ತಾಳಮದ್ದಲೆ ಅರ್ಥಧಾರಿ ಕೂರಾಡಿ ಸದಾಶಿವ ಕಲ್ಕೂರ ನಿಧನ – ಯಕ್ಷಗಾನ ಕಲಾರಂಗ ಸಂತಾಪ

ಉಡುಪಿ : ಶಿಕ್ಷಕ, ತಾಳಮದ್ದಲೆ ಅರ್ಥಧಾರಿ, ಚಿಂತಕ ಕೂರಾಡಿ ಸದಾಶಿವ ಕಲ್ಕೂರ (86) ಆ. 10ರ ರಾತ್ರಿ ಅಲೆವೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಮೂರುವರೆ ದಶಕಗಳ ಕಾಲ ವಿವಿಧೆಡೆ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಳಿಕ ಉಪ್ಪೂರಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು.

‘ಬಿತ್ತಿದಂತೆ ಬೆಳೆ’ ಎಂಬ ಯಕ್ಷಗಾನ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಕುರಿತಾದ ಅಮೂಲ್ಯ ಬರಹಗಳನ್ನೊಳಗೊಂಡ ಪುಸ್ತಕವನ್ನು ಪ್ರಕಟಿಸಿದ್ದಾರೆ. ಶಿವರಾಮ ಕಾರಂತ, ಬೈಕಾಡಿ ವೆಂಕಟಕೃಷ್ಣ ರಾವ್, ಗೋಪಾಲ ಕೃಷ್ಣ ಅಡಿಗ ಹೀಗೆ ಹಲವು ಸಾಹಿತಿಗಳೊಂದಿಗೆ ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸುತ್ತಾ ಬಂದಂತ ಧೀಮಂತ ವ್ಯಕ್ತಿಯಾಗಿದ್ದರು.

ಬಡಗಿನ ಹಾರಾಡಿ ಮತ್ತು ಮಟಪಾಡಿ ತಿಟ್ಟಿನ ಹಿರಿಯ ಕಲಾವಿದರ ಅನನ್ಯತೆಯ ಬಗ್ಗೆ ಸೋದಾರಣವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದರು.ಕೂರಾಡಿಯಲ್ಲಿ ‘ಸಂಸ್ಕೃತಿ ಸಂಘ’ ವನ್ನು ಕಟ್ಟಿ ಗ್ರಾಮೀಣ ಭಾಗಕ್ಕೆ ನಾಡಿನ ಶ್ರೇಷ್ಠ ಸಾಹಿತಿಗಳನ್ನು ಕರೆಸಿಕೊಂಡು ಅವರ ವಿಚಾರಗಳನ್ನು ಜನರಿಗೆ ತಲುಪಿಸುತ್ತಾ ಕನ್ನಡದ ಸೇವೆಯನ್ನು ನಿರಂತರ ನಡೆಸಿಕೊಂಡು ಬಂದಿದ್ದರು.

ತಾಳಮದ್ದಲೆಯ ಅರ್ಥಧಾರಿಯಾಗಿ ಕಲಾ ಸೇವೆಗೈದ ಇವರನ್ನು ಯಕ್ಷಗಾನ ಕಲಾರಂಗ, ಅಂಬಲಪಾಡಿ ಯಕ್ಷಗಾನ ಸಂಘವೂ ಸೇರಿದಂತೆ ಹಲವಾರು ಸಂಸ್ಥೆಗಳು ಗೌರವಿಸಿದ್ದವು. ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಕೂರಾಡಿಯವರು ಅಗಲಿದ್ದಾರೆ.

ಇವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಗುರು ಬನ್ನಂಜೆ ಸಂಜೀವ ಸುವರ್ಣರು ಪ್ರಾರ್ಥಿಸಿದ್ದಾರೆ.

 
 
 
 
 
 
 
 
 
 
 

Leave a Reply