ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಈಸ್ಟರ್‌ ಜಾಗರಣೆ

ಉಡುಪಿ: ಯೇಸು ಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ಬೈಬಲ್‌ನ ನಂಬಿಕೆಯಂತೆ ಯೇಸು ಕ್ರಿಸ್ತರು ಶಿಲುಬೆಗೇರಿದ ಮೂರನೇ ದಿನ ಅಂದರೆ ಈಸ್ಟರ್ ಸಂಡೆಯಂದು ಪುನರುತ್ಥಾನರಾದರೆಂಬ ವಿಶ್ವಾಸದೊಂದಿಗೆ ವಿಶ್ವದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ಈಸ್ಟರ್ ಜಾಗರಣೆ ಬಲಿಪೂಜೆಗಳು ಜರುಗಿದವು. ಕ್ರೈಸ್ತ ಭಾಂಧವರು ಹೊಸ ಬಟ್ಟೆ ತೊಟ್ಟು ನಗರದ ಚರ್ಚ್‌ಗಳಲ್ಲಿ ನಡೆದ ಈಸ್ಟರ್ ವಿಜಿಲ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಕಾರ್ಯಕ್ರಮ ಶನಿವಾರ ರಾತ್ರಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ್) ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ| ಜೋಯ್‌ ಅಂದ್ರಾದೆ, ಪಿಲಾರ್‌ ಸಭೆಯ ಧರ್ಮಗುರು ವಂ | ನಿತೇಶ್‌ ಡಿʼಸೋಜಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಪ್ರಮುಖ ಚರ್ಚುಗಳಾದ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ | ಚಾರ್ಲ್ಸ್‌ ಮಿನೇಜಸ್‌, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ |ಡೆನಿಸ್‌ ಡೆಸಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ | ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕಾದಲ್ಲಿ ವಂ | ಆಲ್ಬನ್‌ ಡಿಸೋಜಾರ ನೇತೃತ್ವದಲ್ಲಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ್) ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

ಬಲಿಪೂಜೆ ಮುನ್ನ ಯೇಸು ಸಾವೆಂಬ ಕತ್ತಲೆಯಿಂದ ಹೊರಬಂದ ದ್ಯೋತಕವಾಗಿ ಹೊಸ ಬೆಂಕಿಯ ಆಶೀರ್ವಚನವನ್ನು ಧರ್ಮಗುರುಗಳು ನೇರವೇರಿಸಿ ಈಸ್ಟರ್ ಹಬ್ಬದ ಕ್ಯಾಂಡಲನ್ನು ಉರಿಸಿ ಪ್ರಾರ್ಥನಾ ವಿಧಿಗಳಿಗೆ ಚಾಲನೆ ನೀಡಿದರು. ಆಶಿರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲನ್ನು ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚ್‌ನಲ್ಲಿ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು ಬಳಿಕ ಹಳೆ ಒಡಬಂಡಿಕೆಯ ದೇವರ ವಾಕ್ಯವನ್ನು ಪಠಿಸಿದ ಬಳಿಕ ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನಡೆಸಿ, ಭಕ್ತಾದಿಗಳ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿದರು. ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಧರ್ಮಗುರುಗಳು ಭಕ್ತಾದಿಗಳಿಗೆ ವಿವರಿಸಿದರು.

ಈ ವೇಳೆ ಈಸ್ಟರ್‌ ಸಂದೇಶ ನೀಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್‌ ಲೋಬೊ ಯೇಸುವಿನ ಪುನರುತ್ಥಾನ ಪ್ರಸ್ತುತ ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಅಸೂಯೆ, ಕ್ರೋಧ ಹಾಗೂ ತಾರತಮ್ಯತೆಯ ಕೆಡುಕುಗಳು ನಮ್ಮಿಂದ ದೂರವಾಗಿ, ಸಕಲ ಧರ್ಮಗಳ ಜನರು ಸಹೋದರ-ಸಹೋದರಿಯರಾಗಿ ಜೀವಿಸಲು ಸಹಕಾರಿಯಾಗಲಿ. ಶಿಲುಬೆಯ ಮೇಲೆ ಮೃತಪಟ್ಟ ಯೇಸುಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣವು ಅವರನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ಮೇಲೆ ದಿಗ್ವಿಜಯವನ್ನು ಸಾಧಿಸಿದರು. ಈ ಮೂಲಕ ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ. ಕ್ಷಣಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ ಎಂದರು.

ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 45 ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನಗೊಳ್ಳವುದರ ಮೂಲಕ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಕೂಡ ಕ್ರಿಸ್‌ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.

 
 
 
 
 
 
 
 
 
 
 

Leave a Reply