ಬ್ರಾಹ್ಮಣ ಮಹಾಸಭಾ ಪುತ್ತೂರು ಇವರ ವತಿಯಿಂದ ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಗವತೀ ಸಭಾಗ್ರಹದಲ್ಲಿ ತಿಂಗಳ ಕಾರ್ಯಕ್ರಮದ ಅಂಗವಾಗಿ ಯೋಗ ತಜ್ಞರು ಮತ್ತು ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಹಿರಿಯ ಯೋಗ ಗುರುಗಳಾದ ಶ್ರೀ ಪಿ.ವಿ. ಭಟ್ ಇವರಿಂದ ಯೋಗ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ಅವರು ಮಾತನಾಡಿ ದೈನಂದಿನ ಯಾಂತ್ರಿಕ ಬದುಕಿನಿಂದ ಜಡ ಕಟ್ಟಿದ ನಮ್ಮ ದೇಹ ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸಲು ಯೋಗ ಅತ್ಯಂತ ಸಹಕಾರಿಯಾಗಿದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನ ಶೈಲಿಯಾಗಿ ಅಳವಡಿಸಿಕೊಂಡು ನಿರಂತರ ಯೋಗಾಭ್ಯಾಸ ಮಾಡಿ ತಾವು ಆರೋಗ್ಯವಂತರಾಗುವುದಲ್ಲದೆ ಸ್ವಸ್ಥ, ಸದೃಢ ಸಮಾಜವನ್ನು ರೂಪಿಸಲು ಸಹಕಾರಿಯಾಗಬಹುದು ಎಂದು ಅಭಿಪ್ರಾಯ ಪಟ್ಟರು. ನಂತರ ಶ್ರೀ ಪಿ.ವಿ. ಭಟ್ ಅವರ ನಿರ್ದೇಶನದಲ್ಲಿ ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ಶಾಖೆಯ ಯೋಗ ಬಂಧುಗಳಿಂದ ಯೋಗಾಸನದ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ನಿರಂತರ ಯೋಗಾಭ್ಯಾಸದಿಂದ ಆಗುವ ಪ್ರಯೋಜನ ಮತ್ತು ಪರಿಣಾಮಗಳ ಬಗ್ಗೆ ವಿವರವಾಗಿ ಮನಮುಟ್ಟುವಂತೆ ತಿಳಿಸಲಾಯಿತು.
ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಗುರುಗಳಾದ ಪಿ.ವಿ.ಭಟ್ ಮತ್ತು ಯೋಗಾರ್ಥಿಗಳಾದ ಸುನೀತಾ ಚೈತನ್ಯ, ಅನುಪಮಾ, ಲಕ್ಷ್ಮೀಕುಮಾರಿ, ಶ್ರೀಲಕ್ಷ್ಮಿ, ಪುಷ್ಪಾಂಜಲಿ ಪ್ರಕಾಶ್, ಗಾಯತ್ರಿ ಭಟ್ ಇವರನ್ನು ಮಹಾಸವಾದ ವತಿಯಿಂದ ಗೌರವಿಸಲಾಯಿತು. ಹಿರಿಯ ಸದಸ್ಯರಾದ ಡಾ. ಶ್ರೀಪತಿ ರಾವ್ ಮತ್ತು ಕಾಂತಿ ರಾವ್ ದಂಪತಿಗಳನ್ನು ಗೌರವಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿದ ಸದಸ್ಯರನ್ನು ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳನ್ನು ಅಭಿನಂದಿಸಲಾಯಿತು.
ಪುತ್ತೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀಮತಿ ಶುಭಾ ಬಾಲ್ತಿಲ್ಲಾಯ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಮಂಜುಳಾ ವಿ. ಪ್ರಸಾದ್, ಆಪದ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಕಾರಂತ್ ವಂದನಾರ್ಪಣೆಗೈದರು