ಒಂದೇ ಸೂರಿನಡಿಯಲ್ಲಿ ಅನೇಕ ಅಂಚೆ ಸೇವೆಗಳನ್ನು ಏಕಕಾಲದಲ್ಲಿ ನೀಡುವ ವಿಶಿಷ್ಠ ಪರಿಕಲ್ಪನೆಯ ಅಂಚೆ ಜನ ಸಂಪರ್ಕ ಅಭಿಯಾನವು ನವೆಂಬರ್ 30, 2023 ರಂದು ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ನಡೆಯಿತು. ಆಧಾರ್ ನೋಂದಣಿ ಮತ್ತು ತಿದ್ದುಪಡಿ, ವಿವಿಧ ಹೊಸ ಖಾತೆಗಳ ತೆರೆಯುವಿಕೆ, ಅಫಘಾತ ವಿಮೆ, ಅಂಚೆ ಜೀವ ವಿಮೆ, ಡಿಜಿಟಲ್ ಬ್ಯಾಂಕಿಂಗ್, ಜೀವನ್ ಪ್ರಮಾಣ್ ಸೇರಿದಂತೆ ಸುಮಾರು 1353 ಕ್ಕೂ ಹೆಚ್ಚು ಜನ ಸಾರ್ವಜನಿಕರು ವಿವಿಧ ಅಂಚೆ ಸೇವೆಗಳನ್ನು ಪಡೆದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಪ್ರಸ್ತುತ ಕಾರ್ಪೋರೇಟರ್ ಆಗಿರುವ ಶ್ರೀ ದಿವಾಕರ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಶ್ರೀ ಅಬ್ದುಲ್ ಲತೀಫ್ ರವರು ಭಾಗವಹಿಸಿ ಅಂಚೆ ಇಲಾಖೆಯ ಸೇವೆಯನ್ನು ಪ್ರತೀ ನಾಗರೀಕರಿಗೂ ತಲುಪಿಸುವ ಅಗತ್ಯತೆ ಹಾಗೂ ಆ ನಿಟ್ಟಿನಲ್ಲಿ ಮಂಗಳೂರು ಪ್ರಧಾನ ಅಂಚೆ ಕಛೇರಿ ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು.
ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾಗಿರುವ ಶ್ರೀ. ಎಂ. ಸುಧಾಕರ ಮಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಅಧೀಕ್ಷಕರಾದ ಶ್ರೀ ದಿನೇಶ್ ಪಿ ಯವರು ಉಪಸ್ಥಿತರಿದ್ದರು. ಮಂಗಳೂರು ಪ್ರಧಾನ ಅಂಚೆ ಕಛೇರಿಯ ವರಿಷ್ಠ ಅಂಚೆ ಪಾಲಕರಾದ ಶ್ರೀ ಶ್ರೀನಾಥ್ ಬಸ್ರೂರು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡೆಪ್ಯುಟಿ ಪೋಸ್ಟ್ ಮಾಸ್ಟರ್ ಶ್ರೀಮತಿ ಸೀತಮ್ಮ ರವರು ಧನ್ಯವಾದ ಅರ್ಪಿಸಿದರು. ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಶ್ರೀ ಸುಭಾಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.