಲ್ಲಿ 1825 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಒಂದು ಹವಾ ನಿಯಂತ್ರಿತ ಸಭಾಗೃಹ, ಒಂದು ಕಿರು ಸಭಾಗೃಹ, ಬ್ಯಾಂಕ್ ಹಾಗೂ ಸುಮಾರು 50ಹಿರಿಯ ನಾಗರಿಕರು ನೆಮ್ಮದಿಯಿಂದ ನೆಲೆಸಲು ಅನುಕೂಲವಾಗುವಂತಹ `ಆಶ್ರಯ: ಕಟ್ಟಡ ನಿರ್ಮಾಣ ಗೊಂಡಿತು. ಸುಮಾರು 10ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ, ಸಮುದಾಯದ ಉದಾರಿ ದಾನಿಗಳು ಕೂಡಾ ತಮ್ಮ ತನು- ಮನ-ಧನದ ಅಮೂಲ್ಯ ದೇಣಿಗೆ ಯನ್ನಿತ್ತು ಸಹಕರಿಸಿದ್ದಾರೆ. ಸದಸ್ಯರೆಲ್ಲರ ಪ್ರಯತ್ನದ ಫಲವಾಗಿ 2019ರಲ್ಲಿ ಹಿರಿಯ ನಾಗರಿಕರ ಆಶ್ರಯಧಾಮ ಆಶ್ರಯದ ಶುಭಾರಂಭವು ಪೇಜಾವರ ಮಠಾಧೀಶ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಶುಭ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು.

ಸಂಸ್ಥೆಯು ಯುವ ವಿಭಾಗ, ಮಹಿಳಾ ವಿಭಾಗ, ಕಲಾವೃಂದ, ಭಜನಾ ಮಂಡಳಿ, ಯಕ್ಷಗಾನ ಮಂಡಳಿ ಮುಂತಾದ ವುಗಳನ್ನು ಹೊಂದಿದ್ದು, ವರ್ಷವಿಡೀ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ವಿಧಿವತ್ತಾಗಿ ಆಚರಿಸುತ್ತಾ ಸಮಾಜ ಬಾಂಧವರ  ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹವನ್ನು ಕೊಡುತ್ತಾ ಹಲವಾರು ಸಾಹಿತಿಗಳು/ ವಿಜ್ಞಾನಿಗಳು ಹಾಗೂ ಕಲಾವಿದರನ್ನು ಮುಂಬಯಿ ನಗರಿಗೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು ನಮ್ಮ ಜನ್ಮಭೂಮಿಯ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.

ಸಾಮಾಜಿಕ ಕ್ಷೇತ್ರದಲ್ಲಿ, ಸ್ವಾತಂತ್ರ‍್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಇತ್ಯಾದಿಗಳನ್ನು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತಿದೆ. ಸಂಘದ ಮುಖಪತ್ರಿಕೆ ಗೋಕುಲವಾಣಿ: ಎಂಟು ವರ್ಷಗಳ ಹಿಂದೆ ರಜತ ಮಹೋತ್ಸವವನ್ನು ಸಂಭ್ರಮದಿಂದ   ಆಚರಿಸಿರುವ `ಗೋಕುಲವಾಣಿ, ತಜ್ಞ ಸಂಪಾದಕ ಮಂಡಳಿ, ಖ್ಯಾತ ಸಾಹಿತಿ ಡಾ| ವ್ಯಾಸರಾವ್ ನಿಂಜೂರ್ ಅವರ ಸಂಪಾದಕತ್ವದಲ್ಲಿ ಮುಂಬಯಿಯ ಪ್ರತಿಷ್ಠಿತ ಪತ್ರಿಕೆಯಾಗಿ ಪ್ರಸಿದ್ಧಿಯನ್ನು ಪಡೆದಿದೆ. ಸಂಘದ ಆಗುಹೋಗುಗಳಲ್ಲದೆ, ಮುಂಬಯಿಯ ಹಾಗೂ ಕರ್ನಾಟಕದ ಖ್ಯಾತ ಸಾಹಿತಿಗಳ, ಆರ್ಥಿಕ ತಜ್ಞರ, ವೈದ್ಯರ, ಮಠಾಧೀಶರ ವೈಚಾರಿಕ ಲೇಖನಗಳನ್ನೊಳಗೊಂಡು ಕುಟುಂಬದ ಸರ್ವ ಸದಸ್ಯರು ಓದುವಂತಹ ಮಾಸಿಕ ಪತ್ರಿಕೆಯಾಗಿದೆ.

ಈ ಯೋಜನೆಯಡಿ ಜೀರ್ಣಾವಸ್ಥೆಯಲ್ಲಿರುವ ಗೋಕುಲದ ಪುನರ್ ನಿರ್ಮಾಣ, ವಿದ್ಯಾನಿಧಿ ಸ್ಥಾಪನೆ ಹಾಗೂ ಆಶ್ರಯದ ವಿಸ್ತರಣೆ ಮುಂತಾದ ಬೃಹತ್ ಯೋಜನೆಗಳನ್ನುಸಂಘವು ಅಳವಡಿಸಿಕೊಂಡಿದೆ. ಈ ಎಲ್ಲಾ ಯೋಜನೆಗಳು ಸುಲಲಿತವಾಗಿ ನೆರವೇರಲು, ಮಾನವನ ಪ್ರಯತ್ನದೊಂದಿಗೆ ದೈವಾನುಗ್ರಹ ಅತ್ಯಂತ ಅಗತ್ಯವೆಂದು  ಕಲಿಯುಗದ ಕಾಮಧೇನು, ಶ್ರೀ ಶ್ರೀನಿವಾಸ ದೇವರ ಅನುಗ್ರಹ ಪ್ರಾಪ್ತಿಗಾಗಿ ನವಂಬರ್ 29,2015 ರಂದು ಷಣ್ಮುಖಾನಂದ ಸಭಾಗೃಹದಲ್ಲಿ ಶ್ರೀ ಶ್ರೀನಿವಾಸ  ಕಲ್ಯಾಣೋತ್ಸವವನ್ನು ತಿರುಮಲ ತಿರುಪತಿ ದೇವಸ್ಥಾನದ ಸಹಯೋಗದೊಂದಿಗೆ ವಿಜೃಂಭಣೆಯಿಂದ
ಆಚರಿಸಿದೆ.

ಗೋಕುಲದ ಯೋಜನೆಗಳು: ಗುರಿ 2020 : ವಿದ್ಯಾನಿಧಿ: ಶಿಕ್ಷಣವೆಂಬುದು ಈಗ ಅತ್ಯಂ ತ ದುಬಾರಿಯಾಗಿದೆ. ಹಿಂದುಳಿದ  ವರ್ಗದವರಿಗೆ ಸರಕಾರ ಮೀಸಲಾತಿಯ ಸೌಲಭ್ಯವನ್ನು ಒದಗಿಸಿ ಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡುತ್ತಿದೆ. ಆದರೆ ಬ್ರಾಹ್ಮಣ ವರ್ಗದವರಿಗೆ ಪ್ರತಿಭೆಯಿದ್ದರೂ ಹಣದ ಕೊರತೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿಕೊಳ್ಳಲು ಹರ ಸಾಹಸ ಪಡಬೇಕಾಗುತ್ತದೆ.
ಅದರಲ್ಲಿಯೂ ವೃತ್ತಿಪರ ಶಿಕ್ಷಣವೆಂಬುದು ಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ. ಹೆಚ್ಚಿನ ವೃತ್ತಿಪರ ಶಿಕ್ಷಣಗಳಿಗೆ ಲಕ್ಷೋಪಲಕ್ಷ ಶಿಕ್ಷಣಶುಲ್ಕ, ದುಬಾರಿ ಪುಸ್ತಕಗಳು, ವಿದ್ಯಾರ್ಥಿನಿಲಯ ವೆಚ್ಚಗಳು ಮುಂತಾದುವುಗಳನ್ನು ಹೊಂದಿಸಲು ಅವರಿಗೆ ಅತ್ಯಂತ ಕಷ್ಟದಾಯಕ. ಸರಕಾರ, ರಾಜಕೀಯ ಧುರೀಣರು ಅಥವಾ ಶ್ರೀಮಂತ ವರ್ಗದವರು ಇಂತಹಾ ಮಕ್ಕಳಿಗೆ ಸಹಾಯ ಒದಗಿಸಲು ಮುಂದೆ ಬರುವುದಿಲ್ಲ. ಈ ಕಷ್ಟವನ್ನು ಅರಿತ ಸಂಘವು, ಆರ್ಥಿಕವಾಗಿ ದುರ್ಬಲ ಆಗಿರುವ ಪ್ರತಿಭಾವಂತ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವ ಧ್ಯೇಯವನ್ನು ಇಟ್ಟುಕೊಂಡು, ಅಂತಹವರಿಗೆ ಸಾಲ ರೂಪದ ವಿದ್ಯಾರ್ಥಿ ವೇತನವನ್ನು ನೀಡುವುದಕ್ಕಾಗಿ `ವಿದ್ಯಾನಿಧಿಯನ್ನು ಸ್ಥಾಪಿಸಿದೆ..
ಗೋಕುಲದ ಪುನರ್ ನಿರ್ಮಾಣ: ಸುಮಾರು 65ವರ್ಷಗಳಷ್ಟು ಪುರಾತನವಾದ ಗೋಕುಲದ ಕಟ್ಟಡ ಜೀರ್ಣಾವಸ್ಥೆ ಯಲ್ಲಿತ್ತು. ಅಲ್ಲದೆ ಗೋಕುಲದ ಶ್ರೀ ಗೋಪಾಲಕೃಷ್ಣನ ಭಕ್ತರ ಸಂಖ್ಯೆ ಮುಂಬಯಿ ಹಾಗೂ ಉಪನಗರಗಳಲ್ಲಿ ದಿನೇದಿನೇ ಹೆಚ್ಚುತ್ತಿದ್ದು, ವಿಶೇಷ ಹಬ್ಬಗಳ ಸಂದರ್ಭಗಳಲ್ಲಿ, ಸ್ಥಳದ ಅಭಾವದಿಂದ ಭಕ್ತಾದಿಗಳಿಗೆ ಅನನುಕೂಲತೆ, ಆಧುನಿಕತೆಯ ಸೌಲಭ್ಯಗಳ ಕೊರತೆ ಮುಂತಾದುವುಗಳನ್ನು ಮನಗಂಡು  ಸಂಘದ ಕಾರ್ಯಕಾರೀ ಸಮಿತಿಯು, ಪ್ರತ್ಯೇಕ ಶ್ರೀ ಕೃಷ್ಣ ಮಂದಿರ, ಹವಾ ನಿಯಂತ್ರಿತ ಸಭಾಗೃಹ, ಲಿಫ್ಟ್ ಸೌಕರ್ಯ, ಸುಸಜ್ಜಿತ ಪಾಕಶಾಲೆ, ವಾಚನಾಲಯ, ವಸತಿ ಗೃಹ, ಆಡಳಿತ ಕಚೇರಿ, ಸಮಾಲೋಚನಾ ಗೃಹ ಸಾಂಸ್ಕೃತಿಕ  ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಭಾಗೃಹ, ವಾಹನ ಗಳ ನಿಲುಗಡೆಯ ಸೌಕರ್ಯ ಮುಂತಾದ ಅಧುನಿಕ ಸೌಕರ್ಯಗಳನ್ನೊಳಗೊಂಡ ಗೋಕುಲದ ಪುನ:ನಿರ್ಮಾಣದ ಯೋಜನೆ 2015ರಲ್ಲಿ ತುರ್ತಾಗಿ ಕೈಗೆತ್ತಿಕೊಳ್ಳುವ ಸಂಕಲ್ಪವನ್ನು ಮಾಡಿತು.
ಜೀರ್ಣಾವಸ್ಥೆಯಲ್ಲಿದ್ದ ಗೋಕುಲದ ಪುನರ್ ನಿರ್ಮಾಣ ಕಾರ್ಯವು ಪ್ರಸ್ತುತ ಅಧ್ಯಕ್ಷರಾಗಿರುವ ಡಾ. ಸುರೇಶ್ ರಾವ್ ರವರ ನೇತೃತ್ವದಲ್ಲಿ ಆರಂಭವಾಗಿ, ಡಿಸೆಂಬರ್ 2016ರಲ್ಲಿ ಇಲ್ಲಿನ ಆರಾಧ್ಯ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ಮೂಲಾಲಯದಿಂದ ಚಲನೆಗೊಳಿಸಿ ವೈಭವದ ಮೆರವಣಿಗೆಯೊಂದಿಗೆ ನೆರೂಲ್ ನಲ್ಲಿರುವ ಆಶ್ರಯಕ್ಕೆ ತಂದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮುಂದಿನ ಜನಾಂಗದ ಅನುಕೂಲತೆಗಳಿಗನುಗುಣವಾಗಿ ಆಧುನಿಕ ಸೌಲಭ್ಯಗಳುಳ್ಳ ನವ ನವೀನ ಕಟ್ಟಡ ಹಾಗೂ ಶ್ರೀ ಗೋಪಾಲಕೃಷ್ಣನ ಶಿಲಾಮಯ ಮಂದಿರದ ನಿರ್ಮಾಣ ಕಾರ್ಯ ಜನವರಿ 2017 ರಿಂದ ಆರಂಭ ಗೊಂಡು ಇದೀಗ ಅಂತಿಮ ಹಂತದಲ್ಲಿದೆ. ಅಂದಾಜು ರೂಪಾಯಿ 45 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 7ಅಂತಸ್ತುಗಳುಳ್ಳ ಬೃಹತ್ ಸೌಧದಲ್ಲಿ ಎರಡು ತಳಮಜಲುಗಳಲ್ಲಿ ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ (ಒಟ್ಟು 70ಕಾರುಗಳು). ಅಲ್ಲದೆ ಈ ಕೆಳಗಿನ ಸೌಲಭ್ಯಗಳನ್ನು ಹೊಂದಿರುವ ಅತ್ಯಂತ ಸುಂದರವಾದ ಕಟ್ಟಡ ಇದಾಗಿದೆ.
ಈ ಭವ್ಯ ಕಟ್ಟಡದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳಿಗಾಗಿ ಸುಮಾರು 225ಆಸನಗಳುಳ್ಳ 1ಸುಸಜ್ಜಿತ ಹವಾ ನಿಯಂತ್ರಿತ ಸಭಾಗೃಹ, 2 ದೊಡ್ಡ ಸಭಾಂಗಣಗಳು, ಭೋಜನ ಗೃಹ, ಆಧುನಿಕ ಸೌಕರ್ಯಗಳುಳ್ಳ ಮೂರು ಪಾಕಶಾಲೆ, ಸುಸಜ್ಜಿತ ವಾಚನಾಲಯ, 50 ಸದ್ಯಸರು ಆಸೀನರಾಗುವ ಸಮಾಲೋಚನಾ ಕೊಠಡಿ, ಆಡಳಿತ ಕಚೇರಿ,12 ಅತಿಥಿ ಕೊಠಡಿಗಳು, ಮನರಂಜನೆಗಾಗಿ ಒಳಾಂಗಣ  ಕ್ರೀಡೆ ಇತ್ಯಾದಿ ಚಟುವಟಿಕೆಗಳಿಗೆ ಕೊಠಡಿ, ವಿಶಾಲವಾದ ಟೆರೇಸ್, ಮೂರು ಮೆಟ್ಟಿಲು ದ್ವಾರಗಳು, 4 ಲಿಫ್ಟ್ ಗಳು  ಜನಸೇವೆಗೆ ಅನುಕೂಲಕಕರವಾಗಲಿದೆ.
ಗೋಕುಲ ಶ್ರೀ ಕೃಷ್ಣ ಮಂದಿರ: ಮುಂಬಾಯಿಯ ಕೇಂದ್ರ ಬಿಂದುವಾದ ಸಾಯನ್ ನಲ್ಲಿ 1962.ಮಾರ್ಚ್.12 ರಂದು ರಂದು. ಸ್ಥಾಪನೆಯಾದ ಶ್ರೀಕೃಷ್ಣ ಮಂದಿರದಲ್ಲಿ, ತ್ರಿಭಂಗಿಯಲ್ಲಿ ನಿಂತು ಕೊಳಲನ್ನೂದುವ, ಹಾಲು ಬಿಳುಪಿನ ಅಮೃತ ಶೀಲಾ ಮೂರ್ತಿ ಶ್ರೀ ಗೋಪಾಲಕೃಷ್ಣನ ಪ್ರತಿಷ್ಠೆ ಯಾದಂದಿನಿಂದ  ಬಿಎಸ್‌ಕೆಬಿ ಎಸೋಸಿಯೇಶನ್ `ಗೋಕುಲ ; ಎಂದೇ ಅತ್ಯಂತ ಪ್ರಸಿದಿ ಪಡೆದ ಹಿರಿಯ ಸಂಸ್ಥೆಯಾಗಿದೆ. 60-ವರ್ಷಗಳಷ್ಟರ ಭವ್ಯ ಇತಿಹಾಸವಿರುವ ಗೋಕುಲ ಸಂಕುಲದಲ್ಲಿ ವಿರಾಜಮಾನನಾಗಿರುವ ಇಲ್ಲಿಯ ಆರಾಧ್ಯಮೂರ್ತಿ ಶ್ರೀ ಗೋಪಾಲಕೃಷ್ಣ ಮುರಲೀ ಗಾನ ಲೋಲ, ಭಕ್ತರ ಮನದಿಚ್ಛೆಯನ್ನು ಸಾಕಾರಗೊಳಿಸುವ ಮೋಹಕ ಗೋಪಾಲ ಕೃಷ್ಣ ಶ್ರೀ ಗೋಪಾಲಕೃಷ್ಣನ ಅಪಾರ. ಭಜಕರ ದೃಷ್ಟಿಯಲ್ಲಿ ಆತ ಆಪದ್ಬಾಂಧವ, ಅನಾಥ ರಕ್ಷಕ, ಕಾಮಿತಾರ್ಥ ಪ್ರದಾಯಕ, ಭವ ರೋಗ ಹರ, ಮುಕ್ತಿದಾಯಕ. ಸಹಸ್ರನಾಮಾಂಕಿತ.
ಗೋಕುಲ ಶ್ರೀ ಕೃಷ್ಣನ ಪ್ರತಿಷ್ಠೆಯಾದಂದಿನಿಂದಲೂ, ಉಡುಪಿ ಅಷ್ಟಮಠದ ಯತಿಗಳು ತಂತಮ್ಮ ಪರ್ಯಾಯ ಪೂರ್ವ ಭಾವಿ ಧರ್ಮ ಪ್ರಸರಣ ನಿಮಿತ್ತ ಸಂಚಾರಕ್ಕೆ ಮುಂಬಯಿ ಮಹಾನಗರಿಗೆ ಪುರಪ್ರವೇಶ ಮಾಡುವಾಗ, ಮೊದಲು ಗೋಕುಲ ಶ್ರೀ ಕೃಷ್ಣನ ದರ್ಶನ ಪಡೆದು ಆತನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ಭಕ್ತರನ್ನು ಅನುಗ್ರಹಿಸಿ, ತಮ್ಮ ಮುಂದಿನ ಕಾರ್ಯಕ್ಕೆ ತೆರಳುವುದು. ಚಾತುರ್ಮಾಸ್ಯಕ್ಕಾಗಿ ಆಗಮಿಸಿದಾಗ ಕೂಡಾ ಇದೇ ಸಂಪ್ರದಾಯವನ್ನು ಇರಿಸಿಕೊಂಡಿರುವುದು ಈ ಮಾತಿಗೆ ಪುರಾವೆ ಒದಗಿಸುತ್ತದೆ.
ಈ ಗೋಕುಲ ಸುಕ್ಷೇತ್ರದಲ್ಲಿ, ತಾಯ್ನಾಡಿನ ಸಂಸ್ಕಾರ, ಸಂಸ್ಕೃತಿಗಳನ್ನು  ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬಂದು, ವರ್ಷವಿಡೀ ಧಾರ್ಮಿಕ ಕಾರ್ಯಗಳಾದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಶಂಕರ ಜಯಂತಿ, ಶ್ರೀ ನರಸಿಂಹ ಜಯಂತಿ, ಶ್ರೀ ಮಧ್ವ ನವಮಿ, ಶ್ರೀ ಪುರಂದರ ದಾಸರ ಆರಾಧನೆ, ಗುರು ರಾಘವೇಂದ್ರ ಸ್ವಾಮಿ ಆರಾಧನೆ, ಶಿವರಾತ್ರಿ, ದೀಪಾರಾಧನೆ, ತುಳಸಿ ಪೂಜೆ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ  ಉಪಾಕರ್ಮ, ಸಾಮೂಹಿಕ ಉಪನಯನ, ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು, ಭಜನೆ, ನೃತ್ಯ, ನಾಟಕ, ಯಕ್ಷಗಾನ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ
ಕಾರ್ಯಕ್ರಮಗಳೊಂದಿಗೆ  ಆಚರಿಸುತ್ತಾ ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುತ್ತಿದೆ.
ನೂತನ ಶ್ರೀ ಕೃಷ್ಣ ಮಂದಿರವನ್ನೊಳಗೊಂಡ ಗೋಕುಲದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವು ರವಿವಾರ 2, ಜುಲೈ.2017ರಂದು ಹರಿಪಾದೈಕ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಪರಮಪೂಜ್ಯರುಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು, ಅದಮಾರು ಮಠ, ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪಲಿಮಾರು ಮಠ, ಶ್ರೀ ಶ್ರೀ  ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠ ಹಾಗೂ ವೇದ ಮೂರ್ತಿ ಶ್ರೀ ಕಮಲಾಪ್ರಸಾದ ಅಸ್ರಣ್ಣ, ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ಇವರುಗಳ ದಿವ್ಯ ಉಪಸ್ಥಿತಿ ಹಾಗೂ ಅಮೃತ ಹಸ್ತಗಳಿಂದ ನೆರವೇರಿತ್ತು.
ಗೋಕುಲ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸದ ಧಾರ್ಮಿಕ ವಿಧಿಗಳು ಹಾಗೂ ಸಾಂಕೇತಿಕ ಶಿಲಾನ್ಯಾಸವು ಬುಧವಾರ ದಿನಾಂಕ 12.ಜೂನ್.2019 ರಂದು ನೆರವೇರಿತು. ಗೋಕುಲದ ಮಹಾ ಪೋಷಕರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಜೂನ್ 24 ರಿಂದ 30 ರವರೆಗೆ ಏಳು ದಿನಗಳ ಕಾಲ ಮುಂಬಯಿಯಲ್ಲಿ ವಾಸ್ತವ್ಯ ವಿದ್ದು ಶ್ರೀ ಕೃಷ್ಣ ಮಂದಿರದ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡುವುದರೊಂದಿಗೆ ಕಟ್ಟಡ ನಿಧಿ ಸಂಗ್ರಹಕ್ಕೆ ಸಹಕರಿಸಿ ಅನುಗ್ರಹಿಸಿದ್ದಾರೆ.
ಏಳು ದಿನಗಳಲ್ಲಿ ಏಳು ಕಡೆಗಳಲ್ಲಿ 8ಬಾರಿ ಶ್ರೀಪಾದಂಗಳವರು ಹಾಗೂ ಅವರ ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ ಭಕ್ತಾದಿಗಳಿಂದ ಮುಂಬಯಿಯಲ್ಲಿ ಪ್ರ-ಪ್ರಥಮ ಬಾರಿಗೆ ರಜತ ತುಲಾಭಾರ ಸೇವಾ ಸಪ್ತಾಹ ನ:ಭೂತೋ ನ ಭವಿಷ್ಯತಿ ಎಂಬಂತೆ  ಜರಗಿ ದಾಖಲೆ ನಿರ್ಮಿಸಿತು. ದಿನಾಂಕ 30.ಜೂನ್,2019 ರಂದು ಪ.ಪೂ.ಗುರುಗಳಾದ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀಕ್ಷೇತ್ರ ಕಟೀಲುವಿನ ಅನುವಂಶಿಕ ಅರ್ಚಕರಾದ ವೇದಮೂರ್ತಿಲಕ್ಷ್ಮೀನಾರಾಯಣ ಅಸ್ರಣ್ಣ ಅವರ ಅಮೃತ ಹಸ್ತದಿಂದ ಹಾಗೂ ಇನ್ನಿತರ ಗಣ್ಯಾತಿಗಣ್ಯರ ಹಸ್ತದಿಂದ ಸಾರ್ವಜನಿಕ ಶಿಲಾನ್ಯಾಸ ನೆರವೇರಿತು.
ಆ ದಿನ ನೂರಾರು ಗಣ್ಯ ವ್ಯಕ್ತಿಗಳು ಹಾಗೂ ಶ್ರೀ ಕೃಷ್ಣನ ಭಕ್ತಾದಿಗಳು ಉಪಸ್ಥಿತರಿದ್ದು ಅತ್ಯಂತ ವೈಭವದಿಂದ  ಜರಗಿದ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ಭಗವದನುಗ್ರಹಕ್ಕೆ ಪಾತ್ರರಾದರು. ಈ ಎಲ್ಲಾ ಪೂಜನೀಯರೂ, ಗೌರವಾನ್ವಿತ ಗಣ್ಯ ವ್ಯಕ್ತಿಗಳ ಹಾಗೂ ಶ್ರೀ ಗೋಪಾಲಕೃಷ್ಣನ ಅನುಗ್ರಹದಿಂದ ನಿರ್ಮಾಣ ಕಾರ್ಯ ಅಡೆತಡೆಯಿಲ್ಲದೆ ಮುಂದುವರೆಯು ವಂತಾಯಿತು.
ಶ್ರೀಪಾದಂಗಳವರ ತುಲಾಭಾರ ಸೇವೆಯಿಂದ ಸಂಗ್ರಹವಾದ ಬೆಳ್ಳಿ ಹಾಗೂ ದೇಣಿಗೆಗಳು ಮತ್ತು ಶ್ರೀಗಳವರಿಗೆ ಅರ್ಪಿಸಿದ ಪಾದ ಕಾಣಿಕೆ ಇತ್ಯಾದಿಗಳನ್ನು ಗೋಕುಲ ಮಂದಿರದ ನಿರ್ಮಾಣ ಕಾರ್ಯಕ್ಕೆ ವಿನಿಯೋಗಿಸಲು ಶ್ರೀಗಳವರು ಶ್ರೀ ಕೃಷ್ಣಾ ನುಗ್ರಹ ಹಾಗೂ ತಮ್ಮ ಶುಭಾಶೀರ್ವಾದದೊಂದಿಗೆ ಅನುಗ್ರಹಿಸಿ ದ್ದಾರೆ. ಜೀವಮಾನದಲ್ಲಿ ಒಂದು ಬಾರಿ ಒದಗಿ ಬರುವ ಈ ಅಪೂರ್ವ ಕಾರ್ಯಕ್ಕೆ ಭಕ್ತಾದಿಗಳೆಲ್ಲಾ ತಮ್ಮ ತನು-ಮನ-ಧನದ ಸಹಕಾರವನ್ನಿತ್ತು ಬೆಂಬಲಿಸಿ ಇಲ್ಲಿನ ಆರಾಧ್ಯ ಮೂರ್ತಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಗೋಕುಲ ಕಟ್ಟಡದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿನ ಹಲವು ವೈಶಿಷ್ಟತೆಗಳು ಈ ಕೆಳಗಿನಂತಿವೆ: 38 ಅಡಿ ಎತ್ತರದ ಬೃಹತ್ ಗೋಪುರವನ್ನೊಳಗೊಂಡ ಸುಂದರ ಗೋಪಾಲಕೃಷ್ಣ ದೇವಾಲಯ, 14 ಅಡಿ ಎತ್ತರದ ಮರದ ಕೆತ್ತನೆಯುಳ್ಳ ಮಹಾದ್ವಾರ, ತೇಗದ ಮರ ಹಾಗೂ ಕಂದು ಕಲ್ಲಿನಿಂದ ರಚಿತ ಅಲಂಕಾರಿಕ ತೀರ್ಥ ಮಂಟಪ, ಕುಸುರಿ ಕೆತ್ತನೆಗಳಿಂದ ರಚಿಸಲ್ಪಟ್ಟ ಕಂದು ಶಿಲಾಮಯ ಗರ್ಭಗುಡಿ, ಅದರಲ್ಲಿ ಕಪ್ಪು ಕಲ್ಲಿನ 44 ಕೇಶವಾದಿ ಮೂರ್ತಿಗಳು, ಮಂದಿರದ ಮುಂಭಾಗದಲ್ಲಿರುವ ಹವಾನಿಯಂತ್ರಿತ ಸಭಾಗೃಹದಲ್ಲಿ ಶ್ರೀ ಕೃಷ್ಣಾವತಾರದ ವಿವಿಧ ರೂಪಗಳ ಮರದ ಕೆತ್ತನೆಗಳು. ಅಲ್ಲದೆ ಗೋಡೆಗಳಲ್ಲಿ ಸ್ವರ್ಣ ಲೇಪಿತ ದಶಾವತಾರ ಮೂರ್ತಿಗಳು.
ಕೊರೋನಾ ಮಹಾಮಾರಿಯಿಂದಾಗಿ 2-3ತಿಂಗಳುಗಳ ಕಾಲ ಕೆಲಸ ಸ್ಥಗಿತಗೊಂಡರೂ, ದೈವಾನುಗ್ರಹದಿಂದ ಮತ್ತೆ ಭರದಿಂದ ಕಾರ್ಯ ಸಾಗುತ್ತಾ ಸುಮಾರು ನಾಲ್ಕೂವರೆ ವರ್ಷಗಳ ನಿರಂತರ ಕಾಮಗಾರಿಯ ನಂತರ, ಮುಂದಿನ ಕೆಲವೇ ಕೆಲವು ತಿಂಗಳುಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಗೊಳ್ಳಲಿದೆ. ಸದ್ಯ ಬಾಲಾಲಯ -ದಲ್ಲಿ ಇರುವ ಶ್ರೀ ಗೋಪಾಲಕೃಷ್ಣ, ಪ್ರಸಿದ್ಧ ವಾಸ್ತು ತಜ್ಞರ ನಿರ್ದೇಶನದಂತೆ ರೂಪುಗೊಂಡು, ಕೆತ್ತನೆ ಕುಸುರಿಗಳು, ದಾರು ಶಿಲ್ಪಗಳು, ಆಕರ್ಷಕ ಗೋಪುರದಿಂದ ಕೂಡಿದ ನೂತನ ಶಿಲಾಮಯ ದೇಗುಲದಲ್ಲಿ, ಶೀಘ್ರದಲ್ಲಿಯೇ ಪ್ರತಿಷ್ಠೆಗೊಳ್ಳಲಿದ್ದಾನೆ.
44 ನಾಮಾಂಕಿತ ದೇವತಾ ಮೂರ್ತಿಗಳೊಂದಿಗೆ ಮಂದಿರ ಕಂಗೊಳಿಸಿ  ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಲಿದೆ. ಮಂದಿರದ ಗರ್ಭಗೃಹದ, ದ್ವಾರಕಂಬದ, ಅಡಿಪಾಯದ, ಗೋಪುರದ, ಮುಖದ್ವಾರದ ಪ್ರತಿಯೊಂದು ಶಿಲೆಗಳು, ದೇವತಾ ಮೂರ್ತಿಗಳು, ದ್ವಾರ ಶಿಲಾಕಂಬಗಳು, ಸದಾಕಾಲ ಕೃಷ್ಣಾ ಕೃಷ್ಣಾ ಎಂದು ಹೇಳುವಂತೆ  ನಮ್ಮ ಕಣ್ಣಿಗೆ ಗೋಚರಿಸಲಿವೆ. ಆಧುನಿಕ ಸವಲತ್ತು ಸೌಲಭ್ಯಗಳಿಂದ ಸಜ್ಜಾದ ನೂತನ ಗೋಕುಲ ಭವನ ಹಾಗೂ ಸಾಂಪ್ರದಾ ಯಿಕ ಶೈಲಿಯಲ್ಲಿ ನಿರ್ಮಾಣಗೊಂಡ, ಸುಂದರ ಶ್ರೀ ಕೃಷ್ಣ ಮಂದಿರ ಲೋಕಾರ್ಪಣೆಗೊಂಡು  ಸದಸ್ಯ ಬಾಂಧವರನ್ನು
ಮತ್ತು ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಲು ಸಜ್ಜಾಗುತ್ತಿದೆ.
 ಶ್ರೀ ಕೃಷ್ಣ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದೆ. ಭಕ್ತಾಭಿಮಾನಿಗಳಿಗೆ ಗೋಕುಲದ ನೂತನ ಮಂದಿರದಲ್ಲಿ ಶ್ರೀಕೃಷ್ಣನನ್ನು ಕಣ್ತುಂಬಾ ನೋಡಿ ಆನಂದಿಸಿ ಜನ್ಮ ಸಾರ್ಥಕ ಪಡೆಯುವ ಸಮಯ ಸನ್ನಿಹಿತವಾಗಿದೆ.
ಕ್ರಪೆ: ರೋನ್ಸ್ ಬಂಟ್ವಾಳ್
̧
 
 
 
 
 
 
 
 
 
 
 

Leave a Reply