ಪುತ್ತಿಗೆ ಮೂಲ ಮಠದಲ್ಲಿ ನಿರ್ಮಿಸಲಾದ ಸುವರ್ಣ ಸ್ಮೃತಿಸೌಧ ಲೋಕಾರ್ಪಣೆ

ಉಡುಪಿ:  ಲೌಕಿಕ ವಿದ್ಯೆ ಜೊತೆಗೆ ಅಧ್ಯಾತ್ಮ ಶಿಕ್ಷಣ ಪಡೆಯಬೇಕು ಎಂದು ಭಾವಿ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ನೆನಪಿಗಾಗಿ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ನಿರ್ಮಿಸಲಾದ ಸುವರ್ಣ ಸ್ಮೃತಿಸೌಧ ಉದ್ಘಾಟನೆ ಸಂದರ್ಭ ಭಾನುವಾರ ಮಾತನಾಡಿದರು.
ಪುತ್ತಿಗೆ ವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಕಾಲೇಜು ಮಾಡಲು ಯೋಚಿಸಿದ್ದಾಗ ನಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸಲಹೆಯಂತೆ ಆಧ್ಯಾತ್ಮ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಹತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗಿಂತ ಒಂದು ವಿದ್ಯಾಪೀಠ ಸ್ಥಾಪನೆ ಉತ್ತಮ. ಅಧ್ಯಾತ್ಮ ವಿದ್ಯೆ ಶ್ರೇಷ್ಠವಾಗಿದ್ದು, ಲೌಕಿಕ ವಿದ್ಯೆ ಜೊತೆಗೆ ಆಧ್ಯಾತ್ಮ ವಿದ್ಯೆಯ ಅಭ್ಯಾಸ ಅಗತ್ಯ ಎಂದರು. ತಮ್ಮ ಸನ್ಯಾಸ ಸ್ವೀಕಾರದ ಸ್ಮರಣೆಗಾಗಿ ಬ್ರಾಹ್ಮಣ್ಯ ರಕ್ಷಣೆಗಾಗಿ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಸುವರ್ಣ ರಥ ಸಮರ್ಪಣೆಯ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು.
ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಸುವರ್ಣ ಸ್ಮೃತಿಸೌಧ ಉದ್ಘಾಟಿಸಿ, ಪುತ್ತಿಗೆ ಶ್ರೀಪಾದರು ವಿದೇಶದಲ್ಲಿ ಕೈಗೊಂಡಿರುವ ಕೃಷ್ಣ ತತ್ವ ಪ್ರಚಾರ ಶ್ಲಾಘನೀಯ. ತಮ್ಮ ಚತುರ್ಥ ಪರ್ಯಾಯ ಅವಧಿಯಲ್ಲಿ ಕೋಟಿ ಗೀತಾ ಲೇಖನ ಕಾರ್ಯದಂಥ ಮಹಾಕಾರ್ಯ ನಡೆಸುತ್ತಿರುವುದು ಹರ್ಷದಾಯಕ ಎಂದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ|ಮೂ| ಪಿ.ಎಸ್.ದಿನೇಶಕುಮಾರ್ ಶುಭ ಕೋರಿದರು.
ಇಂದಿನ ಕಾಲದಲ್ಲಿ ಅನೇಕ ವಿಶ್ವವಿದ್ಯಾಲಯಗಳು, ಪಾಠಶಾಲೆಗಳು ಸರಕಾರದ ಅಧೀನವಾಗಿ ನಡೆಯುತ್ತಿದ್ದು ಆರ್ಥಿಕ ಬಲದಿಂದ ಬೃಹತ್ ಕಟ್ಟಡಗಳು ಕಂಡುಬಂದರೂ ನಿರೀಕ್ಷಿಸಿದಷ್ಟು ಫಲಗಳು ಸಮಾಜಕ್ಕೆ, ದೇಶಕ್ಕೆ ದೊರಕುತ್ತಿಲ್ಲ. ಆದರೆ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆಯಂಥ ಹಳ್ಳಿಯಲ್ಲಿ ನಡೆಸುತ್ತಿರುವ ವಿದ್ಯಾಪೀಠದಿಂದ ಹೊರಬಂದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲೂ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ವಾಂಸರಾದ ಬೆಂಗಳೂರಿನ ಚತುರ್ವೇದಿ ವೇದವ್ಯಾಸಾಚಾರ್, ಕಾಸರಗೋಡಿನ ರವೀಶ್ ತಂತ್ರಿ ಕುಂಟಾರು, ಮಂಗಳೂರು ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್, ಪುತ್ತೂರಿನ ಡಾ|ಪಿ.ಜೆ.ಬಾಲಕೃಷ್ಣ ಮೂಡಂಬಡಿತ್ತಾಯ, ಉಜಿರೆಯ ಡಾ. ದಯಾಕರ್, ಅ.ಕ.ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬೆಂಗಳೂರಿನ ಬಿ.ಎಸ್.ರಾಘವೇಂದ್ರ ಭಟ್, ಅಮೆರಿಕದ ದಂಡತೀರ್ಥ ಸೀತಾರಾಮ ಭಟ್, ಸಾರಿಗೆ ಉದ್ಯಮಿ ಕೃಷ್ಣಾನಂದ  ಛಾತ್ರ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಿವೃತ್ತ ಪ್ರಾಂಶುಪಾಲ ಡಾ|ಮಧುಸೂದನ ಭಟ್ ಅತಿಥಿಗಳಾಗಿದ್ದರು.
 
 
 
 
 
 
 
 
 
 
 

Leave a Reply