ಹನಿಟ್ರ್ಯಾಪ್ ಬಲೆಗೆ ಬಲಿಯಾದ ನಿಡ್ಡೋಡಿ ಜಗನ್ನಾಥ ಶೆಟ್ಟಿ

ಮಂಡ್ಯ ನಗರದಲ್ಲಿ ಚಿನ್ನಬೆಳ್ಳಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ನಡೆಸುವ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ, ಪ್ರತಿಷ್ಠಿತ ಶ್ರೀನಿಧಿ ಗೋಲ್ಡ್ ಅಂಗಡಿ ಮಾಲೀಕ, ಮೂಡುಬಿದಿರೆ ಮೂಲದ ಬಿಜೆಪಿ ಮುಖಂಡ ಚಾವಡಿಮನೆ ಜಗನ್ನಾಥ ಶೆಟ್ಟಿ ಅವರನ್ನು ತಂಡವೊಂದು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಬರೋಬ್ಬರಿ 50 ಲಕ್ಷ ಪೀಕಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಗನ್ನಾಥ್ ಶೆಟ್ಟಿ ಅವರು, ಕಳೆದ ಫೆಬ್ರವರಿ 26ರ ರಾತ್ರಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ ಮಂಡ್ಯ ನಗರದ ಸಲ್ಮಾ ಭಾನು ಹಾಗೂ ಆಕೆಯ ಸ್ನೇಹಿತ ಸೇರಿ ಇನ್ನಿಬ್ಬರು ಯುವತಿಯರು ಕಾರ್ನಲ್ಲಿ ಬಂದು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾರೆ ಎನ್ನಲಾಗಿದೆ.

ಈ ನಾಲ್ವರು ನೀವು ಶ್ರೀನಿಧಿ ಗೋಲ್ಡ್ ಮಾಲೀಕರಲ್ವಾ ಎಂದು ಪರಿಚಯಿಸಿಕೊಂಡು ‘ನಾವು ಕೂಡ ಮೈಸೂರಿಗೆ ಹೋಗ್ತಿದ್ದೀವಿ, ನೀವೂ ಬನ್ನಿ ಡ್ರಾಪ್ ಕೊಡ್ತೀವಿ’ ಎಂದು ಜಗನ್ನಾಥ್ ಶೆಟ್ಟಿ ಅವರನ್ನು ನಂಬಿಸಿ ಕರೆದೊಯ್ದಿದ್ದಾರೆ.

ಈ ವೇಳೆ ಯುವತಿಯನ್ನು ಕೋಣೆಯಲ್ಲಿ ಇರಿಸಿಕೊಂಡು ಹನಿ ಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಅದನ್ನು ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ರೂಂಗೆ ಬಂದ ಆರೋಪಿಗಳು ‘ನೀನು ಹುಡುಗಿ ಜೊತೆ ಇರೋದನ್ನು ನಾವು ವಿಡಿಯೋ ಮಾಡಿದ್ದೇವೆ. 4 ಕೋಟಿ ರೂಪಾಯಿ ಕೊಡಬೇಕು ಇಲ್ಲದಿದ್ದರೆ ಇಲ್ಲೇ ಕೊಲೆ ಮಾಡೋದಾಗಿ’ ಬೆದರಿಕೆ ಹಾಕಿದ್ದಾರೆ. ಪ್ರಾಣ ಮತ್ತು ಮರ್ಯಾದೆಗೆ ಅಂಜಿದ ಜಗನ್ನಾಥ್ ಶೆಟ್ಟಿ ಅವರು ಕೊನೆಗೆ ಚೌಕಾಶಿ ಮಾಡಿ 50 ಲಕ್ಷ ಕೊಡಲು ಒಪ್ಪಿದ್ದಾರೆ. ಬಳಿಕ ಮರ್ಯಾದೆಗೆ ಅಂಜಿದ ಜಗನ್ನಾಥ ಶೆಟ್ಟಿ ಹಣಕೊಟ್ಟರೂ ಯಾವುದೇ ದೂರು ಕೊಡದೆ ಸುಮ್ಮನಾಗಿದ್ದರು.

50 ಲಕ್ಷ ಪಡೆದಿದ್ದ ಈ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅಲ್ಲದೆ ಮಾನಹಾನಿ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಉದ್ಯಮಿ ಕಡೆಗೆ ಈ ಕುರಿತಾಗಿ ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಈ ಹನಿಟ್ರ್ಯಾಪ್ ತಂಡದ ಪ್ರಮುಖ ರೂವಾರಿ ಮಂಡ್ಯದ ಸಲ್ಮಾಭಾನು ಸೇರಿದಂತೆ 6 ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಹನಿಟ್ರ್ಯಾಪ್ ರೂವಾರಿ ಸಲ್ಮಾ ಭಾನುಳನ್ನು ಬಂಧಿಸಿದ್ದಾರೆ. ಪ್ರತಿಭಟನೆ, ಹೋರಾಟದ ಹೆಸರಲ್ಲಿ ಸಭ್ಯಳಂತೆ ಬಿಲ್ಡಪ್ ಕೊಡ್ತಿದ್ದ ಸಲ್ಮಾ ಭಾನು ಜಗನ್ನಾಥ ಶೆಟ್ಟಿಗೆ ಬಲೆ ಹೆಣೆದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿರೋ ಉಳಿದವರ ಬಂಧನಕ್ಕೂ ಬಲೆ ಬೀಸಿದ್ದಾರೆ.

ಸದ್ಯ ಬಂಧನಕ್ಕೊಳಗಾಗಿರೋ ಆರೋಪಿ ಸಲ್ಮಾ ಭಾನುಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಹೆಚ್ಚಿನ ವಿಚಾರಣೆಗೆ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರಿಂದ ನ್ಯಾಯಾಲಯ ಕೂಡ ಮತ್ತೆ ಈಕೆಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ಕಸ್ಟಡಿಗೆ ನೀಡಿದೆ. ಪೊಲೀಸರು ಕೂಡ ಈ ಪ್ರಕರಣದಲ್ಲಿ ಪ್ರಭಾವಿಗಳು ಸೇರಿದಂತೆ ಇನ್ನು ಕೆಲವು ಹನಿಟ್ರ್ಯಾಪ್ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

 
 
 
 
 
 
 
 
 
 
 

Leave a Reply