ಕಾರ್ಕಳ: 13ನೇ ವರ್ಷದ ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಘೋಷಣೆಯಾಗಿದ್ದು ಕಾರ್ಕಳ ತಾಲೂಕಿನ ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಆರ್.ವಿಶ್ವನಾಥ್ ಮತ್ತು ದೇವಾಲಯ ಕಾಷ್ಟ ಶಿಲ್ಪಿ ಉಮಾಧರ ವಿಶ್ವಕರ್ಮ ಇಂದು ಮಂಗಳೂರು ತುಳುಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಸಂಸ್ಖೃತಿ ಇಲಾಖೆ, ಕಥಾ ಬಿಂದು ಪ್ರಕಾಶನ ಮತ್ತು ಕಲ್ಕೂರ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ತುಳು-ಕನ್ನಡ ಸಾಹಿತ್ಯೋತ್ಸವದಲ್ಲಿ ನಾಡಿನ 10 ಮಂದಿ ಸಾಧಕರಿಗೆ ಈ ಗೌರವ ನೀಡಲಾಗುತ್ತಿದೆ ಎಂದು ಸಂಘಟಕ-ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಕೃಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಕವಿಗೋಷ್ಠಿ ನಡೆಯಲಿದೆ.
ಚೈತನ್ಯಶ್ರೀ ಬಹುಮುಖ ಪ್ರತಿಭಾ ಪುರಸ್ಕಾರಕ್ಕೆ ಆರು ಮಂದಿ ಮಕ್ಕಳು ಆಯ್ಕೆಯಾಗಿದ್ದು ಪ್ರಹ್ಲಾದ ಮೂರ್ತಿ ಕಡಂದಲೆ, ದಿಯಾ ಆಳ್ವ ಮೂಡುಬಿದಿರೆ, ಚುಕ್ಕಿ ವಿಟ್ಲ, ಸಾನ್ವಿ ಗುರುಪುರ, ಸಾನ್ನಿಧ್ಯ ಕವತ್ತಾರು ಮತ್ತು ಸುನಿಜ ಅಜೆಕಾರು ಈ ಗೌರವಕ್ಕೆ ಪಾತ್ರರಾಗುವರು.
ಹೂವುಗಳ ಬಗ್ಗೆ ಅಧ್ಯಯನ ನಡೆಸಿರುವ ರೂಪಾ ವಸುಂಧರಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಪುಷ್ಟ ಲೋಕ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ.