ಜಿಲ್ಲೆಯನ್ನೇ ನಡುಗಿಸಿದ ಮಹಿಳೆ ಕೊಲೆ ಪ್ರಕರಣ: ನಾಲ್ಕು ತನಿಖಾ ತಂಡ ರಚನೆ 

ಬ್ರಹ್ಮಾವರ: ಉಪ್ಪಿನಕೋಟೆ ಕುಮ್ರಗೋಡು ಗ್ರಾಮದಲ್ಲಿರುವ ಮಿಲನ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ನಡೆದಿರುವ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌ ತಿಳಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಕಟ್ಟಡದಲ್ಲಿ ಯಾವುದೇ ಸಿಸಿ ಟಿವಿ ಅಳವಡಿಸದೆ ಇದ್ದು ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿಗಳ ಪರಿಶೀಲನೆ ನಡೆಯುತ್ತಿದೆ. ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಶಾಲ ಗಾಣಿಗ ತನ್ನ ಪತಿ ರಾಮಕೃಷ್ಣ ಹಾಗೂ ಪುತ್ರಿಯೊಂದಿಗೆ ದುಬೈನಲ್ಲಿ ವಾಸ ಮಾಡಿಕೊಂಡಿದ್ದು ಸುಮಾರು ಮೂರು ತಿಂಗಳ ಹಿಂದೆ ಮೂವರು ಊರಿಗೆ ಬಂದಿದ್ದು, ರಾಮಕೃಷ್ಣರವರ ಹಿರಿಯರ ಆಸ್ತಿಯಲ್ಲಿ ಅವರ ಪಾಲಿಗೆ ಬರುವ ಆಸ್ತಿಗೆ ಸಂಬಂಧಿಸಿದ ದಸ್ತಾವೇಜುಗಳಿಗೆ ಸಹಿ ಹಾಕಲು ವಿಶಾಲ ಅವರ ತಂದೆ ವಾಸು ಗಾಣಿಗರಿಗೆ ಅಧಿಕಾರ ಪತ್ರವನ್ನು ನೀಡಿ ವಾಪಾಸು ಮೂವರು ದುಬೈಗೆ ಹೋಗಿದ್ದರು.

ಆಸ್ತಿ ಪಾಲಿನ ಸಂಬಂಧ ವಿಶಾಲ ಗಾಣಿಗ ಮತ್ತು ಮಗು ದುಬೈಯಿಂದ ಜುಲೈ 2 ರಂದು ವಾಪಾಸು ಊರಿಗೆ ಬಂದಿದ್ದು, ಕುಮ್ರಗೋಡಿನಲ್ಲಿರುವ ಮಿಲನ ರೆಸಿಡೆನ್ಸಿಯಲ್ಲಿ ವಾಸವಾಗಿದ್ದರು.

ಜು.7ರಂದು ರಾಮಕೃಷ್ಣರವರ ಆಸ್ತಿಪಾಲು ಪಟ್ಟಿ ಆಗಿದ್ದು, ಜು.12ರಂದು ವಿಶಾಲಾ ಗಾಣಿಗ ತನ್ನ ತಂದೆ ತಾಯಿ ಮತ್ತು ಮಗನೊಂದಿಗೆ ರಿಕ್ಷಾದಲ್ಲಿ ಫ್ಲ್ಯಾಟ್‌ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಬಂದಿದ್ದರು.

ನಂತರ ವಿಶಾಲ ಗಾಣಿಗ ನಾನು ಬ್ರಹ್ಮಾವರ ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಆ ಹಣವನ್ನು ಗಂಡನ ಮನೆಗೆ ಕೊಟ್ಟು ಬರುವುದಾಗಿ ಹೇಳಿ ಅದೇ ರಿಕ್ಷಾದಲ್ಲಿ ವಾಪಸ್ ಹೊರಟು ಹೋಗಿದ್ದರು. ನಂತರ ಮಧ್ಯಾಹ್ನ ಆದರೂ ವಿಶಾಲ ಮನೆಗೆ ಬಾರದೆ ಇದ್ದುದರಿಂದ ಆಕೆಯ ತಂದೆ ಮೊಬೈಲ್ ಗೆ ಕರೆ ಮಾಡಿದಾಗ ನಾಟ್ ರೀಚೆಬಲ್ ಬಂದಿತ್ತು.

ವಿಶಾಲರ ತಂದೆ ಅವರ ಪತಿ ರಾಮಕೃಷ್ಣಗೆ ಕರೆಮಾಡಿ ವಿಚಾರಿಸಿದಾಗ, ಸುಮಾರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆ ತಾನು ಸಾಲಿಗ್ರಾಮದಲ್ಲಿ ಇದ್ದೇನೆ. ಬ್ರಹ್ಮಾವರ ಬ್ಯಾಂಕಿಗೆ ಹೋಗಿ ನಂತರ ಮಗುವಿನ ಹುಟ್ಟುಹಬ್ಬಕ್ಕೆ ಕೇಕ್ ಆರ್ಡರ್ ಮಾಡಿರುವುದಾಗಿ ಮೆಸೇಜ್ ಮಾಡಿದ್ದಳು ಎಂದು ತಿಳಿಸಿದ್ದರು.

ಸ್ವಲ್ಪ ಹೊತ್ತಿನ ನಂತರ ರಾಮಕೃಷ್ಣ, ತನ್ನ ಮಾವ ವಾಸು ಗಾಣಿಗರಿಗೆ ಕರೆ ಮಾಡಿ ವಿಶಾಲ ಫೋನ್ ಗೆ ಸಿಗುತ್ತಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ವಾಸು ಗಾಣಿಗ ಮತ್ತು ಅವರು ಇನ್ನೊಬ್ಬಳು ಮಗಳು ವಿನಯಾ ಸಂಜೆ 6:10ರ ಸುಮಾರಿಗೆ ಫ್ಲ್ಯಾಟ್‌ಗೆ ಹೋದರು. ಆಗ ಫ್ಲ್ಯಾಟ್‌ನ ಮುಖ್ಯದ್ವಾರ ಲಾಕ್ ಆಗಿರುವುದು ಕಂಡುಬಂತು.

ಬಳಿಕ ಅವರಲ್ಲಿದ್ದ ಕೀಯಿಂದ ಬಾಗಿಲು ತೆರೆದು ಒಳಗೆ ನೋಡಿದಾಗ ಬೆಡ್ ರೂಮ್‌ನ ನೆಲದ ಮೇಲೆ ವಿಶಾಲ ಕೊಲೆಯಾಗಿ ಬಿದ್ದಿರುವುದು ಕಂಡುಬಂತು. ಆಕೆಯ ದೇಹದ ಪಕ್ಕದಲ್ಲಿ ತುಂಡಾದ ಎಲೆಕ್ಟ್ರಾನಿಕ್ ಉಪಕರಣದ ಪವರ್ ಕೇಬಲ್ ತುಂಡಾಗಿ ಬಿದ್ದುಕೊಂಡಿದ್ದು, ಕುತ್ತಿಗೆಯಲ್ಲಿ ಚಾರ್ಜರ್ಕೇಬಲ್ ಬಿಗಿದು ಸುತ್ತಿಕೊಂಡಿರುವುದು ಕಂಡು ಬಂದಿದೆ.

ಆಕೆಯು ಧರಿಸಿದ್ದ ಎರಡು ಗಟ್ಟಿ ಚಿನ್ನದ ಬಳೆಗಳು, ಕರಿಮಣಿ ಸರ ಮತ್ತು ಒಂದ ಜೊತೆ ಕಿವಿಯೋಲೆ ಸೇರಿದಂತೆ ಒಟ್ಟು 2 ಲಕ್ಷ ರೂ. ವೌಲ್ಯದ 50 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ. 

ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶದಿಂದ ವಿಶಾಲ ಗಾಣಿಗರ ಕುತ್ತಿಗೆ ಬಿಗಿದು ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿರಬೇಕು ಎಂದು ಮೃತರ ತಂದೆ ವಾಸು ಗಾಣಿಗ ಬಹ್ಮಾವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply