ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಸಭೆಯಲ್ಲೇ ಕಮಿಷನರ್ಗೆ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದು, ಮಂಗಳೂರು ಪೊಲೀಸರ ಭ್ರಷ್ಟಾಚಾರ ಆರೋಪ ಹಿನ್ನೆಲೆ ಅಹವಾಲು ಸ್ವೀಕರಿಸಲು ಎಡಿಜಿಪಿ ಆಗಮಿಸಿದ ವೇಳೆ ಘಟನೆ ನಡೆದಿದೆ. ಈ ವೇಳೆ ಎಡಿಜಿಪಿ ಎದುರಲ್ಲೇ ಕಮೀಷನರ್ ಅವರನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ಸ್ವೀಕರಿಸಲು ಹಣ ಕೇಳ್ತಾರೆ. ಈ ಬಗ್ಗೆ ಸಂತ್ರಸ್ಥ ಯುವತಿ ನನ್ನಲ್ಲಿ ಅಳಲು ತೋಡಿಕೊಂಡಿದ್ದಾಳೆ. ಈ ಕುರಿತ ದಾಖಲೆ ನನ್ನ ಬಳಿ ಇದೆ ಅಂತ ಪ್ರಸನ್ನ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕೇಸ್ ನಲ್ಲಿ ಧ್ವನಿ ಎತ್ತಿದರೆ ನಮ್ಮ ವಿರುದ್ದ ಕೇಸು ಹಾಕ್ತಾರೆ. ಕೆಎಂಎಫ್ ಉದ್ಯೋಗದ ಆಮಿಷ ಕೇಸ್ ಇದ್ದರೂ ಸಿಸಿಬಿ ಸರಿಯಾಗಿ ತನಿಖೆ ಮಾಡಿಲ್ಲ.
ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಬೆದರಿಸುವ ಕೆಲಸ ಆಗ್ತಿದೆ ಎಂದು ಪ್ರಸನ್ನ ರವಿ ಕಿಡಿ ಕಾರಿದ್ದಾರೆ. ಹಲವರಿಂದ ಮಂಗಳೂರು ಪೊಲೀಸರ ವಿರುದ್ದ ದೂರುಗಳು ಕೇಳಿ ಬಂದಿದೆ.
ಸ್ಕಿಲ್ ಗೇಮ್ ಹೆಸರಿನಲ್ಲಿ ವಂಚನೆ : ಎಡಿಜಿಪಿ ಮಂಗಳೂರಿನಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮಂಗಳೂರು ನಗರದಲ್ಲಿ ಅಕ್ರಮ ಚಟುವಟಿಕೆ ಹಾಗೂ ಸ್ಕಿಲ್ ಗೇಮ್ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸಲು ಹೇಳಿದ್ದೇನೆ.
ಈ ರೀತಿಯ ಅಕ್ರಮ ಚಟುವಟಿಕೆ ಸ್ಕಿಲ್ ಗೇಮ್ ನಡೆಸಲು ಆಸ್ಪದ ನೀಡುವುದಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕಲು ಆದೇಶ ನೀಡಿದ್ದೇನೆ. ಕೆಲವು ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈ ಗೊಳ್ಳಲಾಗುವುದು. ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಮಂಗಳೂರಿನಲ್ಲಿ ಡ್ರಗ್ ಮಾಫಿಯಾಗೆ (Drug Mafia) ಕಡಿವಾಣ ಹಾಕುವ ಬಗ್ಗೆ ಕಾಲೇಜು ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಅಕ್ರಮ ಪಿಜಿಗಳು ಕಾರ್ಯಾಚರಿಸುತ್ತಿರುವ ಬಗ್ಗೆ ದೂರು ಬಂದಿದೆ. ಅಕ್ರಮ ಪಿಜಿ ಗಳ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಅಧಿಕಾರಿಗಳ ಅಕ್ರಮಗಳ ಕುರಿತು ದಾಖಲೆಯೊಂದಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.