ಅಸಂಘಟಿತ ವಲಯದವರು ನೋಂದಾವಣಿ ಮಾಡಿಕೊಳ್ಳುವುದರಿಂದ ಅವರಿಗೆ ಸರಿಯಾದ ಸಮಯದಲ್ಲಿ ಸರಕಾರದ ಯೋಜನೆ ಯೋಚನೆಗಳನ್ನು ತಲುಪಿಸಿ ಅದರ ಪ್ರಯೋಜನ ಪಡೆಯುವಲ್ಲಿ ಸಹಕರಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗ,ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ಹಾಗು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಜರಗಿದ ಇ ~ಶ್ರಮ್ ನೋಂದಣಿ ಶಿಬಿರ ಹಾಗು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇ ಶ್ರಮ್ ವರ್ಗಕ್ಕೆ ಸಹಾಯವಾಗಲು ಉಡುಪಿ ಅಂಚೆ ವಿಭಾಗದ 263 ಕೇಂದ್ರಗಳಲ್ಲೂ ಈ ನೋಂದಣಿ ಸೌಲಭ್ಯ ದೊರಕುವಂತೆ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಎಸ್ ಕೆ ಪಿ ಎ ಉಡುಪಿ ವಲಯದ ಅಧ್ಯಕ್ಷರಾದ ಜನಾರ್ದನ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಎಸ್ ಕೆ ಪಿ ಎ ಉಡುಪಿ ವಲಯದ ಮಾಜಿ ಅಧ್ಯಕ್ಷ ಸುಕುಮಾರ್ ಕುಕ್ಕಿಕಟ್ಟೆ , ಕೋಶಾಧಿಕಾರಿ ದಿವಾಕರ್ಕಾ ಹಿರಿಯಡ್ಕ, ಕಾರ್ಯದರ್ಶಿ ಪ್ರವೀಣ್ ಕೊರೆಯ ಉಪಸ್ಥಿತರಿದ್ದರು.
ಸಹಾಯಕ ಅಂಚೆ ಅಧೀಕ್ಷಕ ಜಯರಾಮ್ ಶೆಟ್ಟಿ ಇ ಶ್ರಮ್ ನೋಂದಣಿ ವಿಷಯವಾಗಿ ಮತ್ತು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಉಡುಪಿ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ನಿರೂಪಿಸಿ, ಸ್ವಾಗತಿಸಿದರು. ಸಿಬ್ಬಂದಿ ಸುರೇಂದ್ರ ಕೋಟ್ಯಾನ್ ಪ್ರಾರ್ಥಿಸಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್ ವಂದಿಸಿದರು.