ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರ ವಿನಂತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ ಇವರ ಆದೇಶದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುವಂತೆ ರಾಜ್ಯದ ರೋವರ್ಸ್ ರೇಂಜರ್ಸ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸೂಚಿಸಿತ್ತು.
ಅದರಂತೆಯೇ ಉಡುಪಿ ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಾದ ಕಾರ್ಕಳ ವಲಯ 2, ಉಡುಪಿಯ ವಲಯ 3, ಬ್ರಹ್ಮಾವರ ವಲಯ 2, ಕುಂದಾಪುರ ವಲಯ 1, ಬೈಂದೂರು ವಲಯ 2 ಹೀಗೆ ಒಟ್ಟು 23 ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಕೋವಿಡ್ 19 ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಕ್ಕೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ತಪಾಸಣೆ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಸ್ ಕುರಿತಂತೆ ಸಹಕರಿಸುವಲ್ಲಿ ಸ್ವಯಂ ಸೇವಕರಾಗಿ ಸಕ್ರಿಯವಾಗಿ ಪಾಲ್ಲೊಂಡರು.
ಈ ಸಂದರ್ಭದಲ್ಲಿ ರಾಜ್ಯಸಂಸ್ಥೆಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ , ಉಡುಪಿ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ.ಆಚಾರ್ಯ, ಜಿಲ್ಲಾ ಸ್ಕೌಟ್ ಆಯುಕ್ತ ಡಾ. ವಿಜಯೇಂದ್ರ ವಸಂತ್ , ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ, ಉಡುಪಿ ಜಿಲ್ಲಾ ವಿದ್ಯಾಂಗ ಇಲಾಖೆಯ ಡಿಡಿಪಿಐ ಶೇಷಶಯನ ಕಾರಿಂಜ, ಜಿಲ್ಲೆಯ ಐದು ಶಿಕ್ಷಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು, ಹಾಗೂ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂಸೇವಕ ವಿದ್ಯಾರ್ಥಿಗಳ ಸ್ವಯಂಸೇವೆಯ ಕರ್ತವ್ಯಪ್ರಜ್ಞೆಗೆ ಮೆಚ್ಚಿಗೆಯ ನುಡಿಗಳನ್ನು ಹಾಗೂ ಶುಭಾಶಯಗಳನ್ನು ಕೋರಿದ್ದಾರೆ.
ಈ ವಿದ್ಯಾರ್ಥಿಗಳು ಈ ಹಿಂದೆಯೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜೂನ್ ತಿಂಗಳಲ್ಲಿ ನಡೆದಾಗ ಆ ಸಂದರ್ಭದಲ್ಲೂ ಉಡುಪಿ ಜಿಲ್ಲೆಯ 53 ಪರೀಕ್ಷಾ ಕೇಂದ್ರಗಳಲ್ಲಿ ಸ್ವಯಂಸೇವಕ ರಾಗಿ ಕಾರ್ಯ ನಿರ್ವಹಿಸಿದ್ದರು. ಹಾಗೂ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲೂ ಈ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.