ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅಧ್ಯಾಪಕರ ಆರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಕಾಲೇಜಿನ ಪ್ರಂಶುಪಾಲರಾದ ಡಾ. ರಾಮು ಎಲ್ ಮತ್ತು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಜಂಟಿಯಾಗಿ ರಚಿಸಿದ ‘ ಇಂಟ್ರಡಕ್ಷನ್ ಟು ಆಸ್ಟೊನಮಿ ಅಂಡ್ ಸ್ಪೇಸ್ ಎಕ್ಸ್ಪ್ಲೋರೇಶನ್’, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಕರಬ ಅವರ ಪೌರಾಣಿಕ ಕಾದಂಬರಿ ‘ಕೃಷ್ಣಾರ್ಪಣಂ’, ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಹವ್ಯಕ ಕನ್ನಡ ಭಾಷೆಯಲ್ಲಿ ಛಂದೋಬದ್ಧವಾಗಿ ರಚಿಸಿದ ‘ಬಾಣದ್ ಸೇತ್ವೆ’ ಯಕ್ಷಗಾನ ಪ್ರಸಂಗ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮೀ ಯವರ ಪರಾಮರ್ಶನ ಕೃತಿ ‘ಇಂಟರ್ನ್ಯಾಷನಲ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್’, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಯರಾದ ಶ್ರೀಮತಿ ಜ್ಯೋತಿ ಆಚಾರ್ಯ, ಶ್ರೀಮತಿ ಪ್ರತಿಭಾ ಭಟ್, ಶ್ರೀಮತಿ ಸುಮಲತಾ ಇವರು ಜೊತೆಯಾಗಿ ರಚಿಸಿದ ಪರಾಮರ್ಶನ ಕೃತಿ ‘ಪ್ರಿನ್ಸಿಪಲ್ಸ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್’ ಕೃತಿಗಳನ್ನು ಅನಾವರಣಗೊಳಿಸಿದ ಪೂಜ್ಯ ಶ್ರೀಪಾದರು ಕೃತಿಕಾರರನ್ನು ಅಶೀರ್ವದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಪಿ.ಪಿ.ಸಿ ಸ್ವಾಯತ್ತ ಕಾಲೇಜಾಗಿ ಪರಿವರ್ತನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಅಧ್ಯಾಪಕರು ಸಂಶೋಧನೆ ಮತ್ತು ಸೃಜನಶೀಲ ಕೃತಿಗಳನ್ನು ರಚಿಸಿ ಪ್ರಕಟಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧ್ಯಾಪಕರು, ವಿದ್ಯಾರ್ಥಿಗಳು ಹೊಸ ಹೊಸ ಕೃತಿಗಳನ್ನು ರಚಿಸುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಡಾ. ರಾಜೇಂದ್ರ ಎಸ್. ನಾಯಕ್, ದೃಢವ್ರತ ಗೋರಿಕ್, ಪುರುಷೋತ್ತಮ ಅಡ್ವೆ, ಪ್ರಾಂಶುಪಾಲರಾದ ಡಾ. ರಾಮು ಎಲ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಮತಿ ವಸಂತ ರವಿಪ್ರಕಾಶ್, ಡಾ. ರಮೇಶ್ ಟಿ.ಎಸ್, ಶ್ರೀಮತಿ ಜಯಲಕ್ಷ್ಮೀ ಹಾಗೂ ಕೃತಿಕಾರರು ಉಪಸ್ಥಿತರಿದ್ದರು. ಗಣಿತ ವಿಭಾಗದ ಮುಖ್ಯಸ್ಥ ರಾಕೇಶ್ ನಿರೂಪಿಸಿದರು.