ಉಡುಪಿ: ಎಸ್ ಡಿಎಂ ನಲ್ಲಿ  ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ‘ಪ್ರಜ್ಯೋತಿ- 2023’ 

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ‘ಪ್ರಜ್ಯೋತಿ 2023’ ಕಾರ್ಯಕ್ರಮವನ್ನು  ನವೆಂಬರ್ 5ರಂದು ಕಾಲೇಜಿನ ಭಾವಪ್ರಕಾಶ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿ ವ್ಯಾಸರಾಜ ತಂತ್ರಿ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ 1984-89ರ ಸಾಲಿನ ಹಳೆ ವಿದ್ಯಾರ್ಥಿ ಸಮೂಹ ‘ಚಿರಂತನ-1984’ ವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ‘ಗುರುವಂದನ’ ಕಾರ್ಯಕ್ರಮದಲ್ಲಿ ಕಾಲೇಜಿನ ರೋಗನಿದಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ವಿ. ಪ್ರಸನ್ನ ಅರನ್ನು ಸನ್ಮಾನಿಸಲಾಗುವುದು.

ಅದೇ ದಿನ ‘ಕ್ಲಿನಿಕಲ್’ ಎಪ್ಲಿಕೇಶನ್ ಆಫ್ ರಸೌಷಧೀಸ್ ಇನ್ ಜನರಲ್ ಪ್ರಾಕ್ಟಿಸ್’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಯಾಗಿ ಬಳ್ಳಾರಿ ಶ್ರೀನಿವಾಸ ಕ್ಲಿನಿಕ್‌ನ ಡಾ. ಗೋಪಿಕೃಷ್ಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎನ್.ಟಿ. ಅಂಚನ್, ಕೋಶಾಧಿಕಾರಿ ಸಂದೀಪ್ ಸನಿಲ್, ಪದಾಧಿಕಾರಿಗಳಾದ ಶ್ರೀನಿಧಿ ಬಲ್ಲಾಳ್, ಸಂದೇಶ್ ಕುಮಾರ್ ಇದ್ದರು.

 
 
 
 
 
 
 
 
 
 
 

Leave a Reply