ಸಮಾಜಸೇವೆಗೆ 10 ಲಕ್ಷ ರೂ. ನೀಡಿದವರಿಗೆ ಅಯೋಧ್ಯೆಯಲ್ಲಿ ಶ್ರೀರಾಮನ ಸೇವೆಗೆ ಅವಕಾಶ ~ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಉಡುಪಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ 2024ರ ಜನವರಿ 22ರಂದು ಶ್ರೀರಾಮ ಪ್ರತಿಷ್ಠಾಪನೆ ನಡೆಯಲಿದ್ದು, ಜ. 23ರಿಂದ ಮಾರ್ಚ್ 10ರ ವರೆಗೆ 48 ದಿನಗಳ ಕಾಲ ಮಂಡಲ ಉತ್ಸವ ನಡೆಯಲಿದೆ. ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 2023- 24ನೇ ಹಣಕಾಸು ವರ್ಷದಲ್ಲಿ ಮನೆ ನಿರ್ಮಾಣ, ಆರೋಗ್ಯ ನೆರವು, ಶಿಕ್ಷಣ ಸಹಾಯ, ಗೋ ಸೇವೆ ಇತ್ಯಾದಿಗಳಿಗೆ 10 ಲಕ್ಷಕ್ಕೂ ಮಿಕ್ಕಿ ವಿನಿಯೋಗಿಸಿದವರು ಶ್ರೀರಾಮ ಮಂಡಲ ಉತ್ಸವದ ರಜತ ಕಲಶ ಪಡೆಯಲು ಅರ್ಹತೆ ಪಡೆಯುತ್ತಾರೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀರಾಮ ದೇವರಿಗೆ ವಿಶೇಷ ಸೇವೆ ಸಮರ್ಪಣೆ ಇರುವುದಿಲ್ಲ. ಮಂಡಲ ಉತ್ಸವದಲ್ಲಿ ಕಲಶ ಸೇವೆ ಸಲ್ಲಿಸಬಹುದು. ಒಂದು ರಜತ ಕಲಶಕ್ಕೆ ಒಂದು ಲಕ್ಷ ರೂ. ನಿಗದಿ ಮಾಡಲಾಗಿದ್ದು, ಕಲಶಾಭಿಷೇಕದ ನಂತರ ಪ್ರಸಾರ ರೂಪದಲ್ಲಿ ಅದನ್ನು ಸೇವಾಕರ್ತರಿಗೆ ನೀಡಲಾಗುವುದು. ಕಲಶ ಸೇವಾ ಬಾಪ್ತಿನ ಹತ್ತು ಪಟ್ಟು ಹಣವನ್ನು ಸಮಾಜಸೇವೆಗೆ ವಿನಿಯೋಗಿಸಿದವರು ಕಲಶ ಸೇವೆಗೆ ಅರ್ಹರಾಗಿರುತ್ತಾರೆ.
ನೋಂದಣಿಗಾಗಿ ವಿಶೇಷ ಆ್ಯಪ್ ರೂಪಿಸಲಾಗಿದೆ. ತಮ್ಮ ಸೇವೆಯ ವಿವರಗಳನ್ನು ಗೆಜೆಟೆಡ್ ಆಫೀಸರ್ ಮೂಲಕ ದೃಢಪಡಿಸಿಕೊಂಡು ಅಯೋಧ್ಯೆ ಮಂಡಲ ಉತ್ಸವ ಡಾಟ್ ಕಾಮ್ ನಲ್ಲಿ ಹೆಸರು ನೋಂದಣಿ ಮಾಡಬೇಕು. ಡಿಸೆಂಬರ್ 1ರಂದು ಆ್ಯಪ್ ಉದ್ಘಾಟನೆಗೊಳ್ಳಲಿದೆ ಎಂದರು.
ರಜತ ಕಲಶ ಸೇವೆಗೆ ನೋಂದಣಿ ಮಾಡಿಕೊಂಡವರು 48 ದಿವಸದಲ್ಲಿ ತಮಗೆ ಅನುಕೂಲವಾದ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರೊಂದಿಗೆ 48 ದಿನದಲ್ಲಿ ಅಯೋಧ್ಯೆಯಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಪೌರೋಹಿತ್ಯ ಇತ್ಯಾದಿ ಸೇವೆ ಸಲ್ಲಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ಕೂಡಾ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಹೆಸರು ನೋಂದಾಯಿಸಿಕೊಂಡವರಿಗೆ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಧಾರ್ಮಿಕ ಸಮಿತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು. ಅದರ ಆಧಾರದಲ್ಲಿ ಪಾಸುಗಳನ್ನು ವಿತರಿಸಲಾಗುವುದು ಎಂದರು. ಅಯೋಧ್ಯಾ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಎಲ್ಲರಿಗೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಮ್ಮ ತಮ್ಮ ಊರು, ದೇವಾಲಯಗಳಲ್ಲಿ ಪ್ರತಿಷ್ಠಾ ಮಹೋತ್ಸವ ಸಂಭ್ರಮಾಚರಿಸಬಹುದು.
ಭಜನೆ, ಮಂಗಳಾರತಿ, ಕನಿಷ್ಠ 5 ದೀಪಗಳನ್ನು ಬೆಳಗಿಸುವ ಮೂಲಕ ದೀಪೋತ್ಸವ ನಡೆಸಬಹುದು. ಮಂಡಲ ಉತ್ಸವದ ಕೊನೆಯ ಐದು ದಿನ ಬ್ರಹ್ಮಕಲಶೋತ್ಸವ ನಡೆಯಲಿದೆ. ಆ ಸಂದರ್ಭದಲ್ಲಿ ಭಕ್ತರು ಪಾಲ್ಗೊಳ್ಳಬಹುದು ಎಂದರು.
 
 
 
 
 
 
 
 
 
 
 

Leave a Reply