ಅಕಾಲಿಕವಾಗಿ ನಿಧನ ಹೊಂದಿದ ಕಲಾವಿದ ಶಂಭು ಕುಮಾರ್‌ ಕುಟುಂಬಕ್ಕೆ ನೆರವು

ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ, ಕಟೀಲು ಮೇಳದ ಕಲಾವಿದ ಶಂಭು ಕುಮಾರ್‌ ಕೊಡೆತ್ತೂರು ಅವರ ಪತ್ನಿ ಕವಿತಾ ಅವರಿಗೆ ಯಕ್ಷಗಾನ ಕಲಾರಂಗದ [ರಿ.], ಉಡುಪಿ ಇದರ ವತಿಯಿಂದ ರೂ. 1 ಲಕ್ಷದ ಚೆಕ್‌ನ್ನು ವಿತರಿಸಲಾಯಿತು.

ಚೆಕ್‌ನ್ನು ಕವಿತಾರಿಗೆ ಹಸ್ತಾಂತರ ಮಾಡಿದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಅವರು ಮಾತನಾಡಿ, ‘ಯಕ್ಷಗಾನ ಕಲೆ ನಮ್ಮೆಲ್ಲರ ಮನಸ್ಸಿಗೆ ಆನಂದಾನುಭೂತಿಯನ್ನು ನೀಡುತ್ತದೆ. ಆದರೆ, ಯಕ್ಷಗಾನ ಕಲಾವಿದರ ಬದುಕು ಕೆಲವೊಮ್ಮೆ ಅತಂತ್ರವಾಗಿರುತ್ತದೆ. ಅದರಲ್ಲೂ ಪ್ರಸಿದ್ಧರ ಪಂಕ್ತಿಯಲ್ಲಿಲ್ಲದೆ ಪೋಷಕ ಕಲಾವಿದರಾಗಿ ಪ್ರದರ್ಶನದ ಯಶಸ್ಸಿಗೆ ಕಾರಣರಾಗುವ ಕಲಾವಿದರ ಪ್ರತಿಭೆ ಪರಿಗಣಿತವಾಗುವುದು ಕಡಿಮೆ. ಅಂಥವರ ಬದುಕಿನಲ್ಲಿ ಸಮಸ್ಯೆ ಉಂಟಾದಾಗ ನೆರವಾಗುವುದು ಸಮಾಜದ ಹೊಣೆ. ಯಕ್ಷಗಾನ ಕಲಾರಂಗವು ಸಾಮಾಜಿಕ ಹೊಣೆಯರಿತು ಯಕ್ಷಗಾನ ಕಲಾವಿದರಿಗೆ ಅವರ ಜೀವನದ ವಿವಿಧ ಸಂದರ್ಭಗಳಲ್ಲಿ ನೆರವಾಗುತ್ತ ಬಂದಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರು, ‘ಯಕ್ಷಗಾನ ಕಲಾರಂಗವು ಕಲಾವಿದರಾಗಿ ‘ಯಕ್ಷನಿಧಿ’ಯಂಥ ಯೋಜನೆಯನ್ನು ಹಮ್ಮಿಕೊಂಡಿದೆ. ಕೆಲವು ಸಮಯದ ಹಿಂದೆ ಗುಂಪುವಿಮೆ, ಅಪಘಾತ ವಿಮೆಗಳಂಥ ಸೌಲಭ್ಯಗಳನ್ನು ಹೊಂದಿದ್ದೆವು. ಆದರೆ, ಅದನ್ನು ನಿಭಾಯಿಸುವುದು ಸವಾಲಾಗಿದೆ. ಹಾಗಾಗಿ, ಸಹೃದಯ ದಾನಿಗಳಿಂದ ನೆರವನ್ನು ಸಂಗ್ರಹಿಸಿ, ಕಷ್ಟ ಕಾಲದಲ್ಲಿ ಕಲಾವಿದರಿಗೆ ಅಥವಾ ಕಲಾವಿದರ ಕುಟುಂಬಕ್ಕೆ ನೆರವಾಗುವುದಕ್ಕೆ ಯಕ್ಷಗಾನ ಕಲಾರಂಗ ಮುಂದಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ನೂರಾರು ದಾನಿಗಳು ನೆರವಾದುದರಿಂದ ಕಲಾವಿದರ ಸಹಾಯಕ್ಕೆ ನಿಲ್ಲಲು ಸಾಧ್ಯವಾಯಿತು’ ಎಂದರು.

ಈ ಸಂದರ್ಭದಲ್ಲಿ ಕವಿತಾ ಅವರ ತೀರ್ಥರೂಪರಾದ ಧರ್ಣಪ್ಪ ಮೂಲ್ಯ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಪಿ. ಕಿಶನ್‌ ಹೆಗ್ಡೆ,ಕೋಶಾಧಿಕಾರಿ ಮನೋಹರ್ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ,ಬಿ.ಭುವನಪ್ರಸಾದ್ ಹೆಗ್ಡೆ,ಪೃಥ್ವಿರಾಜ್ ಕವತ್ತಾರ್,ವಿದ್ಯಾಪ್ರಸಾದ್,ಕಿಶೋರ್ ಸಿ.ಉದ್ಯಾವರ್,ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply