ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ!

ಎರಡು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿದ್ದ ನವವಿವಾಹಿತೆ 21 ದಿನಕ್ಕೆ ತಾಳಿ ಬಿಚ್ಚಿ ಕೊಟ್ಟು ಹೋಗಿದ್ದಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನ ವಿನೋದ್ ರಾಜ್ (24) ಎಂದು ಗುರುತಿಸಲಾಗಿದೆ. ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಇದೀಗ ಆತನ ಸಾವಿನಿಂದ ಕುಟುಂಬ ಶೋಕದಲ್ಲಿ ಮುಳುಗಿದೆ.

ಮೃತ ಯುವಕ ಅದೇ ಊರಿನ ಯುವತಿಯೋರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕಳೆದ ಡಿ.10 ರಂದು ಇಬ್ಬರ ವಿವಾಹ ಸಹ ಆಗಿತ್ತು. ಅನ್ಯಜಾತಿಯ ಇವರ ಪ್ರೀತಿಗೆ ಹುಡುಗನ ಮನೆಯಿಂದ ಯಾವುದೇ ವಿರೋಧವಿರಲಿಲ್ಲ. ಯುವತಿ ಮನೆಯಿಂದ ಇದಕ್ಕೆ ತೀವ್ರ ವಿರೋಧವಿತ್ತು. ಯುವಕನ ಮನೆಯಲ್ಲಿ ಮಾಂಸ ತಿನ್ನುತ್ತಾರೆ. ದೇವರು ಒಪ್ಪಿಲ್ಲ, ಎಡಗಡೆ ಅಪ್ಪಣೆಯಾಗಿದೆ ಎಂದು ಹೇಳಿದ್ದರಂತೆ. ಇಷ್ಟಾದರೂ ಯುವತಿ ತನ್ನ ಮನೆಯವರ ಮಾತನ್ನು ತಿರಸ್ಕರಿಸಿ ಯುವಕನನ್ನು ಮದುವೆಯಾಗಿದ್ದಳು.

ಮದುವೆಯಾದ ಕೆಲವೇ ದಿನಗಳಲ್ಲಿ ತವರು ಮನೆಗೆ ಹೋದ ಹುಡುಗಿ, ತಾಯಿ ಮಾತು ಕೇಳಿ ಬೇರೆ ವರಸೆ ತೆಗೆದಿದ್ದಳು ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಯುವತಿ, ನನಗೆ ಗಂಡನೇ ಬೇಕೆಂದು ಬರೆದುಕೊಟ್ಟು ಬಂದಿದ್ದಳು. ಬಂದ ಮೇಲೆ ನವದಂಪತಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೂಡ ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಅಮ್ಮನನ್ನ ನೋಡಿಕೊಂಡು ಬರ್ತೀನಿ ಎಂದು ಹೋದ ಯುವತಿ ಮತ್ತೆ ಯುವಕನ ಮನೆಗೆ ಬರಲೇ ಇಲ್ಲ. ಡಿ.31 ರಂದು, ಪೊಲೀಸ್ ಠಾಣೆಯಲ್ಲಿ ಮತ್ತೆ ಯುವತಿ ಯುವಕನ ವಿರುದ್ಧವೇ ದೂರು ನೀಡಿ ಒಡವೆ, ತಾಳಿ ಎಲ್ಲಾ ಬಿಚ್ಚಿ ಕೊಟ್ಟಿದ್ದಳು.

ಈ ಘಟನೆಯಾದ ಬಳಿಕ ಯುವಕ ಒಂದು ತಿಂಗಳಿನಿಂದ ಮೌನಕ್ಕೆ ಜಾರಿದ್ದ. ಬಳಿಕ ಇದೇ ನೋವಿನಲ್ಲಿ ವಿನೋದ್ ನೇಣುಬಿಗಿದುಕೊಂಡಿದ್ದ. ಕೂಡಲೇ ಆತನನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.

 
 
 
 
 
 
 
 
 
 
 

Leave a Reply