ಪುತ್ತಿಗೆ ಸ್ವಾಮೀಜಿಯ ಕುರಿತು ಸ್ವರಚಿತ ಕವನ
ಉತ್ತರಾಮೇರಿಕಾದೊಳು ಶಿಷ್ಯರೊಡಗೂಡಿ
ಸುತ್ತುತಲಿ ಧರ್ಮಪ್ರಚಾರದಲಿ ನಿರತ
ಹಸ್ತದಲಿ ದಂಡವನ್ನಿಡಿದಿಂದು ಹೊರಟಿಹರು
ಪುತ್ತಿಗೆಯ ಸ್ವಾಮೀಜಿ ಹುರುಪಿನಲ್ಲಿ||
ಕತ್ತಲೆಯ ಮನೆಯೊಳಗೆ ಬೆಳಕನ್ನು ಬೀರುತ್ತ
ಬತ್ತಿರುವ ಮನಗಳಿಗೆ ಸಾಂತ್ವನವ ನೀಡಿ
ಹೊತ್ತು ಹೊತ್ತಿಗೆ ವಿಠ್ಠಲನ ಪೂಜೆಯನು ಮಾಡಿ
ಸುತ್ತೂರ ಭಕ್ತರಿಗೆ ಹರಸುತಿಹರು||
ಜಗದಗಲ ಶ್ರೀಕೃಷ್ಣ ಗೀತೆಯನು ಸಾರುತ್ತ
ಜಗದೊಡೆಯ ಸೇವೆಯನು ದಿನ ಮಾಡುತಿಹರು|
ಬಗೆಬಗೆಯ ಸಂದೇಶ ವಿಶ್ವದೆಲ್ಲೆಡೆ ಸಾರಿ
ನಿಗಮಗೋಚರನನ್ನು ನಿತ್ಯ ಭಜಿಸುವರು||
ಉಡುಪಿಯಲಿ ನಾಲ್ಕನೆಯ ಪರ್ಯಾಯ ಕೈಂಕರ್ಯ
ಕಡೆಗೋಲು ಕೃಷ್ಣನಿಗೆ ಸೇವೆಗೈಯುವರು|
ಕಡೆಗೆ ಮಧ್ವಾಚಾರ್ಯ ಸಿದ್ಧಾಂತ ಸಾರುತ್ತ
ಪೊಡವಿಗೊಡೆಯನ ಲೀಲೆ ಪಸರಿಸುತಲಿಹರು||
ಜಗ ಜಗದೊಳಗೆ ಕೃಷ್ಣ ಗುಡಿಯನ್ನು ಕಟ್ಟಿರುವ
ಸುಗುಣೇಂದ್ರ ತೀರ್ಥರಿಗೆ ನಮಿಸೋಣವಿಂದು
ಹಗಲಿರುಳು ಸಲಹುತಿಹ ಗುರುಗಳಿಗೆರಗಿ ಕರವ
ಮುಗಿದು ಬರೆದಿಹನಿದನು ಸುಪ್ರಶಾಂತ|
✍ ಪ್ರಶಾಂತ ಕುಮಾರ್-