ಕ್ಷಯರೋಗ ನಿಯಂತ್ರಣಕ್ಕೆ ಸರಕಾರದ ಕಾರ್ಯಕ್ರಮವನ್ನು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕಾಗಿದೆ – ಜಿ. ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಕ್ಷಯ ರೋಗಿಗಳ ಸಂಖ್ಯೆಯನ್ನು ತಗ್ಗಿಸಬೇಕೆಂದುಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಟಿ.ಬಿ. ಫೋರಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2016 ರಿಂದ 2020 ರ ವರೆಗಿನ ಕ್ಷಯ ರೋಗಿಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಇದರ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಕ್ಷಯರೋಗದ ಪರೀಕ್ಷೆಗಳನ್ನು ಮಾಡುವುದರೊಂದಿಗೆ ರೋಗಿಗಳನ್ನು ಗುರುತಿಸಿ ಅವರುಗಳಿಗೆ ರೋಗ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಕ್ಷಯರೋಗದ ತಿಳುವಳಿಕೆಯ ಕೊರತೆಯಿಂದ ಬಹಳಷ್ಟು ಜನ ಕ್ಷಯರೋಗದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಎಂದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಈ ರೋಗದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಎರಡು ವಾರಕ್ಕಿಂತಲೂ ಹೆಚ್ಚು ನಿರಂತರ ಕೆಮ್ಮು, ರಾತ್ರಿ ಜ್ವರ, ತೂಕ ಇಳಿಕೆ, ಹಸಿವಾಗದೇ ಇರುವುದು, ಇವು ಕ್ಷಯರೋಗದ ಲಕ್ಷಣಗಳಾಗಿದ್ದು, ಇಂತಹ ಲಕ್ಷಣ ಇರುವ ಜನ ಸಾಮಾನ್ಯರು ಆ ಬಗ್ಗೆ ನಿರ್ಲಕ್ಷ್ಯ ತೋರದೇ ಪರೀಕ್ಷೆಗೆ ಒಳಗಾಗಬೇಕು.ಕ್ಷಯರೋಗಕ್ಕೆ ಉಚಿತ ಚಿಕಿತ್ಸೆಯನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿಯೂ ಹಾಗೂ ಆರೋಗ್ಯ ಕೇಂದ್ರಗಳಲ್ಲಿಯೂ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳ ವೈದ್ಯರುಗಳು, ಕ್ಷಯರೋಗದ ಲಕ್ಷಣಗಳು ರೋಗಿಗಳಲ್ಲಿ ಕಂಡುಬಂದಾಗ ತಕ್ಷಣದಲ್ಲಿ ಅವರಿಗೆ ಕ್ಷಯರೋಗದ ಪರೀಕ್ಷೆಯನ್ನು ಮಾಡಿಸಬೇಕು. ಈ ಬಗ್ಗೆ ಕ್ಷಯ ಕೇಂದ್ರಗಳಿಗೆ ಮಾಹಿತಿಯನ್ನು ನೀಡಬೇಕು, ತಪ್ಪಿದ್ದಲ್ಲಿ ಅವರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ 2019 ರಲ್ಲಿ 1910 ಟಿ.ಬಿ ಪ್ರಕರಣಗಳು ಕಂಡು ಬಂದು ಅವುಗಳಲ್ಲಿ ಶೇ. 83 ರಷ್ಟು ಜನರಿಗೆ ರೋಗ ನಿವಾರಣೆಯಾದರೇ, 122 ಜನ ಮರಣ ಹೊಂದಿರುತ್ತಾರೆ. 2020 ನೇ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ತಪ್ಪಿಸಲು ಜನರು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಮುಖಗವಸುಗಳನ್ನು ಬಳಸಿದ್ದರಿಂದಾಗಿ

ಪ್ರಕರಣಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿವೆ. ಪ್ರಸ್ತುತ ಸಾಲಿನಲ್ಲಿ 1020 ಪ್ರಕರಣಗಳಾಗಿ ಶೇ.84 ರಷ್ಟು ಜನ ರೋಗದಿಂದ ಮುಕ್ತಿ ಹೊಂದಿ, 79 ಜನರ ಮರಣ ಸಂಭವಿಸಿ ಶೇಕಡಾವಾರು ಪ್ರಮಾಣ 7.2 ರಷ್ಟಿದೆ ಮುಂದಿನ ದಿನಗಳಲ್ಲಿ ಮರಣ ಸಂಖ್ಯೆಯನ್ನು ಶೇ.6 ಕ್ಕಿಂತ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಕ್ಷಯರೋಗದಿಂದ 35 ರಿಂದ 50 ವರ್ಷದೊಳಗಿನವರು ಹೆಚ್ಚಾಗಿ ಮರಣ ಹೊಂದುತ್ತಿದ್ದು, ಇದರಿಂದಾಗಿ ದೇಶದ ಮಾನವ ಸಂಪನ್ಮೂಲಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅರಿವು ಕಾರ್ಯಕ್ರಮಗಳನ್ನು ಜನಾಂದೋಲನದ ರೀತಿಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕಾಗಿದೆ ಎಂದರು.

 

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಡಾ.ಎಂ.ಜಿ.ರಾಮ, ಪತ್ರಕರ್ತ ಸುಜಿ ಕುರಿಯ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply