ಪುತ್ತಿಗೆ ಮಠ ಬಾಳೆ ಮುಹೂರ್ತ

ಡಿಸೆ೦ಬರ್ : 02, ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಪ್ರಥಮದ್ದಾದ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 8.20ರ ಧನುರ್ನಗ್ನ ಸುಮುಹೂರ್ತದಲ್ಲಿ ನಡೆಯಿತು. 2024ರ ಜ. 18ರಂದು ಸರ್ವಜ್ಞ ಪೀಠವೇರಿ ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಮುಪಸ್ಥಿತಿ ಯಲ್ಲಿ ಪುತ್ತಿಗೆ ಮಠದ ನಿವೇಶನದ ನಿಗದಿತ ಸ್ಥಳದಲ್ಲಿ ಬಾಳೆ ಮತ್ತು ತುಳಸಿ ಸಸಿಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನಡೆಸಲಾಯಿತು. ಹೆರ್ಗ ವೇದವ್ಯಾಸ ಭಟ್, ಕೇಂಜ ಶ್ರೀಧರ ತಂತ್ರಿ ಮತ್ತು ರಾಘವೇಂದ್ರ ಕೊಡಂಚ ಧಾರ್ಮಿಕ ವಿಧಿ ವಿಧಾನ ನಡೆಸಿದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು.

ಅದಕ್ಕೂ ಪೂರ್ವದಲ್ಲಿ ಪ್ರಾತಃಕಾಲ 7 ಗಂಟೆಗೆ ಪುತ್ತಿಗೆ ಮಠೀಯ ಉಪಾಸ್ಯದೇವರಾದ ಶ್ರೀ ವೀರವಿಠಲ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಲಾಯಿತು. ಬಳಿಕ ಬಾಳೆ ಮತ್ತು ಕಬ್ಬಿನ ಕಂದುಗಳು ಹಾಗೂ ತುಳಸಿ ಗಿಡಗಳ ಸಹಿತ ಪುತ್ತಿಗೆ ಮಠದಿಂದ ಮೆರವಣಿಗೆಯಲ್ಲಿ ಚಂದ್ರೇಶ್ವರ, ಅನಂತೇಶ್ವರ ದೇವರ ಸನ್ನಿಧಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನದ ಬಳಿಕ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮುಖ್ಯ ಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥಿಸಿ ಸುಬ್ರಹ್ಮಣ್ಯ, ನವಗ್ರಹ, ವೃಂದಾವನ ಸಮುಚ್ಛಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ತರು ವಾಯ ಮತ್ತೆ ಮೆರವಣಿಗೆ ಮೂಲಕ ಪುತ್ತಿಗೆ ಮಠಕ್ಕೆ ಬರಲಾಯಿತು. ಶ್ರೀಮಠದ ಪ್ರಸನ್ನಾ ಚಾರ್ಯ, ನಾಗರಾಜ ಆಚಾರ್ಯ, ರತೀಶ ತಂತ್ರಿ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ, ಕೆ. ಶ್ರೀಪತಿ ಭಟ್ ಮೂಡುಬಿದಿರೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ, ಮಹಿಳಾ ಆಯೋಗ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕೊಲ್ಲೂರು ದೇವಳ ಟ್ರಸ್ಟಿ ಸಂಧ್ಯಾ, ವಿಜಯ ರಾಘವ ರಾವ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸುಧಾಕರ ಭಟ್, ತಾಲೂಕು ಅಧ್ಯಕ್ಷ ಮಂಜುನಾಥ ಉಪಾಧ್ಯ, ಅಂಡಾರು ದೇವಿಪ್ರಸಾದ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಸಂತ ಸಾಲ್ಯಾನ್, ಶಿವರಾಯ ಪ್ರಭು ಮತ್ತು ರಾಮ ಮೊದಲಾದವರಿದ್ದರು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಧರ್ಮಗ್ರಂಥಗಳ ಮೂಲಕ ಸಮಾಜದಲ್ಲಿ ಜಾಗೃತಿ ಮತ್ತು ಸಂಘಟನೆ ಮಾಡುವ ಆಶಯದೊಂದಿಗೆ ಗೀತಾ ಪ್ರಚಾರ ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದರು.

ನಮ್ಮೆಲ್ಲಾ ಸಮಸ್ಯೆ, ಸಂದೇಹಗಳಿಗೆ ಗೀತೆಯಲ್ಲಿ ಉತ್ತರ ಇದೆ. ಗೀತಾ ಪಠಣದಿಂದ ಉದ್ವೇಗ ನಿವಾರಣೆಯಾಗುತ್ತದೆ. ಭಾರತದ ಭಗವದ್ಗೀತೆಯನ್ನು ಕೋಟಿ ಲೇಖನದ ಮೂಲಕ ವಿಶ್ವವ್ಯಾಪಿ ಯಾಗಿಸುವ ಸಂಕಲ್ಪ ತೊಡಲಾಗಿದೆ ಎಂದರು.ಲೋಕ ಕಲ್ಯಾಣದ ಆಶಯದಿಂದ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಅಷ್ಟ ಯತಿಗಳನ್ನು ನಿಯೋಜಿಸಿದರು. ಬಾಲ ರೂಪಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಾಮನೆಗಳು ಪೂರ್ಣಗೊಳ್ಳುತ್ತದೆ. ನಾವು ಯಾವ ಭಾವದಿಂದ ಭಗವಂತನನ್ನು ಆರಾಧಿಸುತ್ತೇ ವೆಯೋ ಅದಕ್ಕೆ ಸರಿಯಾಗಿ ಫಲ ಲಭಿಸುತ್ತದೆ ಎಂದರು.

2024ರ ಜ. 18ರಂದು ನಾಲ್ಕನೆಯ ಬಾರಿಗೆ ಪರ್ಯಾಯ ದೀಕ್ಷೆ ಸ್ವೀಕರಿಸುವ ತಾವು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯ ನಡೆಸುವುದಾಗಿ ತಿಳಿಸಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಾವಿ ಪುತ್ತಿಗೆ ಪರ್ಯಾಯ ವಿಶ್ವ ಗೀತಾ ಪರ್ಯಾಯ.ಆ ಅವಧಿಯಲ್ಲಿ ಅನ್ನದಾನದೊಂದಿಗೆ ಜ್ಞಾನ ಯಜ್ಞದ ಪ್ರತೀಕವಾದ ಗೀತಾ ಪ್ರಸಾರಾರ್ಥವಾಗಿ ಕೋಟಿ ಗೀತಾ ಲೇಖನ ಯಜ್ಞ, ಕ್ಷೇತ್ರಾವಾಸ ಯೋಜನೆ ಮೂಲಕ ಭಕ್ತಾದಿ ಗಳಿಗೆ ತಂಗಲು ವಸತಿಗೃಹ ನಿರ್ಮಾಣ, ತಮ್ಮ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸ ವದ ಸ್ಮರಣೆಗಾಗಿ ಪಾರ್ಥ ಸಾರಥಿ ಚಿನ್ನದ ರಥ ಸಮರ್ಪಣೆ, ಕಲ್ಸಂಕದಲ್ಲಿ ಆಚಾರ್ಯ ಮಧ್ವರ ಹೆಸರಿನ ಭವ್ಯ ವೃತ್ತ ನಿರ್ಮಾಣ ಹಾಗೂ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಮತ್ತು ಗೀತಾ ಯಜ್ಞ ಆಯೋಜಿಸಲು ಸಂಕಲ್ಪಿಸಿರುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಂಸ್ಕೃತ ಕಾಲೇಜು ವಿಶ್ರಾಂತ ಪ್ರಾಚಾರ್ಯ ಹರಿದಾಸ ಉಪಾಧ್ಯಾಯ, ಕಿಶೋರ್ ರಾವ್, ಹರಿಕೃಷ್ಣ ಪುನರೂರು, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಎಸ್.ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ಐಕಳಭಾವ ದೇವಿಪ್ರಸಾದ ಶೆಟ್ಟಿ ಬೆಳಪು, ಪ್ರೊ,. ಎಂ. ಬಿ. ಪುರಾಣಿಕ್, ಪ್ರದೀಪ ಕುಮಾರ್ ಕಲ್ಕೂರ, ಪೊಲೀಸ್ ಅಧಿಕಾರಿಗಳಾದ ಪ್ರಮೋದ್ ಮತ್ತು ಮಂಜುನಾಥ್ ಇದ್ದರು.

ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ ಸ್ವಾಗತಿಸಿ, ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ಗೋಪಾಲಾಚಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಕೆ. ವಿ. ರಮಣ್ ಮತ್ತು ಅಯನಾ ಸಿದ್ಧಪಡಿಸಿದ ಗೀತಾ ಪ್ರಚಾರದ ಮೊಬೈಲ್ ಸ್ವರಗೀತೆ (ಹ್ಯಾಲೋ ಟೋನ್)ಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ನೆರೆದ ಭಕ್ತಾದಿಗಳಿಗೆ ಬಾಳೆ ಸಸಿ ವಿತರಿಸಲಾಯಿತು. 

 

 
 
 
 
 
 
 
 
 
 
 

Leave a Reply