ಸರಕಾರಿ ನೌಕರರು ಕಾನೂನಿಗೆ ವಿರುದ್ಧವಾಗಿರುವ ಕೆಲಸ ಮಾಡಿದರೆ ಅದು ಭ್ರಷ್ಟಾಚಾರದ ಒಂದು ಭಾಗವಾಗಿ ಅಪರಾಧವೆನಿಸುತ್ತದೆ. ಅಲ್ಲದೆ ಅವರು ಕಾಲ ಕಾಲಕ್ಕೆ ಮಾಡಲೇ ಬೇಕಾದ ಕರ್ತವ್ಯ ನಿರ್ವಹಿಸದಿದ್ದಲ್ಲಿ ಅದು ಕೂಡಾ ಶಿಕ್ಷಾರ್ಹ ಅಪರಾಧವೆಂದಿನಿಸುತ್ತದೆ.
ಹಾಗಾಗಿ ಮಾಡಬಾರದ ಕೆಲಸಗಳನ್ನು ಮಾಡದೆ, ಮಾಡಬೇಕಾದ ಕೆಲಸಗಳನ್ನು ಮಾಡಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸರಕಾರದಿಂದ ವೇತನ ಪಡೆಯುವ ಸರಕಾರಿ ನೌಕರರು ಕಾನೂನಿಗೆ ಬದ್ದರಾಗಿ ಕೆಲಸ ನಿರ್ವಹಿಸಬೇಕು ಎಂದು ಮಣಿಪಾಲ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಮಂಜುನಾಥ್ ಅಭಿಪ್ರಾಯ ಪಟ್ಟರು.
ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗದಿಂದ ಅಂಚೆ ಉಡುಪಿ ಪ್ರಧಾನ ಅಂಚೆ ಕಚೇರಿಲ್ಲಿ ವಿಚಕ್ಷಣಾ ಸಪ್ತಾಹದ ಅಂಗವಾಗಿ ಆಯೋಜಿ ಸಿದ್ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಸರಕಾರಿ ನೌಕರರು ಕಾಲ ಕಾಲಕ್ಕೆ ತಮ್ಮ ಆಸ್ತಿ ವಿವರಣೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಾಗಿದ್ದು ಸುಳ್ಳು ಮಾಹಿತಿ ನೀಡುವುದು, ಇಲ್ಲವೇ ಮಾಹಿತಿಯ ವಿವರಗಳನ್ನು ತಿರುಚುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.
ಕೇಂದ್ರ ವಿಚಕ್ಷಣಾ ಆಯೋಗದ ವತಿಯಿಂದ ಅಕ್ಟೋಬರ್ 26 ರಿಂದ ನವೆಂಬರ್ 1 ರವರೆಗೆ ವಿಚಕ್ಷಣಾ ಸಪ್ತಾಹ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು ಆ ಸಮಯದಲ್ಲಿ ಇಲಾಖಾ ನೌಕರರಿಗೆ ಹಾಗು ಸಾರ್ವಜನಿಕರಿಗೆ ಅರಿವು ಮೂಡಿಸಲೋಸುಗ ಹತ್ತು ಹಲವು ಸ್ಪರ್ಧೆಗಳು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಉಡುಪಿ ಅಂಚೆ ವಿಭಾಗದ ವತಿಯಿಂದ ಸ್ವತಂತ್ರ ಭಾರತ- ಎಪ್ಪತ್ತೈದು, ಪ್ರಾಮಾಣಿಕತೆ ಯೊಂದಿಗೆ ಆತ್ಮ ನಿರ್ಭರತೆ ಈ ವಿಷಯವಾಗಿ ಪ್ರಬಂಧ ಸ್ಪರ್ಧೆ, ಇಲಾಖಾ ನೌಕರರಿಗಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಿದ್ದರು.
ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರುಪ್ರಸಾದ್ ಸ್ವಾಗತಿಸಿದರು. ಅಂಚೆ ಇಲಾಖಾ ಉದ್ಯೋಗಿ ಆಶಾಲತಾ ಪ್ರಸ್ತಾವನೆಯ ಮಾತುಗಳನ್ನಾಡಿದರು. ಅರ್ಚನಾ ಜಂಗಮ ಪ್ರಾರ್ಥಿಸಿದರು. ಮಣಿಪಾಲ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಜಶೇಖರ್ ಹಾಗು ಪ್ರೊಬೆಷನರಿ ಉಪ ನಿರೀಕ್ಷಕ ವಿನಯ್ ಹಾಗು ಉಡುಪಿ ಅಂಚೆ ಉತ್ತರ ವಿಭಾಗದ ಅಂಚೆ ನಿರೀಕ್ಷ ಕರಾದ ಮಾಧವ ಟಿ ವಿ ಉಪಸ್ಥಿತಿತರಿದ್ದರು.
ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿಯವರು ಧನ್ಯವಾದವಿತ್ತರು. ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿದರು.