ಜಿಲ್ಲೆಯ ಅಭಿವೃಧ್ದಿ ಕಾರ್ಯಗಳ ಅನುದಾನದ ಪರಿಣಾಮಕಾರಿ ಅನುಷ್ಠಾನ~ ಉಸ್ತುವಾರಿ ಸಚಿವ ಅಂಗಾರ

ಉಡುಪಿ: ಸರ್ಕಾರ ಪ್ರಸುತ್ತ ಸಾಲಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಯೋಜನೆಗಳಿಗೆ ಮಂಜೂರು ಮಾಡಿರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ಕೊಳ್ಳುವುದರೊಂದಿಗೆ ಪ್ರತಿಶತ 100 ರಷ್ಟು ಪರಿಣಾಮ ಕಾರಿಯಗಿ ಮಾಚ್  ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕನುಗುಣವಾಗಿ ಅನುದಾನವನ್ನೂ ಸಹ ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನವನ್ನು ಮಾಡುವುದ ರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದರು.
ಸರ್ಕಾರದ ಯೋಜನೆಗಳನ್ನು ಕಾರ್ಯ ಸಾಧನೆ ಮಾಡುವ ಸಂದಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಜಿಲ್ಲಾಡಳಿತ ಅಥವಾ ನಮ್ಮ ಗಮನಕ್ಕೆ ತಂದು ಅದನ್ನು ಶೀಘ್ರದಲ್ಲಿಯೇ ಪರಿಹರಿಸುವ ಕಾರ್ಯವನ್ನು ಮಾಡ ಲಾಗುವುದು ಎಂದರು. ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ನೀಡಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ವ್ಯವಸ್ಥಿತವಾದ ಭವನ ನಿರ್ಮಾಣ ಮಾಡಬೇಕು ಅವುಗಳ ನಿರ್ಮಾಣವು , ಸ್ಥಳೀಯ ಜನರ ಸದ್ಬಳಕೆಗೆ ಅನುಕೂಲಕರವಾಗುವ ಸ್ಥಳಗಳಲ್ಲಿ ನಿರ್ಮಿಸ ಬೇಕೆಂದು ಸೂಚನೆ ನೀಡಿದರು.
ಅಂಬೇಡ್ಕರ್ ಅಭಿವೃದ್ದಿ ನಿಗಮ ಸೇರಿದಂತೆ ವಿವಿಧ ಅಭಿವೃದ್ದಿ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕಾಮಗಾರಿಗಳನ್ನು ಕೈಗೊಳ್ಳುವ ಕಾರ್ಯ ವಿಳಂಬವಾಗಿದೆ . ಕೊಳವೆ ಬಾವಿ ಕೊರೆಯುವ ಟೆಂಡರ್ ಕಾಮಗಾರಿಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಕರೆಯುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸರ್ಕಾರದ ಸಹಾಯಧನದೊಂದಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 
ಫಲಾನುಭವಿಗಳನ್ನು ಅಯ್ಕೆ ಮಾಡಿ, ಅರ್ಥಿಕ ನೆರವನ್ನು ಒದಗಿಸಲು ಬ್ಯಾಂಕ್ ಗಳಿಗೆ ಶಿಫಾರಸ್ಸು ಅರ್ಜಿಗಳನ್ನು ವಿಳಂಬವಿಲ್ಲದೇ ನೆರವನ್ನು ಒದಗಿಸಬೇಕೆಂದು ಲೀಡ್ ಬ್ಯಾಂಕ್ ಮೆನೇಜರ್ ಗೆ ಸೂಚನೆ ನೀಡಿದರು. ಅಭಿವೃಧ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಉತ್ತರಿಸುವಾಗ ವಾಸ್ತವ ಅಂಶದ ಮಾಹಿತಿಗಳನ್ನು ನೀಡಬೇಕು, ಹಾರಿಕೆ ಉತ್ತರಗಳನ್ನು ನೀಡಿ ಸಮಸ್ಯೆಗೆ ಒಳಗಾಗಬೇಡಿ ಎಂದ ಅವರು, ಕೆಲಸ ಕಾರ್ಯಗಳನ್ನು ನಿಗಧಿತ ಕಾಲಮಿತಿಯೊಳಗೆ ಮಾಡಬೇಕೆಂದು ತಿಳಿಸಿದರು.
ವಿವಿಧ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಇಲಾಖಾವಾರು ಸವಿಸ್ತಾರವಾಗಿ ಮಾಹಿತಿ ಪಡೆದ ಸಚಿವರು, ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರವಹಿಸಬೇಕು ಎಂದರು. ಸಾರ್ವಜನಿಕರಿ೦ದ ಕೈಗಾರಿಕೆ ಸೇರಿದಂತೆೆ ಮತ್ತಿತರ ಕಾರ್ಯಗಳಿಗೆ ಭೂ ಸ್ವಾಧೀನ ಪಡಿಸಿಕೊಂಡು ನಿಗಧಿತ ಉದ್ದೇಶದ ಬಳಕೆಗೆ ಜಮೀನನ್ನು ನೀಡಿದಾಗ, ಆ ಜಮೀನು ಸದ್ಬಳಕೆ ಯಾಗದೇ ಇದ್ದಾಗ ಅದನ್ನು ಮರು ಸ್ವಾಧೀನ ಪಡಿಸಿಕೊಳ್ಳ:ಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಿದರು.
ನಗರೋತ್ಥಾನದ 4 ನೇ ಹಂತದಲ್ಲಿ ಪ್ರತಿ ನಗರಸಭೆಗೆ 40 ಕೋಟಿ, ಪುರಸಭೆಗಳಿಗೆ 10 ಕೋಟಿ ಹಾಗೂ ಪಟ್ಟಣ ಪಂಚಾಯತ್ ಗಳಿಗೆ ತಲಾ 5 ಕೋಟಿ ಅನುದಾನವನ್ನು ನೀಡಲಾಗಿದ್ದು, ನಗರ ಪ್ರದೇಶಗಳ ಮೂಲಭೂತ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿ ಶೀಘ್ರದಲ್ಲಿಯೇ ಅನುಮೋದನೆ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ವಾರಾಹಿ ನೀರಾವರಿ ಯೋಜನೆಯಡಿ ಕುಡಿಯುವ ನೀರು ಸೇರಿದಂತೆ ನೀರಾವರಿ ಯೋಜನೆಗಳನ್ನು ರೂಪಿಸಲು 70 ರ ದಶಕದಲ್ಲಿ 9 ಕೋಟಿ ಅಂದಾಜು ಮೊತ್ತದಲ್ಲಿ ಯೋಜನೆ ರೂಪಿಸಲಾಗಿತ್ತು, ಈ ಕಾಮಗಾರಿ ಕುಂಠಿತವಾಗಿ ಕೈಗೊಂಡ ಹಿನ್ನಲೆ ಪ್ರಸ್ತುತ 553 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡರೂ ಶೇ.50 ರಷ್ಟು ಪ್ರಗತಿ ಸಾಧಿಸಲಾಗಿದೆ , ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯವಸ್ಥಿತವಾದ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಜನ ಪ್ರತಿನಿಧಿಗಳಾದ ನಮ್ಮ ಕಾರ್ಯವಾಗಿದ್ದು, ಇದನ್ನು ಆದ್ಯತೆಯ ಮೇಲೆ ಕೈಗೊಳ್ಳುವುದು ಒಳಿತು ಎಂದರು. ಸರ್ಕಾರ ಬಡ ಜನರಿಗೆ ನೀಡುತ್ತಿರುವ ಪಡಿತರವನ್ನು ಸರ್ಕಾರಿ ನೌಕರರು ಸಹ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂತಹ ದುರುಪಯೋಗ ಪಡೆದುಕೊಂಡವರ ಮೆಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವರ ಗಮನಕ್ಕೆ ತಂದರು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಮೀನುಗಾರರು ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಮತ್ಯಾಶ್ರಯ ಯೋಜನೆಯಡಿ 1.20 ಲಕ್ಷ ಅನುದಾನ ನೀಡಲಾಗುತ್ತಿದೆ ಆದರೆ ಅತ್ಯಂತ ಕಡಿಮೆಯಾಗಿದ್ದು, ಕನಿಷ್ಠ 5 ಲಕ್ಷದ ಅನುದಾನ ನೀಡಬೇಕು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ತಿಳಿಸಿದ ಅವರು ಕಳೆದ 2 ವರ್ಷಗಳಿಗೆ ಮೀನುಗಾರಿಕೆ ಅನುಕೂಲವಾಗುವ ರಸ್ತೆ ಕಾಮಗಾರಿ ಕೈಗೊಂಡಿಲ್ಲ, ಅಲ್ಲದೇ ಕಡಲ ಕೊರತೆ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಿರ್ವಹಣೆ ವ್ಯವಸ್ಥಿತ ರೀತಿ ಯಲ್ಲಿ ನಡೆಯದ ಕಾರಣ ರೋಗಿಗಳನ್ನು ಪಕ್ಕದ ಜಿಲ್ಲೆಗಳಿಗೆ ಚಿಕಿತ್ಸೆಗೆ ಕರದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ, ವೈದ್ಯಕೀಯ ಸಿಬ್ಬಂದಿಗಳ ವೇತನ ಪಾವತಿ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ಒದಗಿಸಿದ ಬಿಲ್ ಗಳ ಪಾವತಿ ಬಾಕಿ ಇರುವ ಬಗ್ಗೆ ಸಚಿವರ ಗಮನಕ್ಕೆ ತಂದರು.
ವಿಧಾನ ಪರಿಷತ್ ನ ಶಾಸಕ ಮಂಜುನಾಥ ಭಂಢಾರಿ ಮಾತನಾಡಿ, ಬಡ ಜನರ ಅನುಕೂಲಕ್ಕಾಗಿ ಸರ್ಕಾರ ಸವಲತ್ತುಗನ್ನು ನೀಡುತ್ತಿದೆ ಇವುಗಳನ್ನು ಅರ್ಹ ವ್ಯಕ್ತಿಗೆ ತಲುಪಿಸುವ ಕಾರ್ಯಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಮಾಡಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply