ಅನವಶ್ಯಕವಾಗಿ ಏಕೆ ಶತ್ರುತ್ವ ಬೆಳೆಸುತ್ತಿದ್ದಾರೆ? : ‘ನನಗೆ ಯಾವ ಸಂಕೋಚ; ಸಂದೇಹವೂ ಇಲ್ಲ. ನಾನು ಹಿಂದೆ ಹೇಗಿದ್ದೇನೋ ಹಾಗೆಯೇ ಇದ್ದೇನೆ. ಬೆಳಿಗ್ಗೆಯಿಂದ ಸಂಜೆವರೆಗೆ ಅನೇಕ ಕಾರ್ಯಗಳಲ್ಲಿ ತೊಡಗಿ ರುವುದರಿಂದ ನನಗೆ ಮೈಲಿಗೆ ಅಂಟುವುದಿಲ್ಲ. ಅನವಶ್ಯಕವಾಗಿ ಏಕೆ ಶತ್ರುತ್ವ ಬೆಳೆಸುತ್ತಿದ್ದಾರೆ ಎಂಬುದಕ್ಕೆ ಕಾರಣ ಏನು ತಿಳಿಯುತ್ತಿಲ್ಲ. ಸಂಭಾಷಣೆ ಪ್ರಾರಂಭ ಆಗಬಾರದು ಎಂಬ ಕಾರಣಕ್ಕೆ ನಾನು ಈ ವರೆಗೆ ಮಾತನಾಡಲಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಇಂದು ಬೆಳಿಗ್ಗೆಯೂ ಆರು ಜನ ಬಂದು, ‘ನಿಮಗೇ ಹೀಗಾದರೆ ಹೇಗೆ ತಡೆದುಕೊಳ್ಳುವುದು’ ಎಂದು ಕಣ್ಣೀರು ಹಾಕಿ ಹೋದರು. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯ ಇಲ್ಲ. ಇದರಿಂದ ಅವರಿಗೆ ಸುಮ್ಮನೆ ಪ್ರಚಾರ. ನನ್ನ ಆತ್ಮ ಮತ್ತು ವ್ಯವಹಾರ ಶುದ್ಧವಾಗಿದೆ. ಯಾವುದಕ್ಕೂ ವಿಚಲಿತನಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರ್ಯಕ್ರಮಗಳನ್ನೂ ಧರ್ಮಸ್ಥಳದವರು ಚೆನ್ನಾಗಿ ಮಾಡುತ್ತಾರೆ ಎಂಬ ಹೆಸರು ಇದೆ.
ಅದು ನಿಮ್ಮಿಂದಾಗಿ ಬಂದಿರುವುದು. 1.5 ಕೋಟಿ ಮಂದಿಗೆ ವಿಮೆ ಮಾಡಿಸಿದ್ದು, 87 ಲಕ್ಷ ಮಂದಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿದ್ದು ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆಯವರು. ನೀವು ಮಾಡುವ ಸತ್ಕಾರ್ಯಗಳಿಗಾಗಿ ಕೆಲವರು ನನ್ನನ್ನು ದ್ವೇಷ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.
ನೈತಿಕ ಶಕ್ತಿಗಿಂತ ದೊಡ್ಡ ಶಕ್ತಿ ಯಾವುದೂ ಅಲ್ಲ: ‘ನಾವು ಹೋಗುವ ದಾರಿಯನ್ನು ಬಿಟ್ಟು ಅಚೀಚೆ ನೋಡುವುದಿಲ್ಲ. ದಾರಿ ಮಧ್ಯೆ ಮೋಡ ಬಂದಿದೆ. ಅದನ್ನು ದೇವರೇ ತೆಗೆಯಬೇಕು. ಯಾವ ಅನ್ಯಾಯಕ್ಕೂ ಸಹಾಯ ಮಾಡುವವ ನಾನಲ್ಲ. ಅಪಪ್ರಚಾರ ಮಾಡುವವರಿಗೆ ಏನಾದರೂ ಮಾಡಲಿಕ್ಕೆ ಅಭಿಮಾನಿಗಳು ಸಿದ್ಧರಿದ್ದಾರೆ. ಅಭಿಮಾನಿಗಳಿಗೆ ನಾನು ಹೇಳುವುದಿಷ್ಟೇ–ನೀವೂ ಏನೂ ಮಾಡಬೇಡಿ. ನೈತಿಕ ಶಕ್ತಿಗಿಂತ ದೊಡ್ಡ ಶಕ್ತಿ ಯಾವುದೂ ಅಲ್ಲ’ ಎಂದರು.